ಕುಮಾರಸ್ವಾಮಿ ವಿರುದ್ಧ ಲಂಚದಾರೋಪ: ಸ್ಪೀಕರ್ಗೆ ಸಿಡಿ ನೀಡಿದ ಬಿಜೆಪಿ
ಬೆಂಗಳೂರು, ಫೆಬ್ರವರಿ 11: ಸದನದಲ್ಲಿ ಆಪರೇಷನ್ ಕಮಲದ ಆಡಿಯೋ ಕ್ಲಿಪ್ ಕುರಿತು ಉಭಯ ಪಕ್ಷಗಳ ನಡುವೆ ಕಾವೇರಿದ ಚರ್ಚೆ ನಡೆದ ಬೆನ್ನಲ್ಲೆ ಇಂದು ಭೋಜನ ವಿರಾಮದ ನಂತರ ಬಿಜೆಪಿಯು ಸಿಡಿಯೊಂದನ್ನು ಸದನದಲ್ಲಿ ಪ್ರದರ್ಶಿಸಿತು.
ಭೋಜನ ವಿರಾಮದ ನಂತರ ಕಲಾಪ ಪ್ರಾರಂಭವಾದಾಗ ಆಡಿಯೋ ಕ್ಲಿಪ್ ಬಗ್ಗೆ ಬಿರುಸಿನ ಚರ್ಚೆ ನಡೆಯುತ್ತಿತ್ತು. ಆಗ ಎದ್ದುನಿಂತ ಬಿಜೆಪಿಯ ರೇಣುಕಾಚಾರ್ಯ ಅವರು ಸಿಡಿ ಒಂದನ್ನು ಪ್ರದರ್ಶಿಸಿ 'ಇದರ ಬಗ್ಗೆಯೂ ತನಿಖೆ ನಡೆಯಲಿ' ಎಂದು ದೊಡ್ಡ ಧ್ವನಿಯಲ್ಲಿ ಕೂಗಿದರು.
'ನಲವತ್ತು ಕೋಟಿ ಲಂಚದ ಕತೆ ಇದರಲ್ಲಿದೆ, ಸಾಕ್ಷಿಯ ಸಿಡಿ ಇದು, ಇದರ ಬಗ್ಗೆಯೂ ತನಿಖೆ ನಡೆಯಲಿ' ಎಂದು ರೇಣುಕಾಚಾರ್ಯ ಕೂಗಿದರು. ಆಗ ಎದ್ದ ಯು.ಟಿ.ಖಾದರ್ ಹಾಗೂ ಡಿ.ಕೆ.ಶಿವಕುಮಾರ್ ಅವರು ಅದನ್ನು ಕೈಯಲ್ಲಿ ಯಾಕೆ ಹಿಡಿದುಕೊಂಡಿದ್ದೀರಾ, ಸ್ಪೀಕರ್ ಕೈಗೆ ಕೊಡಿ, ಲಿಖಿತ ದೂರಿನ ಸಮೇತ ಕೊಡಿ ನಮಗೇನೂ ಅಭ್ಯಂತರವಿಲ್ಲ ಎಂದರು.

ಯಡಿಯೂರಪ್ಪ ಅವರು ಸಹ ರೇಣುಕಾಚಾರ್ಯ ಅವರಿಗೆ ಸಿಡಿಯನ್ನು ಸಭಾಧ್ಯಕ್ಷರಿಗೆ ನೀಡುವಂತೆ ಸಂಜ್ಞೆ ಮಾಡಿದರು, ರೇಣುಕಾಚಾರ್ಯ ಸಹ ಅಂತೆಯೇ ಮಾಡಿದರು.
ಆದರೆ ಕಲಾಪ ನಾಳೆಗೆ ಮುಂದೂಡಿದ ನಂತರ ಸದನದಿಂದ ಹೊರಬಂದ ರೇಣುಕಾಚಾರ್ಯ ಅವರು, ಸಿಡಿಯು ಕುಮಾರಸ್ವಾಮಿ ಅವರ ಲಂಚಾವತಾರಕ್ಕೆ ಸಂಬಂಧಿಸಿದ್ದು, ವ್ಯಕ್ತಿಯೊಬ್ಬರನ್ನು ಎಂಎಲ್ಸಿ ಮಾಡಲು ಈ ಹಿಂದೆ ಅವರು ಕೋಟ್ಯಂತರ ಹಣ ಕೇಳಿದ್ದರು ಅದರ ವಿಡಿಯೋ ಆ ಸಿಡಿಯಲ್ಲಿದೆ ಎಂದು ಹೇಳಿದರು.












Click it and Unblock the Notifications