ಆರ್ ಆರ್ ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಎದುರಾಯ್ತು ಮತ್ತೊಂದು ಸಂಕಷ್ಟ!
ಬೆಂಗಳೂರು, ಅ. 14: ಹಾಗೂ ಹೀಗೂ ಬಿಜೆಪಿ ಟಿಕೆಟ್ ಪಡೆದುಕೊಂಡ ಮುನಿರತ್ನ ಅವರಿಗೆ ಹೊಸ ಸಮಸ್ಯೆ ಶುರುವಾಗಿದೆ. ಆರ್ ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮುನಿರತ್ನ ಅವರು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ಬಳಿಕ ಹಳೆಯ ಸಮಸ್ಯೆ ಅವರ ಬೆನ್ನು ಬಿದ್ದಿದೆ. ಇಲ್ಲಿಯವರೆಗೆ ಟಿಕೆಟ್ ಕೊಡಲು ಬಿಜೆಪಿ ಹೈಕಮಾಂಡ್ ಸತಾಯಿಸಿತ್ತು. ಇದೀಗ ಹೊಸ ಸಮಸ್ಯೆ ಮುನಿರತ್ನ ಅವರಿಗೆ ಎದುರಾಗಿದೆ. ಈ ಸವಾಲು ನಿರೀಕ್ಷಿತವೇ ಆದರೂ ಚುನಾವಣಾ ಫಲಿತಾಂಶದ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವ ಮೂಲಕ ಬಿಜೆಪಿ ಸೇರಿ ಈಗ ಉಪ ಚುನಾವಣೆಯನ್ನು ಮುನಿರತ್ನ ಅವರು ಎದುರಿಸುತ್ತಿದ್ದಾರೆ. ಅಕ್ರಮ ಮತದಾನದ ಪ್ರಕರಣ ಕುರಿತಂತೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ತುಳಸಿ ಮುನಿರಾಜು ಅವರು ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಚುನಾವಣೆ ನಡೆಸಬಹುದು ಎಂದು ನಿನ್ನೆ ತೀರ್ಪು ನೀಡಿದೆ. ಕೋರ್ಟ್ ತೀರ್ಪಿನಿಂದ ಸಮಾಧಾನ ಗೊಂಡಿದ್ದ ಮುನಿರತ್ನ ಅವರಿಗೆ ಈಗ ಹೊಸ ಸಂಕ್ಷಟ ಎದುರಾಗಿದೆ. ಏನದು? ಮುಂದೆ ಓದಿ!
ಮುನಿರತ್ನಗೆ ಬಿಜೆಪಿ ಟಿಕೆಟ್
ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ಬಳಿಕ ಬಿಜೆಪಿ ಹೈಕಮಾಂಡ್ ಮಾಜಿ ಶಾಸಕ ಮುನಿರತ್ನ ಅವರಿಗೆ ಟಿಕೆಟ್ ಕೊಟ್ಟಿದೆ. ನಿನ್ನೆ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಂದ ಬಿ ಫಾರಂ ನಡೆದುಕೊಂಡಿದ್ದ ಮುನಿರತ್ನ ಅವರು ಇವತ್ತು ಆರ್ ಆರ್ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರವನ್ನೂ ಸಲ್ಲಿಸಿದ್ದಾರೆ.
ಆದರೆ ಮುನಿರತ್ನ ಅವರಿಗೆ ಬಿ ಫಾರಂ ಕೊಟ್ಟ ಬಳಿಕ ಬಿಜೆಪಿಯಲ್ಲಿ ಹಲವು ಬೆಳವಣಿಗೆಗಳಾಗುತ್ತಿವೆ.
ಯುವ ಮೋರ್ಚಾ ಅಧ್ಯಕ್ಷ ರಾಜೀನಾಮೆ
ಮುನಿರತ್ನ ಅವರನ್ನು ಬಿಜೆಪಿ ಅಭ್ಯರ್ಥಿ ಎಂದು ಘೋಷಣೆ ಮಾಡುತ್ತಿದ್ದಂತೆಯೆ ಆರ್ ಆರ್ ನಗರದಲ್ಲಿ ತುಳಸಿ ಮುನಿರಾಜು ಅವರ ಬೆಂಬಲಿಗರು ಪಕ್ಷದ ಸ್ಥಾನಗಳಿಗೆ ರಾಜೀನಾಮೆ ಕೊಡುತ್ತಿದ್ದಾರೆ. ಈಗಾಗಲೇ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಸಂದೇಶ್ ಬಂಡೆಪ್ಪ ಪಕ್ಷದಲ್ಲಿನ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.
ರಾಜೀನಾಮೆ ಪತ್ರವನ್ನು ಆರ್ಆರ್ ನಗರ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಶಿವಣ್ಣಗೌಡ ಅವರಿಗೆ ರಾಜೀನಾಮೆ ಪತ್ರವನ್ನು ಸಂದೇಶ್ ಬಂಡೆಪ್ಪ ಕಳುಹಿಸಿದ್ದಾರೆ. ಕಳೆದ 12 ವರ್ಷಗಳಿಂದ ನಾನು ಪಕ್ಷಕ್ಕಾಗಿ ದುಡಿದ್ದೇನೆ. ಪಕ್ಷದಲ್ಲಿ ನಿಷ್ಠಾವಂತರಾಗಿದ್ದ ತುಳಸಿ ಮುನಿರಾಜುಗೌಡರಿಗೆ ಟಿಕೆಟ್ ಸಿಗದ ಕಾರಣ ನಾನು ಯುವ ಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿಯೂ ಅಭಿಯಾನ
ಪಕ್ಷದ ಆರ್ ಆರ್ ನಗರ ಘಟಕದಲ್ಲಿ ರಾಜೀನಾಮೆ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿಯೂ ಬಿಜೆಪಿ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿ ಮುಇರತ್ನ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪಕ್ಷದ ಹಿರಿಯ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಡಿಸಿರುವ ಕಾರ್ಯಕರ್ತರು, ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ತುಳಸಿ ಮುನಿರಾಜು ಅವರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದ್ದಾರೆ. ಅಧಿಕಾರದ ಆಸೆಗೆ ತತ್ವಸಿದ್ಧಾಂತ ಮಾರಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರೂದ್ಧವೂ ಬಿಜೆಪಿ ಕಾರ್ತಕರ್ತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Recommended Video
ಅಸಮಾಧಾನದ ಬಗ್ಗೆ ಮುನಿರತ್ನ ಪ್ರತಿಕ್ರಿಯೆ
ತುಳಸಿ ಮುನಿರಾಜು ಅವರ ಕೆಲವು ಬೆಂಬಲಿಗರು ಯುವ ಮೋರ್ಚಾಕ್ಕೆ ರಾಜೀನಾಮೆ ಕೊಟ್ಟಿರುವುದು ಗೊತ್ತಾಯ್ತು. ನಾನು ಪಕ್ಷ ಬಿಟ್ಟು ಬಂದಾಗ ಎಲ್ಲ ಕಾರ್ಪೋರೇಟರ್ಗಳು ನನ್ನ ಜತೆ ಗಟ್ಟಿಯಾಗಿ ನಿಂತರು. ಹಾಗೆಯೆ ಮುನಿರಾಜು ಅವರ ಬೆಂಬಲಿಗರು ಅವರ ಮೇಲೆ ಅಭಿಮಾನ ಇಟ್ಟುಕೊಂಡಿರುವುದು ಸಹಜ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ಒಂದು ಮನೆ ಇದ್ದಂತೆ. ಕುಳಿತು ಮಾತನಾಡೋಣ. ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಬಗೆ ಹರಿಸಿಕೊಳ್ಳೋಣ ಎಂದು ತುಳಸಿ ಮುನಿರಾಜು ಅವರ ಬೆಂಬಲಿಗರಲ್ಲಿ ಮುನಿರತ್ನ ಅವರು ಮನವಿ ಮಾಡಿಕೊಂಡಿದ್ದಾರೆ.