ಬೆಂಗಳೂರಲ್ಲಿ 90ವರ್ಷದಲ್ಲೇ ಹೆಚ್ಚು ಹಾನಿ:24/7 ಕಾರ್ಯಾಚರಣೆ-ಸಿಎಂ
ಬೆಂಗಳೂರು, ಸೆಪ್ಟೆಂಬರ್ 06: ಕರ್ನಾಟಕದಾದ್ಯಂತ ಮಳೆ ಸುರಿಯುತ್ತಿದೆ. ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಕಳೆದ 90 ವರ್ಷಗಳಲ್ಲಿ ಆಗದಷ್ಟು ಅತಿವೃಷ್ಟಿ ಈ ವರ್ಷವಾಗಿದೆ. ಇಂತಹ ಸವಾಲಿನ ಪರಿಸ್ಥಿತಿಯಲ್ಲೂ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಂಗಳವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, "ಸತತವಾಗಿ ಮಳೆಯಾಗುತ್ತಿರುವುದರಿಂದ ಎಲ್ಲಾ ಕೆರೆಗಳು ತುಂಬಿದ್ದು ಕೆಲವು ಕೆರೆಗಳು ಕೋಡಿ ಹರಿದಿದೆ. ಕೆಲವು ಕೆರೆಗಳು ಬಿರುಕು ಬಿಟ್ಟಿವೆ. ಇಂತಹ ಸನ್ನಿವೇಶದಲ್ಲೂ ಸಹ 24/7 ಕಾರ್ಯಾಚರಣೆ ಮಾಡಲಾಗುತ್ತಿದೆ. ಆದರೆ ಇಡೀ ಬೆಂಗಳೂರು ಜಲಾವೃತವಾಗಿದೆ ಎಂದು ಬಿಂಬಿಸಲಾಗುತ್ತಿದೆ," ಎಂದರು.
ಎರಡು ವಲಯಗಳು ಅದರಲ್ಲೂ ಮಹದೇವಪುರ ವಲಯ ಹೆಚ್ಚು ಸಮಸ್ಯೆಗೆ ಒಳಗಾಗಿದೆ. ಈ ಪ್ರದೇಶದಲ್ಲಿ ಒಟ್ಟು 69 ಕೆರೆಗಳು ಇವೆ. ಎಲ್ಲವೂ ಕೋಡಿ ಹರಿದಿವೆ. ಎಲ್ಲಾ ಕಟ್ಟಡಗಳು ಕೆಳ ಮಟ್ಟದಲ್ಲಿವೆ ಹಾಗೂ ಒತ್ತುವರಿ ಕೂಡ ಆಗಿವೆ ಎಂಬುದು ಗಮನಕ್ಕೆ ಬಂದಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸುತ್ತದೆ. ನಮ್ಮ ಅಧಿಕಾರಿಗಳು, ಇಂಜಿನಿಯರ್ ಗಳು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತಂಡಗಳು ದಿನ 24 ಗಂಟೆಯು ಕಾರ್ಯ ನಿರ್ವಹಿಸುತ್ತದೆ. ಸಾಕಷ್ಟು ಒತ್ತುವರಿಯನ್ನು ನಾವು ತೆರವುಗೊಳಿಸಿದ್ದು, ತೆರವು ಕಾರ್ಯ ಮುಂದುವರಿದಿದೆ ಎಂದು ಅವರು ತಿಳಿಸಿದರು.
ಕೆರೆಗಳಿಗೆ ಸ್ಲೂಯಿಸ್ ಗೇಟ್ ಅಳವಡಿಕೆ
ಕೆರೆಗಳ ನಿರ್ವಹಣೆಗೆ ಸ್ಲೂಯಿಸ್ ಗೇಟ್ ಗಳನ್ನು ಅಳವಡಿಸಲಾಗುತ್ತಿದೆ. ಎಲ್ಲಾ ಅಧಿಕಾರಿಗಳು ಸ್ಥಳದಲ್ಲಿಯೇ ಮೊಕ್ಕಾಂ ಹೂಡುವಂತೆ ಸೂಚಿಸಿದ್ದು, ಕರೆ ಬಂದ ಕೂಡಲೇ ಸಮಸ್ಯೆಯನ್ನು ಬಗೆಹರಿಸಲು ತಿಳಿಸಲಾಗಿದೆ. ನೀರು ತೆಗೆಯುವ ಕೆಲಸ ಜಾರಿಯಲ್ಲಿದೆ. ಒಂದೆರಡು ಸ್ಥಳಗಳಲ್ಲಿ ಸಮಸ್ಯೆ ಬಿಟ್ಟರೆ ಉಳಿಡೆದೆ ನೀರು ಹೊರತೆಗೆಯಲಾಗಿದೆ. ಮಳೆ ನಿರಂತರವಾಗಿ ಸುರಿ ಯುತ್ತಿರುವುದರಿಂದ ಕೆಲಸ ವಿಳಂಬವಾಗುತ್ತಿದೆ ಎಂದು ಅವರು ವಿವರಿಸಿದರು.
ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ
ಭಾರಿ ಮಳೆಗೆ ಜಲಾವೃತವಾಗಿದ್ದ ಬೆಂಗಳೂರಿಗೆ ನೀರು ಸರಬರಾಜು ಮಾಡುವ ತೊರೆಕಾಡನಹಳ್ಳಿ (ಟಿಕೆ ಹಳ್ಳಿ) ನೀರು ಸರಬರಾಜು ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಭೀಮೇಶ್ವರ ನದಿ ಉಕ್ಕಿ ಹರಿದು ಪಂಪ್ ಹೌಸ್ಗೆ ನುಗ್ಗಿತ್ತು. 2 ಪಂಪ್ ಹೌಸ್ ಗಳಿಗೆ ಹಾನಿಯಾಗಿದೆ. ಒಂದು ಪಂಪ್ ಹೌಸ್ ನಲ್ಲಿದ್ದ ನೀರು ಹೊರಗೆ ಹಾಕಲಾಗಿದೆ. ಮಂಗಳವಾರ ರಾತ್ರಿಯೊಳಗೆ 230 ಎಂಎಲ್ಡಿ (ದಶಲಕ್ಷ ಲೀಟರ್) ನೀರು ಸರಬರಾಜು ಪ್ರಾರಂಭವಾಗಲಿದೆ.
ಟ್ಯಾಂಕರ್ ಮೂಲಕ ನೀರು ಪೂರೈಕೆ ವ್ಯವಸ್ಥೆ
ಇನ್ನೂ 550 ಎಂಎಲ್ಡಿ ನೀರು ಸರಬರಾಜು ಮಾಡುವ ಪಂಪ್ ಹೌಸ್ ನೀರನ್ನು ತೆಗೆಯಲು ಎರಡು ದಿನಗಳು ಹಿಡಿಯುತ್ತದೆ. ಈ ಮಧ್ಯೆ ಜಲಮಂಡಳಿಯ 8,000 ಹಾಗೂ ಬಿಬಿಎಂಪಿ ವ್ಯಾಪ್ತಿಯ 4,000 ಕೊಳವೆಬಾವಿಗಳನ್ನು ಸಕ್ರಿಯ ಗೊಳಿಸಲಾಗುವುದು ಹಾಗೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ವ್ಯವಸ್ಥೆ ಕೈಗೊಳ್ಳಲಾಗುವುದು. ಇನ್ನೆರೆಡು ದಿನಗಳ ಕಾಲ ಸಾರ್ವಜನಿಕರು ಸಹಕರಿಸಬೇಕೆಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.
ಕೇಂದ್ರದಿಂದ ಸೂಕ್ತ ಪರಿಹಾರ
ಬೆಂಗಳೂರು ಸೇರಿದಂತೆ ಸಾಕಷ್ಟು ಜಿಲ್ಲೆಗಳಲ್ಲಿ ಭಾರಿ ಮಳೆ ಆಗಿದೆ. ಕೇಂದ್ರ ತಜ್ಞರ ಅಧ್ಯಯನ ತಂಡ ಇಂದು ಭೇಟಿ ನೀಡಲಿದ್ದಾರೆ. ರಾಜ್ಯ ಹಾಗೂ ಬೆಂಗಳೂರಿನ ವಿಷಯಗಳ ಬಗ್ಗೆ ಚರ್ಚೆ ಮಾಡಲಾಗುವುದು. ಬೆಳೆ, ಮನೆಗಳು ಹಾಗೂ ಮೂಲಸೌಕರ್ಯ ಹಾನಿಯ ಬಗ್ಗೆ ಮಾಹಿತಿ ನೀಡಲಾಗುವುದು. ನಂತರ ಮಳೆ ಹಾನಿ, ಅತಿವೃಷ್ಠಿ ಸಂಬಂಧ ಕೇಂದ್ರ ಸರ್ಕಾರ ಸೂಕ್ತ ಪರಿಹಾರವನ್ನು ಒದಗಿಸಲಿದೆ ಎಂದು ಭರವಸೆ ನೀಡಿದರು.
ಇನ್ನೂ ಪಿ.ಎಸ್.ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಪ್ರಕರಣ ಸಂಬಂಧ ಅಗತ್ಯವಿದ್ದಲ್ಲಿ ಸೂಕ್ತ ತನಿಖೆ ಮುಂದುವರಿಸಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.