ಅರಕಲಗೂಡಿನಲ್ಲಿ ಹಾಲು ಕರೆಯುವ ಸ್ಪರ್ಧೆ: ವಿಜೇತರಿಗೆ ಲಕ್ಷ ಬಹುಮಾನ
ಬೆಂಗಳೂರು, ಡಿಸೆಂಬರ್ 23 : ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಜನವರಿ 4 ರಿಂದ 6 ರವರೆಗೆ ರಾಜ್ಯ ಮಟ್ಟದ ಪಶು ಮೇಳವನ್ನು ಹಾಸನ ಜಿಲ್ಲೆಯ ಅರಕಲಗೋಡಿನಲ್ಲಿ ಹಮ್ಮಿಕೊಂಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಳವನ್ನು ಉದ್ಫಾಟಿಸಲಿದ್ದಾರೆ ಎಂದು ಸಚಿವ ಎ.ಮಂಜು ತಿಳಿಸಿದರು.
ವಿಧಾನಸೌಧದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಪಶುಸಂಗೋಪನಾ ಇಲಾಖೆ ವತಿಯಿಂದ ಈ ಮೇಳವನ್ನು ಆಯೋಜಿಸಲಾಗಿದೆ. ರಾಜ್ಯದ ಮತ್ತು ಹೊರರಾಜ್ಯದ ವಿವಿಧ ಜಾನುವಾರು ತಳಿಗಳು, ಕೋಳಿ ತಳಿಗಳು ಹಾಗೂ ರೇಷ್ಮೆ ಸಾಕಾಣಿಕೆ ಬಗ್ಗೆ ಪ್ರದರ್ಶನ ಮತ್ತು ಮಾಹಿತಿ ನೀಡಲಾಗುವುದು ಎಂದರು.

ಪಶುಮೇಳದ ವಿಶೇಷ ಆಕರ್ಷಣೆಯಾಗಿ ಕಂಬಳ ಕೋಣಗಳ ಪ್ರದರ್ಶನ ಏರ್ಪಡಿಸಲಾಗಿದೆ. ಪಶುಮೇಳದಲ್ಲಿ ಕರುಗಳ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ದೇಶಿ, ವಿದೇಶಿ ಹಸುಗಳ ಹಾಗೂ ಎಮ್ಮೆಗಳ ಹಾಲು ಕರೆಯುವ ಸ್ಪರ್ಧೆ ಏರ್ಪಡಿಸಲಾಗಿದೆ.
ಹಾಲು ಕರೆಯುವ ಸ್ಪರ್ಧೆಯಲ್ಲಿ ವಿಜೇತ ಸರ್ವೋತ್ತಮ ಚಾಂಪಿಯನ್ ಹಸುವಿಗೆ 1 ಲಕ್ಷ ಬಹುಮಾನ ಹಾಗೂ ತಳಿವಾರು ಪ್ರಥಮ, ದ್ವಿತೀಯ ತೃತೀಯ ವಿಜೇತ ರಾಸುಗಳಿಗೆ ಕ್ರಮವಾಗಿ ರೂ 50,000 ರೂ. 30,000 ರೂ. 20,000 ಗಳ ಬಹುಮಾನ ನೀಡಲಾಗುವುದು.
ಪಶುಸಂಗೋಪನೆಯಲ್ಲಿ ವಿವಿಧ ನೂತನ, ಸಂಶೋಧನೆ ಅವಿಷ್ಕಾರಗಳನ್ನು ರೈತರಿಗೆ ಪರಿಚಯ ಮಾಡಲಾಗುವುದು. ದೇಶೀಯ ಜಾನುವಾರುಗಳಲ್ಲಿ 9 ತಳಿಗಳು 2 ವಿದೇಶಿ ಜಾನುವಾರು ತಳಿಗಳು, 9 ಕುರಿ ತಳಿಗಳು, 5 ಮೇಕೆ ತಳಿಗಳು, 4 ಎಮ್ಮೆ ತಳಿಗಳು, 4 ಹಂದಿ ತಳಿಗಳು, 5 ದೇಶಿ ಕೋಳಿ, ಬಾತುಕೋಳಿಯ ತಳಿಗಳು ಮತ್ತು 4 ಮೊಲ ತಳಿಗಳನ್ನು ಪ್ರದರ್ಶಿಸಲಾಗುವುದು.
ಪ್ರದರ್ಶನದಲ್ಲಿ ಭಾಗವಹಿಸುವ ಪ್ರತಿಯೊಂದು ಜಾನುವಾರುಗಳಿಗೆ ಕರ್ನಾಟಕ ಹಾಲು ಮಹಾ ಮಂಡಳಿಯಿಂದ 10 ಕೆ.ಜಿ. ಉಚಿತ ಪಶು ಆಹಾರ ನೀಡಲಾಗುವುದು. ಪ್ರದರ್ಶನಕ್ಕೆ ಭೇಟಿ ನೀಡುವ ಸಾರ್ವಜನಿಕರಿಗೆ ಎನ್.ಇ.ಸಿ.ಸಿ. ವತಿಯಿಂದ ಉಚಿತವಾಗಿ ಬೇಯಿಸಿದ ಮೊಟ್ಟೆ ಮತ್ತು ಕರ್ನಾಟಕ ಹಾಲು ಮಹಾ ಮಂಡಳಿಯಿಂದ ಮಜ್ಜಿಗೆ, ಹಾಲು ನೀಡಲಾಗುವುದು ಎಂದರು












Click it and Unblock the Notifications