Bengaluru Weather: ಬೆಂಗಳೂರಿಗೆ ಕೆಲವೇ ಕ್ಷಣಗಳಲ್ಲಿ ವ್ಯಾಪಕ ಮಳೆ ನಿರೀಕ್ಷೆ! ಹವಾಮಾನ ಮುನ್ಸೂಚನೆ ಹೀಗಿದೆ
ಬೆಂಗಳೂರು, ಮಾರ್ಚ್ 12: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆಗಾಲದ ವಾತಾವರಣ ನಿರ್ಮಾಣವಾಗಿದೆ ಎಂಬಂತೆ ಭಾಸವಾಗುತ್ತಿದೆ. ಇದಕ್ಕೆ ಕಾರಣ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಪೂರ್ವ ಮುಂಗಾರು ಮಳೆ ಸಕ್ರಿಯವಾಗಿರುವುದು. ನಗರಾದ್ಯಂತ ಬುಧವಾರವು ಮಳೆ ಮುನ್ಸೂಚನೆ ಇದ್ದು, ಸಂಜೆ ಹೆಚ್ಚಿನ ಪ್ರಮಾಣದಲ್ಲಿ ತಂಪು ಗಾಳಿ ಬೀಸುತ್ತಿದೆ. ಈಗಲೇ ಆಗಲೋ ಮಳೆ ಬರುವಂತಿದೆ.
ನಗರದಲ್ಲಿ ಮಂಗಳವಾರ (ಮಾರ್ಚ್ 11) ಸಂಜೆಗೆ ವಿವಿಧೆಡೆ ಗುಡುಗು ಮಿಂಚು ಸಹಿತ ಅಲ್ಲಲ್ಲಿ ಮಳೆ ದಾಖಲಾಗಿದೆ. ಈ ಪೈಕಿ ಮಹಾದೇವಪುರ ವಲಯದ ದೊಡ್ಡಾನೆಕುಂದಿ ವ್ಯಾಪ್ತಿಯಲ್ಲಿ 1.5 ಮಿಲಿ ಮೀಟರ್ ಮಳೆ ಬಿದ್ದಿದೆ. ಒಟ್ಟು 19 ವಾರ್ಡ್ಗಳಲ್ಲಿ ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದು ಬುಧವಾರವು ಸಹ ನಗರದ ಹಲವೆಡೆ ಕೆಲವೇ ಕ್ಷಣಗಳಲ್ಲಿ ಮಳೆಯ ಸಿಂಚನವಾಗುವ ಲಕ್ಷಣಗಳು ಕಂಡು ಬಂದಿವೆ.

ಕಳೆದೊಂದು ವಾರದಿಂದ ನಗರದಲ್ಲಿನ ತಾಪಮಾನದಲ್ಲಿ ಭಾರೀ ವ್ಯತ್ಯಾಸಗಳು ಕಂಡು ಬರುತ್ತಿವೆ. ಮಳೆ ಹಿನ್ನೆಲೆ ಮಧ್ಯಾಹ್ನವಾಗುತ್ತಿದ್ದಂತೆ ತಾಪಮಾನ ಇಳಿಕೆ ಆಗಿ, ತಂಪು ಗಾಳಿ, ಮಬ್ಬು ವಾತವರಣ ನಿರ್ಮಾಣವಾಗುತ್ತಿದೆ. ಸದ್ಯ ನಗರದಲ್ಲಿ ಗರಿಷ್ಠ ತಾಪಮಾನದಲ್ಲಿ (32-33 ಡಿ.ಸೆ.) ಬದಲಾವಣೆ ಆಗಿಲ್ಲ. ಆದರೆ ಕನಿಷ್ಠ ತಾಪಮಾನವು ಒಮ್ಮೆ 19 ಮತ್ತೆ ಕೆಲವೊಮ್ಮೆ 18 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ.
ಅಧಿಕ ತಾಪಮಾನಕ್ಕೆ ತುತ್ತಾದ ಜನರು ಮಳೆ ನೋಡಿ ನಿಟ್ಟುಸಿರು ಬಿಟ್ಟಿದ್ದಾರೆ. ಬೆಳಗ್ಗೆಯಿಂದ ಬಿಸಿಲಿಗೆ ತತ್ತರಿಸುವ ಜನರಿಗೆ, ಸಾರ್ವಜನಿಕರಿಗೆ, ಬೀದಿ ಬದಿ ವ್ಯಾಪಾರಿಗಳಿಗೆ ಸಂಜೆ ಆಗುತ್ತಿದ್ದಂತೆ ಬರುವ ಮಳೆ ಕೊಂಚ ಕಿರಿ ಕಿರಿ ನೀಡಿದೆ. ಸಾಮಾನ್ಯವಾಗಿ ಮುಂದಿನ ಮೂರು ದಿನಗಳ ಕಾಲ ಇದೇ ರೀತಿಯ ವಾತಾವರಣ ಮುಂದುವರಿಯಲಿದೆ. ಆಗಾಗ ತುಂತುರು ಮತ್ತು ಹಗುರು ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬುಧವಾರ ಎಲ್ಲೆಲ್ಲಿ ಮಳೆ ಆಗಿದೆ?
ಬೆಂಗಳೂರು ಹೊರತುಪಡಿಸಿದರೆ, ಈಗಾಗಲೇ ಮೈಸೂರಿನಲ್ಲಿ ಮಬ್ಬು ವಾತಾವರಣ ನಿರ್ಮಾಣವಾಗಿದೆ. ಅಲ್ಲಿ ಸಹ ಇಂದು ತಡರಾತ್ರಿವರೆಗೆ ಅಲ್ಲಲ್ಲಿ ಮಳೆ ಸುರಿಯಲಿದೆ. ಮಧ್ಯಾಹ್ನ ಚಾಮರಾಜನಗರ, ಕೊಡಗು, ಮಡಿಕೇರಿ, ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗದಲ್ಲಿ ಅಲ್ಲಲ್ಲಿ ಚದುರಿದಂತೆ, ಕೆಲವೆಡೆ ಹಗುರ ಮಳೆ ದಾಖಲಾಗಿದೆ. ಇನ್ನು ಕೆಲವು ದಿನಗಳ ಕಾಲ ಕರ್ನಾಟಕದ ಒಳನಾಡು ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಬರುವ ಮುನ್ಸೂಚನೆ ಇದೆ..

ಪೂರ್ವ ಮುಂಗಾರು ಮಳೆ ಕುರಿತು..
ಈಗಿನ ಮಳೆ ಮೂಲಕ ರಾಜ್ಯಕ್ಕೆ ಪೂರ್ವ ಮುಂಗಾರಿನ ಅಧಿಕೃತ ಪ್ರವೇಶವಾದಂತಾಗಿದೆ. ಈ ಮಳೆ ಮಾರ್ಚ್ನಿಂದ ಮೇ ತಿಂಗಳವರೆಗೆ ಸುರಿಯಲಿದೆ. ನಂತರ ಜೂನ್ ತಿಂಗಳಲ್ಲಿ ಮುಂಗಾರು ಮಳೆಯ ಮಾರುತಗಳು ಕೇರಳ ಮಾರ್ಗವಾಗಿ ಕರ್ನಾಟಕ ಪ್ರವೇಶಿಸಿ ಉತ್ತರ ಭಾರತದತ್ತ ಸಾಗಲಿವೆ.
ಕರ್ನಾಟಕದ ದಕ್ಷಿಣ ಕನ್ನಡ 82 ಮಿ.ಮೀ ಮಳೆ ದಾಖಲಾಗಿದೆ. ಇದರೊಂದಿಗೆ ಉಡುಪಿ, ಹಾಸನ, ತುಮಕೂರು, ಕೊಡಗು, ಚಿಕ್ಕಮಗಳೂರು, ಚಾಮರಾಜನಗರ ಮತ್ತು ಮಂಡ್ಯದಲ್ಲಿ ಬುಧವಾರ ವ್ಯಾಪಕ ಮಳೆ ದಾಖಲಾಗಿದೆ.. ದಕ್ಷಿಣ ಕನ್ನಡದ ವಿವಿಧ ಭಾಗಗಳಲ್ಲಿ ಜೋರು ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications