IMD: ಧಾರಾಕಾರ ಮಳೆಗೆ ಬೆಂಗಳೂರು ಜಲಾವೃತ: ಇಂದು ಯೆಲ್ಲೋ ಅಲರ್ಟ್ ಘೋಷಣೆ!
ಬೆಂಗಳೂರು ಅಕ್ಟೋಬರ್ 20: ಕಳೆದ ಕೆಲ ವಾರಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಸಿಲಿಕಾನ್ ಸಿಟಿ ಬೆಂಗಳೂರು ತತ್ತರಿಸಿ ಹೋಗಿದೆ. ಧಾರಾಕಾರ ಮಳೆಗೆ ಉದ್ಯಾನ ನಗರಿಯ ಅರ್ಧದಷ್ಟು ಭಾಗ ಮಳೆ ನೀರು ತುಂಬಿ ಹೋಗಿದೆ. ಇದಕ್ಕೆ ಸಾಕ್ಷಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ದೃಶ್ಯಗಳು.
ಹೌದು... ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ಮಳೆ ಹಾಗೂ ಚರಂಡಿ ನೀರು ಆವರಿಸಿರುವುದು ಕಂಡು ಬಂದಿದೆ. ಶನಿವಾರ ರಾತ್ರಿ 8.30ರ ಹೊತ್ತಿಗೆ ಬೆಂಗಳೂರು ನಗರದಲ್ಲಿ 17.4 ಮಿಮೀ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ವರದಿ ಮಾಡಿದೆ.
The OG Kengeri & RR Nagara's situation after scoring big daddy 💯 in BENGALURU city ⛈️⚡
— Karnataka Weather (@Bnglrweatherman) October 20, 2024
Just drizzles now over parts of the city
Likely to be a cloudy day till noon & later there are chances for rain#KarnatakaRains #BengaluruRains #BangaloreRains #Bangalore #INDvNZ #INDvsNZ… https://t.co/SktiCjab3b pic.twitter.com/LKP2AnRz0U
ಎಚ್ಎಎಲ್ ನಲ್ಲಿ 12 ಮಿಮೀ ಮಳೆ ದಾಖಲಾಗಿದೆ. ಅಲ್ಲದೆ ಭಾರತೀಯ ಹವಾಮಾನ ಇಲಾಖೆಯ (IMD) ಪ್ರಕಾರ ಭಾನುವಾರದಂದು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಹೀಗಾಗಿ ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಹವಾಮಾನ ಬದಲಾವಣೆಯಿಂದಾಗಿ ನಿವಾಸಿಗಳಿಗೆ ವಿಶೇಷವಾಗಿ ಹಿರಿಯರು ಹಾಗೂ ಮಕ್ಕಳು ಮನೆ ಒಳಗೆ ಇರಲು ಸೂಚನೆ ನೀಡಲಾಗಿದೆ.

ಇನ್ನೂ ಕಳೆದ ದಿನ ಸುರಿದ ಮಳೆಗೆ ಹೊರಮಾವು, ಹೆಣ್ಣೂರು, ಕಸ್ತೂರಿ ನಗರ, ರಾಜರಾಜೇಶ್ವರಿ ನಗರ, ಕೆಂಗೇರಿ, ಹೆಬ್ಬಾಳ ಜಂಕ್ಷನ್, ನಾಗವಾರ, ರಾಮಮೂರ್ತಿ ನಗರ, ವಿಂಡ್ಸರ್ ಮ್ಯಾನರ್ ಅಂಡರ್ಪಾಸ್-ಮೆಹಕ್ರಿ ಸರ್ಕಲ್ ಮತ್ತು ಹೊರವರ್ತುಲ ರಸ್ತೆಯಂತಹ ಪ್ರದೇಶಗಳು ತೀವ್ರ ತೊಂದರೆಗೊಳಗಾಗಿದ್ದು, ವಾಹನ ದಟ್ಟಣೆಯನ್ನು ಅನುಭವಿಸಿವೆ.
ಬೆಂಗಳೂರಿನಲ್ಲಂತೂ ಅ. 19ರ ರಾತ್ರಿ ಸುರಿದ ಮಳೆಯಿಂದಾಗಿ ಅನೇಕ ಪ್ರದೇಶಗಳು ಜಲಾವೃತವಾಗಿವೆ. ರಾಜಾಜಿನಗರ, ಮಲ್ಲೇಶ್ವರಂ, ಮೆಜೆಸ್ಟಿಕ್, ಶಾಂತಿನಗರದಲ್ಲಿ, ಇನ್ನು, ತ್ಯಾಗರಾಜ ನಗರ, ಜೆಪಿನಗರ, ಜಯನಗರ, ಚಾಮರಾಜಪೇಟೆ, ಗಿರಿನಗರ, ಶ್ರೀನಗರ, ಕೆಆರ್ ಮಾರುಕಟ್ಟೆ, ಟೌನ್ ಹಾಲ್ ಬಳಿಯೆಲ್ಲಾ ಭಾರೀ ಮಳೆಯಾಗಿದೆ.
ಕೆಆರ್ ಪುರಂ ವಿಧಾನಸಭಾ ಕ್ಷೇತ್ರದ ಹೊರಮಾವು ವಾರ್ಡಿನ ಸಾಯಿಬಾಬಾ ಲೇಔಟ್ ಮತ್ತೆ ಜಲಾವೃತಗೊಂಡಿದೆ. ಭಾರೀ ಮಳೆಯಿಂದಾಗಿ ಜಲಾವೃತಗೊಂಡಿದ್ದ ಲೇಔಟ್ ನಲ್ಲಿ ಮೊನ್ನೆಯಷ್ಟೇ ಫೈರ್ ಇಂಜಿನ್ ಮೂಲಕ ನೀರನ್ನು ಹೊರ ಹಾಕಲಾಗಿತ್ತು. ಈಗ ಲೇಔಟ್ ಮತ್ತೆ ಜಲಾವೃತಗೊಂಡಿದ್ದು, ಜನ ಹೈರಾಣಾಗಿದ್ದಾರೆ.
ನಗರದ ಇನ್ನಿತರ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಜನ ರಾತ್ರಿ ಇಡೀ ನಿದ್ದೆಗೆಟ್ಟು ಕುಳಿತಿರುವ ಘಟನೆಗಳು ನಡೆದಿವೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ. ಮಳೆ ನೀರಿನಲ್ಲಿ ಕಾರು ಬೈಕ್ಗಳು ಆಟಿಕೆಯಂತೆ ತೇಲಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಕಾಣ ಸಿಗುತ್ತಿವೆ.
ರಾಜರಾಜೇಶ್ವರಿ ನಗರ ಮತ್ತು ಕೆಂಗೇರಿ ನಿವಾಸಿಗಳು ತಮ್ಮ ನೆರೆಹೊರೆಯಲ್ಲಿನ ಪ್ರವಾಹದ ಬೀದಿಗಳ ಚಿತ್ರಗಳು ಮತ್ತು ವೀಡಿಯೊಗಳನ್ನು X (ಹಿಂದೆ ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಕೆಲವೆಡೆಯಂತೂ ಮೂರು ನಾಲ್ಕು ಅಡಿಯಷ್ಟು ನೀರು ನಿಂತಿದೆ. ಹೀಗಾಗಿ ಬೆಂಗಳೂರಿನ ಶೇಕಡಾ 50 ರಷ್ಟು ಭಾಗ ಸಂದೇಹವಿಲ್ಲದೆ ಮುಳುಗಿ ಹೋಗಿದೆ ಎಂದು ಜನ ಹೇಳಿಕೊಳ್ಳುತ್ತಿದ್ದಾರೆ.












Click it and Unblock the Notifications