Bengaluru water Crisis: ನೀರಿನ ಬಿಕ್ಕಟ್ಟಿನ ನಡುವೆ ಟ್ಯಾಂಕರ್ ಮಾಲೀಕರ ಪ್ರತಿಭಟನೆ
ಬೆಂಗಳೂರು, ಮಾರ್ಚ್ 07: ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕುಡಿಯುವ ನೀರಿಗಾಗಿ ಜನ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದ್ದು, ಈ ಬಾರಿಯ ನೀರಿನ ಬಿಕ್ಕಟ್ಟು ಎದುರಿಸುವುದು ಸರ್ಕಾರಕ್ಕೂ ಸವಾಲಾಗಿದೆ. ಈ ಮಧ್ಯೆ ನೀರಿನ ಟ್ಯಾಂಕರ್ ಮಾಲೀಕರು ಮುಷ್ಕರಕ್ಕೆ ಮುಂದಾಗಿದ್ದು, ನಗರದಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ನೀರಿನ ಅಭಾವ ಹೆಚ್ಚಾಗುತ್ತಿದ್ದಂತೆ ಜನ ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಟ್ಯಾಂಕರ್ ಮಾಲೀಕರು ನೀರಿನ ದರವನ್ನು ಗಣನೀಯವಾಗಿ ಏರಿಸಿದ್ದರು. ಖಾಸಗಿ ಟ್ಯಾಂಕರ್ಗಳ ಬೆಲೆ ಏರಿಕೆಗೆ ಕಡಿವಾಣ ಹಾಕುವಂತೆ ಸರ್ಕಾರಕ್ಕೆ ಮನವಿ ಪತ್ರಗಳು ಬಂದಿದ್ದು, ಈ ಬಗ್ಗೆ ಸರ್ಕಾರ ಕ್ರಮಕ್ಕೆ ಮುಂದಾಗಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿನಿಂದ (BWSSB) ಮನೆಗಳಿಗೆ ನೀರು ಪೂರೈಕೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಕರ್ನಾಟಕ ಸಾರಿಗೆ ಇಲಾಖೆಯ ಅಧೀನದಲ್ಲಿರುವ ಪ್ರಾದೇಶಿಕ ಸಾರಿಗೆ ಕಚೇರಿಗಳು (ಆರ್ಟಿಒಗಳು) ಕಳೆದ ಒಂದು ವಾರದಲ್ಲಿ 163 ಖಾಸಗಿ ನೀರಿನ ಟ್ಯಾಂಕರ್ಗಳನ್ನು ವಶಪಡಿಸಿಕೊಂಡಿವೆ. ಹಾಗೂ ಬಿಡಬ್ಲ್ಯೂಎಸ್ಎಸ್ಬಿನಲ್ಲಿ ಮಾರ್ಚ್ 7ರವೊಳಗೆ ಟ್ಯಾಂಕರ್ ನೊಂದಣಿ ಮಾಡಿಸಲು ಗಡುವು ನೀಡಲಾಗಿದೆ.
ಸರ್ಕಾರದ ಈ ಕ್ರಮವನ್ನು ಖಂಡಿಸಿ ನೀರು ಸರಬರಾಜು ಮಾಡುವ ಟ್ಯಾಂಕರ್ ಮಾಲೀಕರು ಪ್ರತಿಭಟನೆಗೆ ಮುಂದಾಗಿದ್ದಾರೆ.ಜೆ.ಪಿ.ನಗರದ ಜಂಬೂಸವಾರಿ ದಿನ್ನೆಯಲ್ಲಿ 50ಕ್ಕೂ ಹೆಚ್ಚು ನೀರಿನ ಟ್ಯಾಂಕರ್ಗಳ ಮಾಲೀಕರು ಪ್ರತಿಭಟನೆ ಆರಂಭಿಸಿದ್ದು, ಸರ್ಕಾರ ನಮಗೆ ತೊಂದರೆ ನೀಡಿದರೆ, ನಗರದಲ್ಲಿ ನೀರಿನ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಹಲವಾರು ಟ್ಯಾಂಕರ್ ಮಾಲೀಕರು ಸಂಕೇತವಾಗಿ ಪ್ರತಿಭಟನೆ ನಡೆಸುತ್ತಿದ್ದು, ನಾವು ಇಂದಿನಿಂದ ನೀರು ಸರಬರಾಜು ಮಾಡಲು ಸಾಧ್ಯವಾಗುವುದಿಲ್ಲ ಎಂದು ತಮ್ಮ ಗ್ರಾಹಕರಿಗೆ ತಿಳಿಸಿದ್ದಾರೆ. ನೀರು ಸರಬರಾಜು ವಿಚಾರದಲ್ಲಿ ಸರ್ಕಾರವನ್ನು ದೂರಬೇಕು. ಹೀಗಾಗಿ ಪರಿಸ್ಥಿತಿ ಸಹಜ ಸ್ಥಿತಿಗೆ ಬರುವವರೆಗೆ ಸಾರ್ವಜನಿಕರು ಸಹ ನಮಗೆ ಸಹಕರಿಸಬೇಕು ಎಂದು ಟ್ಯಾಂಕರ್ಗಳ ಮಾಲೀಕರು ಮನವಿ ಮಾಡಿಕೊಂಡಿದ್ದಾರೆ.
ಟ್ಯಾಂಕರ್ ಮಾಲೀಕರ ಪ್ರತಿಭಟನೆ ಹಿನ್ನೆಲೆಯಲ್ಲಿ ಇಂದು(ಮಾರ್ಚ್ 07) ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಮತ್ತು ಟ್ಯಾಂಕರ್ ಅಸೋಸಿಯೇಷನ್ ನಡುವೆ ಮಹತ್ವ ಸಭೆ ನಡೆಯಲಿದ್ದು, ಈ ಸಭೆಯ ಬಳಿಕ ಮಾಲೀಕರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಕಾದುನೋಡಬೇಕಿದೆ.












Click it and Unblock the Notifications