Tunnel Road: ಟನಲ್ ರಸ್ತೆಗೆ ತಿಂಗಳಿಗೆ ₹20,000 ಟೋಲ್: ತೇಜಸ್ವಿ ಸೂರ್ಯ ಹೇಳಿದ್ದೇನು?
ಬೆಂಗಳೂರಿನಲ್ಲಿ ಉದ್ದೇಶಿತ ಟನಲ್ ರಸ್ತೆ ಯೋಜನೆಗೆ ಪರ-ವಿರೋಧದ ಚರ್ಚೆಗಳು ಜೋರಾಗಿವೆ. ಇದೇ ವಿಚಾರವಾಗಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ಟಾಕ್ವಾರ್ ಮುಂದುವರಿದಿದೆ. ತೇಜಸ್ವಿ ಅವರು ಬೆಂಗಳೂರಿಗೆ ಟನಲ್ ರಸ್ತೆ ಬೇಡ ಎಂದು ವಿರೋಧಿಸಿದ್ದರು. ಈ ಸಂಬಂಧ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಸಲಹೆಯನ್ನೂ ನೀಡಿದ್ದರು. ಈ ಸಲಹೆಗಳಿಗೆ ಅವರು ಒಪ್ಪಲಿಲ್ಲ. ಸದ್ಯ ಇದೇ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ಮುಂದುವರಿದಿದೆ. ಟನಲ್ ರಸ್ತೆಯಲ್ಲಿ ಸಂಚರಿಸಲು ತಿಂಗಳಿಗೆ ₹20,000 ಟೋಲ್ ಶುಲ್ಕ ಪಾವತಿಸಲು ಎಷ್ಟು ಬೆಂಗಳೂರಿಗರು ಸಾಮರ್ಥ್ಯ ಹೊಂದಿದ್ದಾರೆ? ಎಂದು ತೇಜಸ್ವಿ ಸೂರ್ಯ ತಿರುಗೇಟು ನೀಡಿದ್ದಾರೆ.
ಡಿಕೆ.ಶಿವಕುಮಾರ್ ಅವರು ಅಂದಿದ್ದ ಎಳಸು ಎಂಬ ಮಾತಿಗೆ ಸಂಸದ ತೇಜಸ್ವಿ ಸೂರ್ಯ ತಿರುಗೇಟು ನೀಡಿದ್ದಾರೆ. ಯುವಕರ ಸಾಮರ್ಥ್ಯವನ್ನು ಕಡೆಗಣಿಸುವವರಿಗೆ, ಈ ದೇಶದ ಶಕ್ತಿ ಅದರ ಯುವ ಪೀಳಿಗೆಯಲ್ಲಿ ಅಡಗಿದೆ ಎಂದು ನಾನು ನೆನಪಿಸಲು ಬಯಸುತ್ತೇನೆ. ಈ ವಯೋಭೇದಭಾವ ಇಂದು ನಡೆಯುವುದಿಲ್ಲ. ಬೆಂಗಳೂರಿನ ಯುವಕರು ಇದರ ಭವಿಷ್ಯ, ಏಳ್ಗೆಯನ್ನು ಬಯಸುತ್ತಾರೆಯೇ ವಿನಃ, ಮನಬಂದಂತೆ ಮಾಡುವ ಯೋಜನೆಗಳನ್ನು ವಿರೋಧಿಸುವ ಮೂಲಕ ನಿಜವಾದ ಜಾಗತಿಕ ಕೇಂದ್ರವಾಗಿ ನಿರ್ಮಿಸುತ್ತಾರೆ ಎಂದು ಟಾಂಗ್ ನೀಡಿದ್ದಾರೆ.

ನಾನು ನೈಜ ಸಮಸ್ಯೆಗಳನ್ನು ಎತ್ತಿ ತೋರಿಸಿ ಪ್ರಶ್ನೆಗಳನ್ನು ಕೇಳುತ್ತಿರುವಾಗ, ವೈಯಕ್ತಿಕ ದಾಳಿಗಳು ಮಾತ್ರ ಪ್ರತಿಕ್ರಿಯೆಯಾಗಿ ಬರುತ್ತಿರುವುದು ವಿಪರ್ಯಾಸ. ಈ ರಸ್ತೆಯನ್ನು ಬಳಸಲು ದಿನಕ್ಕೆ ₹660 ಅಥವಾ ತಿಂಗಳಿಗೆ ₹20,000 ಟೋಲ್ ಪಾವತಿಸಲು ಎಷ್ಟು ಬೆಂಗಳೂರಿಗರು ಸಾಮರ್ಥ್ಯ ಹೊಂದಿದ್ದಾರೆ? ಎಂದು ಪ್ರಶ್ನೆ ಮುಂದಿಟ್ಟಿದ್ದಾರೆ. ನಾವು ಈ ವಿಶೇಷ ಮೂಲಸೌಕರ್ಯವನ್ನು ಯಾರಿಗಾಗಿ ನಿರ್ಮಿಸುತ್ತಿದ್ದೇವೆ? ಬೆಂಗಳೂರಿಗೆ ಅದರ ಸಮಸ್ಯೆಗಳನ್ನು ಪರಿಹರಿಸಲು ನಿಜವಾದ ಪರಿಹಾರಗಳು ಬೇಕೆ ಹೊರತು, ಪ್ರತಿಷ್ಠೆಯ ಯೋಜನೆಗಳಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ನಾನು ಬೆಂಗಳೂರನ್ನು ಪ್ರೀತಿಸುವ ಹುಡುಗ
"ಸುರಂಗ ರಸ್ತೆ ಯೋಜನೆಯನ್ನು ಪ್ರಶ್ನಿಸಲು ನಾನ್ಯಾರು?" ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕೇಳಿದ್ದಾರೆ. ನಾನು ಒಬ್ಬ ಸಾಮಾನ್ಯ ಕನ್ನಡಿಗ. ನಮ್ಮ ನಗರವನ್ನು ಪ್ರೀತಿಸುವ ಒಬ್ಬ ಬೆಂಗಳೂರಿನ ಹುಡುಗ. ಪ್ರತಿದಿನ ಸಂಚಾರ ದಟ್ಟಣೆಯಲ್ಲಿ ನರಳುವ ಒಬ್ಬ ಸಾಮಾನ್ಯ ಮನುಷ್ಯ. ಒಬ್ಬ ಬೆಂಗಳೂರಿಗನಾಗಿ ಹಾಗೂ ನಗರದ ಭವಿಷ್ಯದ ಬಗ್ಗೆ ತೀವ್ರ ಕಾಳಜಿ ಹೊಂದಿರುವವನಾಗಿ, ಸುರಂಗ ರಸ್ತೆಯ ನಿರ್ಧಾರ ತೆಗೆದುಕೊಳ್ಳುವ ಮೊದಲು, ಅದು ನಗರದ ಅತ್ಯುತ್ತಮ ಹಿತಾಸಕ್ತಿಗಳನ್ನು ಪೂರೈಸುತ್ತದೆ ಎಂದು ಖಚಿತಪಡಿಸಿಕೊಳ್ಳಲು, ತಜ್ಞರು ಮತ್ತು ಸಾರಿಗೆ ಯೋಜಕರನ್ನು ಸಮಾಲೋಚಿಸುವಂತೆ ನಾನು ಉಪಮುಖ್ಯಮಂತ್ರಿಗಳನ್ನು ವಿನಂತಿಸುತ್ತೇನೆ ಎಂದಿದ್ದಾರೆ.
ಬೆಂಗಳೂರು ನಮ್ಮೆಲ್ಲರಿಗೂ ಸೇರಿದ್ದು
ಬೆಂಗಳೂರಿನ ಅನೇಕ ನಾಗರಿಕರು ಈ ಪ್ರಸ್ತಾವನೆಗೆ ತಮ್ಮ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅದನ್ನು ವಿರೋಧಿಸಲು ಅವರಿಗೆ ಯಾವ ಅಧಿಕಾರವಿದೆ ಎಂದು ಉಪಮುಖ್ಯಮಂತ್ರಿಗಳು ಕೇಳುತ್ತಾರೆ. ನೆನಪಿರಲಿ, ನಾವು ತೆರಿಗೆ ಪಾವತಿಸುವ ನಾಗರಿಕರು. ಬೆಂಗಳೂರು ನಮ್ಮೆಲ್ಲರಿಗೂ ಸೇರಿದ್ದು. ಒಂದು ಕಾಲದಲ್ಲಿ ಮಹಾನ್ ದೂರದೃಷ್ಟಿ ಹೊಂದಿದ್ದ ನಾಯಕರಿಂದ ನಿರ್ಮಿಸಲ್ಪಟ್ಟ ಬೆಂಗಳೂರು, ಈಗ ಕಳಪೆ ಯೋಜನೆಯಿಂದಾಗಿ ಸಮಸ್ಯೆ ಎದುರಿಸುತ್ತಿದೆ. ಅದರ ಭವಿಷ್ಯವನ್ನು ರಕ್ಷಿಸುವುದು ನಮ್ಮ ಸಾಮೂಹಿಕ ಜವಾಬ್ದಾರಿ ಎಂದು ಹೇಳಿದ್ದಾರೆ. ಬೆಂಗಳೂರಿಗೆ ಒಂದು ಪರಂಪರೆಯನ್ನು ಬಿಟ್ಟು ಹೋಗಬೇಕೆಂದು ಉಪಮುಖ್ಯಮಂತ್ರಿಗಳು ಹೇಳುತ್ತಿದ್ದು, ಸಾಮಾನ್ಯ ಮನುಷ್ಯನಿಗೆ ಸಹ ಲಭ್ಯವಾಗುವ ಬೆಂಗಳೂರನ್ನು ಮತ್ತು ನಗರಕ್ಕೆ ಸಾಧ್ಯವಿರುವ ಹಾಗೂ ಅಗತ್ಯವಿರುವ ಯೋಜನೆಗಳನ್ನು ನಿರ್ಮಿಸಿ ಎಂದು ವಿನಂತಿಸಿದ್ದಾರೆ.












Click it and Unblock the Notifications