Bengaluru-Tumkur Train: ತುಮಕೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟ ಸಚಿವ ಸೋಮಣ್ಣ
ತುಮಕೂರು-ಬೆಂಗಳೂರು ಪ್ರಯಾಣಿಕರಿಗೆ ರೈಲ್ವೆ ರಾಜ್ಯ ಸಚಿವ ವಿ ಸೋಮಣ್ಣ ಸಿಹಿ ಸುದ್ದಿ ಕೊಟ್ಟಿದ್ದಾರೆ. ತುಮಕೂರು ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾದ ಬೆಂಗಳೂರು ಮತ್ತು ತುಮಕೂರು ನಡುವೆ ಮೇನ್ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ (MEMU) ದೈನಂದಿನ ರೈಲು ಸೇವೆ ಶೀಘ್ರದಲ್ಲೇ ಪರಿಚಯಿಸಲಾಗುವುದು ಎಂದು ಹೇಳಿದ್ದಾರೆ. ಈ ರೈಲು ಸಂಚಾರ ಆರಂಭವಾದ ಬಳಿಕ ತುಮಕೂರು ಬೆಂಗಳೂರು ನಡುವೆ ಪ್ರತಿದಿನ ಸಂಚರಿಸುವ ಪ್ರಯಾಣಿಕರಿಗೆ ಭಾರಿ ಅನುಕೂಲವಾಗಲಿದೆ.
ಬೆಂಗಳೂರು-ಧಾರವಾಡ ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ಗೆ ತುಮಕೂರಿನಲ್ಲಿ ಹೊಸದಾಗಿ ಪರಿಚಯಿಸಲಾದ ನಿಲುಗಡೆಗೆ ಫ್ಲಾಗ್ ಆಫ್ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತುಮಕೂರು ಬೆಂಗಳೂರು ನಡುವೆ ಮೆಮು ದೈನಂದಿನ ರೈಲು ಸಂಚಾರದ ಬಗ್ಗೆ ಮಾಹಿತಿ ನೀಡಿದರು. ಈ ರೈಲು ಸೇವೆ ಆರಂಭವಾದ ಬಳಿಕ ಸಾವಿರಾರು ವಿದ್ಯಾರ್ಥಿಗಳು, ಕಚೇರಿಗೆ ಹೋಗುವವರು ಮತ್ತು ಕಾರ್ಖಾನೆಯ ಉದ್ಯೋಗಿಗಳಿಗೆ ಸಹಾಯವಾಗಲಿದೆ ಎಂದು ಹೇಳಿದ್ದಾರೆ.

₹100 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ
ತುಮಕೂರು ರೈಲ್ವೆ ನಿಲ್ದಾಣವನ್ನು ವಿಶ್ವ ದರ್ಜೆಯ ಟರ್ಮಿನಲ್ ಆಗಿ ಮೇಲ್ದರ್ಜೆಗೇರಿಸಲು ಸುಮಾರು 100 ಕೋಟಿ ರೂಪಾಯಿ ವೆಚ್ಚದಲ್ಲಿ ನೀಲನಕ್ಷೆ ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದರು. ರಸ್ತೆ ಮತ್ತು ರೈಲು ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ತುಮಕೂರು ನಗರದಲ್ಲಿ ಐದು ಮೇಲ್ಸೇತುವೆಗಳನ್ನು ನಿರ್ಮಾಣ ಮಾಡಲು ಸುಮಾರು 350 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ ಎಂದು ಹೇಳಿದರು.
ಶಿರಾ-ಚಿತ್ರದುರ್ಗ ಮೂಲಕ ತುಮಕೂರು-ದಾವಣೆಗೆರೆ ರೈಲು ಮಾರ್ಗ ಮತ್ತು ತುಮಕೂರು-ರಾಯದುರ್ಗ ರೈಲು ಮಾರ್ಗ ಯೋಜನೆಗಳು ಈ ಭಾಗದ ಜನರಿಗೆ ಮುಖ್ಯವಾಗಿದ್ದು, ನಗರದ ಸಂಪರ್ಕ ವ್ಯವಸ್ಥೆ ಸುಧಾರಿಸಲು ಮುಖ್ಯವಾದವುಗಳಾಗಿವೆ. ಈ ಎರಡೂ ಮಾರ್ಗಗಳಲ್ಲಿ 2,140 ಕೋಟಿ ಮತ್ತು 2,500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಶೀಘ್ರವಾಗಿ ಭೂಸ್ವಾಧೀನಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.
ಕೆಎಸ್ಆರ್ ಬೆಂಗಳೂರು-ಧಾರವಾಡ (ರೈಲು ಸಂಖ್ಯೆ 20662) ತುಮಕೂರಿಗೆ ಬೆಳಗ್ಗೆ 6.32ಕ್ಕೆ ಆಗಮಿಸಿ 6.34ಕ್ಕೆ ಹೊರಡಲಿದೆ ಎಂದು ಪಿಐಬಿ ಅಧಿಕೃತ ಪ್ರಕಟಣೆ ತಿಳಿಸಿದೆ. ಧಾರವಾಡ-ಕೆಎಸ್ಆರ್ ಬೆಂಗಳೂರು (ರೈಲು ಸಂಖ್ಯೆ 20662) ಸಂಜೆ 6.18ಕ್ಕೆ ಆಗಮಿಸಿ 6.20ಕ್ಕೆ ಹೊರಡಲಿದೆ.
ಬೆಂಗಳೂರಿನಿಂದ ತುಮಕೂರಿಗೆ ಪ್ರತಿದಿನ ಸಾವಿರಾರು ಜನ ವಿವಿಧ ಕಾರಣಗಳಿಗೆ ಬೆಂಗಳೂರಿಗೆ ಸಂಚರಿಸುತ್ತಾರೆ. ವಿದ್ಯಾರ್ಥಿಗಳು, ಕೆಲಸಗಾರರು, ಕಾರ್ಮಿಕರು ಹೆಚ್ಚಾಗಿ ರೈಲು ಸಂಚಾರವನ್ನು ಅವಲಂಬಿಸಿದ್ದು, ಪ್ರತಿ ದಿನ ತುಮಕೂರು ಬೆಂಗಳೂರು ನಡುವೆ ವಿಶೇಷ ರೈಲಿಗೆ ಬೇಡಿಕೆ ಇಟ್ಟಿದ್ದರು. ಇದೀಗ ಸಚಿವರು ಭರವಸೆ ನೀಡಿದ್ದು, ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.












Click it and Unblock the Notifications