ಬೆಂಗಳೂರು ಕಾಲ್ತುಳಿತ 11 ಜನ ಸಾವು: " 2 ಕಡೆ ಕಾರ್ಯಕ್ರಮ ಮಾಡಿ ಅಂತ ನಾವು ಹೇಳಿರಲಿಲ್ಲ"!
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣವು ರಾಜಕೀಯ ಸ್ವರೂಪ ಪಡೆದುಕೊಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣವು ತೀವ್ರ ರಾಜಕೀಯ ಸ್ವರೂಪವನ್ನು ಪಡೆದುಕೊಂಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಜೆಡಿಎಸ್, ಕಾಲ್ತುಳಿತ ದುರಂತದಲ್ಲಿ 11 ಅಮಾಯಕರ ಸಾವಿಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ಕಾರಣ ಎಂಬುದು ಜಗಜ್ಜಾಹೀರಾಗಿರುವ ಸತ್ಯ. ಈ ಅನಾಹುತದ ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮೊದಲು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ.
ಸರ್ಕಾರ ಪರಿಹಾರ ರೂಪದಲ್ಲಿ ಎಷ್ಟೇ ಲಕ್ಷ ಕೊಟ್ಟರು ಹೋದ ಜೀವಗಳು ಮರಳಿ ಬರುವುದಿಲ್ಲ. ಮೃತರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ, ಮೃತರ ಕುಟುಂಬದವರಿಗೆ ನ್ಯಾಯ ಸಿಗಬೇಕಾದರೆ ಘಟನೆ ನೈತಿಕ ಹೊಣೆ ಹೊತ್ತು "ಕೊಲೆಗಾರ ಸರ್ಕಾರದ ಸಿಎಂ ಮತ್ತು ಡಿಸಿಎಂ" ಇಬ್ಬರೂ ಮೊದಲು ರಾಜೀನಾಮೆ ಕೊಡಬೇಕು ಎಂದು ಟ್ವೀಟ್ ಮಾಡಲಾಗಿದೆ.

ನಿಮ್ಮ ನಿರ್ಲಕ್ಷದಿಂದ ಸಂಭವಿಸಿದ ದುರಂತಕ್ಕೆ ಪೊಲೀಸ್ ಅಧಿಕಾರಿಗಳನ್ನು ಬಲಿಪಶು ಮಾಡಿ, ನೀವು ಅಧಿಕಾರದಲ್ಲಿ ಮುಂದುವರಿಯುವುದು ರಾಜ್ಯದ ಜನರಿಗೆ ಮಾಡುತ್ತಿರುವ ದ್ರೋಹ. ಸಿಎಂ, ಡಿಸಿಎಂ ರಾಜೀನಾಮೆಯೊಂದೇ ನಿಮ್ಮ ತಪ್ಪಿಗೆ ಪ್ರಾಯಶ್ಚಿತ್ತ ಎಂದಿದೆ.
ಮುಂದುವರಿದು, ಬಮುಲ್ ನಿರ್ದೇಶಕರಾದ ಡಿ.ಕೆ ಸುರೇಶ್ ಅವರೇ ನಿಮಗೆ ಬುದ್ಧಿಭ್ರಮಣೆಯಾಗಿದೆಯೇ ? ಜೆಡಿಎಸ್ ಮಾಡಿರುವ ಟ್ವೀಟ್ ಅನ್ನು ಮತ್ತೊಮ್ಮೆ ಮಗದೊಮ್ಮೆ ಗಮನಿಸಿ ಎಂದಿದೆ. ಭದ್ರತೆಯ ನೆಪವೊಡ್ಡಿ RCB ತಂಡದ ವಿಜಯೋತ್ಸವ ಮೆರವಣಿಗೆಗೆ ಕರ್ನಾಟಕ ಸರ್ಕಾರದ ತಡೆ ಸರಿಯಲ್ಲ ಎಂದು ಹೇಳಲಾಗಿದೆ.
ಸಿಎಂ , ಡಿಸಿಎಂ ಹಾಗೂ ಗೃಹ ಸಚಿವರೇ ಕಾಂಗ್ರೆಸ್ ಕಾರ್ಯಕ್ರಮಗಳಿಗೆ ಇರುವ ಭದ್ರತೆ, ಬೆಂಗಳೂರಿನಲ್ಲಿ ಆರ್ಸಿಬಿ ತಂಡದ ವಿಜಯೋತ್ಸವ ಮೆರವಣಿಗೆಗೆ ಯಾಕಿಲ್ಲ ? ಭದ್ರತೆಯ ದೃಷ್ಟಿಯಿಂದ ರದ್ದು ಮಾಡಿದ್ದು ಎಷ್ಟು ಸರಿ ? ವ್ಯವಸ್ಥಿತವಾಗಿ ವಿಜಯೋತ್ಸವ ಮೆರವಣಿಗೆ ನಡೆಸಿ ಎಂದು ಜೆಡಿಎಸ್ ಟ್ವೀಟ್ ಮಾಡಿತ್ತು..
ನಿಮ್ಮ ಅಣ್ಣ ಡಿಕೆಶಿ ಕನಕಪುರದ ಕೋರ್ಟ್ ಬಳಿ, ಮಾಧ್ಯಮಗಳನ್ನು ಉದ್ದೇಶಿಸಿ ಎಲ್ಲ ಅಭಿಮಾನಿಗಳು "ಸ್ಟೇಡಿಯಂ ಬಳಿ ಬನ್ನಿ" ಎಂದು ಆಹ್ವಾನ ನೀಡಿದ್ದರು. ಡಿ.ಕೆ.ಸುರೇಶ್ ಅವರೇ, #RCB ಅಭಿಮಾನಿಗಳಿಗೆ ನಿಮ್ಮ ಸಹೋದರ ನೀಡಿದ ಪ್ರೀತಿಯ ಆಹ್ವಾನದ ಈ ಮಾತನ್ನು ಮರೆತು ಬಿಟ್ಟಿರಾ ? ಸಿಎಂ ಸಿದ್ದರಾಮಯ್ಯ ಅವರು "ಈ ಐತಿಹಾಸಿಕ ಗೆಲುವಿನ ಸಂಭ್ರಮದಲ್ಲಿ ನೀವೂ ಭಾಗಿಯಾಗಿ" ಎಂದು ಮಾಡಿದ್ದ ಟ್ವೀಟ್ ಬಗ್ಗೆ ನಿಮಗೆ ಜಾಣ ಕುರುಡೇ, ಎರೆಡೆರೆಡು ಕಡೆ ಕಾರ್ಯಕ್ರಮಗಳನ್ನು ಆಯೋಜಿಸಿ ಎಂದು ಜೆಡಿಎಸ್ ಪಕ್ಷ ಹೇಳಿರಲಿಲ್ಲ. ಸಿಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸರ್ಕಾರದ ವತಿಯಿಂದ ವಿಧಾನಸೌಧದ ಮುಂದೆ ಕುಟುಂಬ ಸಮೇತ ಆರ್ಸಿಬಿ ಆಟಗಾರರ ಜೊತೆ ಸೆಲ್ಫಿ ತೆಗೆದು, ಫೋಟೋ ಶೂಟ್ ಮಾಡಿ ಎಂದು ನಾವು ಹೇಳಿರಲಿಲ್ಲ.
ಸ್ಟೇಡಿಯಂ ಬಳಿ ಕಾಲ್ತುಳಿತವಾಗಿ ಹೆಣಗಳು ಬೀಳುತ್ತಿದ್ದರೂ, ನಿಮ್ಮ ಸಹೋದರ ಕ್ರೀಡಾಂಗಣದ ಒಳಗೆ ಐಪಿಎಲ್ ಟ್ರೋಫಿಗೆ ಮುತ್ತಿಕ್ಕುತ್ತಿದ್ದರು. ಆರ್ಸಿಬಿ ಆಟಗಾರರ ಜೊತೆ ಫೋಟ್ ಶೂಟ್ ಮಾಡಿ, ತಾವೇ ಟ್ರೋಪಿ ಗೆದ್ದಂತೆ ಮುತ್ತಿಕ್ಕಿ ಸಂಭ್ರಮಿಸಿದ್ದು ದೇಶದ ಜನರೇ ನೋಡಿದ್ದಾರೆ.
ವಿರೋಧ ಪಕ್ಷಗಳು ಆಡಳಿತಾರೂಢ ಸರ್ಕಾರಕ್ಕೆ ಎಚ್ಚರಿಸಿ ಮಾಡುವ ಟ್ವೀಟ್ಗಳ ಜನಪರ ವಿಚಾರಗಳನ್ನು ಕಾರ್ಯಗತಗೊಳಿಸುವ ಇಚ್ಛಾಶಕ್ತಿ ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಿದೆಯೇ ? ಉತ್ತರಿಸಿ ಡಿಕೆ ಸುರೇಶ್ ಎಂದು ಪ್ರಶ್ನೆ ಮಾಡಿದೆ.












Click it and Unblock the Notifications