ಹೂಮಳೆ ಬಳಿಕ ಬೆಂಗಳೂರಲ್ಲೀಗ ಜೋರು ಮಳೆ
ಬೆಂಗಳೂರು, ಆಗಸ್ಟ್ 08: ರಾಜ್ಯದ ಉತ್ತರ ಭಾಗ ಹಾಗೂ ಕರಾವಳಿಯಲ್ಲಿ ಸುರಿಯುತ್ತಿದ್ದ ಜೋರು ಮಳೆ ರಾಜಧಾನಿ ಬೆಂಗಳೂರಿಗೂ ಕಾಲಿಟ್ಟಿದೆ.
ಕಳೆದ ಕೆಲವು ದಿನಗಳಿಂದ ಕೇವಲ ಹೂಮಳೆಯ ಅನುಭವ ಪಡೆದಿದ್ದ ಬೆಂಗಳೂರಿಗರು ಇಂದು ಜೋರು ಮಳೆಗೆ ಎದುರುಗೊಂಡರು. ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನದ ನಂತರ ಅಚಾನಕ್ ಆಗಿ ಜೋರು ಮಳೆ ಪ್ರಾರಂಭವಾಗಿದೆ.
ಜಯನಗರ, ಮೇಖ್ರಿ ವೃತ್ತ, ಮೆಜೆಸ್ಟಿಕ್, ಎಂ.ಜಿ.ರಸ್ತೆ, ಮಾರ್ಕೆಟ್ ಸೇರಿ ನಗರದ ಬಹುತೇಕ ಕಡೆಗಳಲ್ಲಿ ಜೋರು ಮಳೆ ವರದಿ ಆಗಿದ್ದು, ಕೆಲವು ಕಡೆ ಸಂಚಾರ ದಟ್ಟಣೆ ಉಂಟಾಗಿದೆ.

ವರಮಾಲಕ್ಷ್ಮಿ ಹಬ್ಬದ ಮುನ್ನಾ ದಿನ ಬಂದಿರುವ ಮಳೆ, ಜನರಲ್ಲಿ ಆಹ್ಲಾದದ ಜೊತೆಗೆ ವ್ಯಾಪಾರಸ್ತರಿಗೆ ಸಣ್ಣ ಆತಂಕವನ್ನೂ ತಂದಿದೆ. ಜನರು ಮಾರುಕಟ್ಟೆಗೆ ಬರುವ ಸಮಯದಲ್ಲಿ ಬಂದ ಮಳೆ ವ್ಯಾಪಾರಕ್ಕೆ ಪೆಟ್ಟು ನೀಡುವ ಆತಂಕ ವ್ಯಾಪಾರಸ್ತರದ್ದು.
ಹವಾಮಾನ ಇಲಾಖೆ ಪ್ರಕಾರ ಬೆಂಗಳೂರು ನಗರದಲ್ಲಿ ಇನ್ನೂ ಎರಡು ದಿನಗಳ ಕಾಲ ಮಳೆ ಆಗಲಿದೆ. ಆದರೆ ಅಪಾಯದ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿಲ್ಲವಾದ್ದರಿಂದ ಪ್ರಸ್ತುತ ಆತಂಕ ಪಡುವ ಅಗತ್ಯವಿಲ್ಲ.
ಉತ್ತರ ಕರ್ನಾಟದ ಬೆಳಗಾವಿ, ಬಾಗಲಕೋಟೆ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೂರಿದ್ದು, ರಕ್ಷಣಾ ಕಾರ್ಯಗಳು ನಡೆಯುತ್ತಿವೆ. ಕರಾವಳಿ ಜಿಲ್ಲೆಗಳಾದ ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲೂ ಭಾರಿ ಮಳೆ ಹಲವು ಅನಾಹುತಗಳನ್ನು ಉಂಟು ಮಾಡಿದೆ.












Click it and Unblock the Notifications