ಸಾರಕ್ಕಿ ಕೆರೆ ತೆರವು ನಿರಾಶ್ರಿತರಿಗೆ ಡಿಸಿ ಶಂಕರ್ ಅಭಯ
ಬೆಂಗಳೂರು, ಏ.20: ಸಾರಕ್ಕಿ ಕರೆ ಒತ್ತುವರಿ ತೆರವಿನಿಂದ ನಿರಾಶ್ರಿತರಾದವರಿಗೆ ಪುನರ್ವಸತಿ ಕಲ್ಪಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ. ಶಂಕರ್ ಭರವಸೆ ನೀಡಿದ್ದಾರೆ.
ಕಾರ್ಯಾಚರಣೆ ವೇಳೆ ನಿರಾಶ್ರಿತರು ಜಿಲ್ಲಾಧಿಕಾರಿ ಬಳಿ ಅಳಲು ತೋಡಿಕೊಂಡರು. ನಮಗೆ ಏನೂ ಗೊತ್ತಿಲ್ಲ. ಮೋಸ ಮಾಡಿ ಈ ಜಾಗ ನೀಡಿದರು. ಸಾಲ ಮಾಡಿ ಮನೆ ಕಟ್ಟಿಕೊಂಡಿದ್ದೇವು. ಈಗ ಬೀದಿಗೆ ಬೀಳುವಂತಾಗಿದೆ ಎಂದು ಸಮಸ್ಯೆ ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಡಿಸಿ ಪುನರ್ ವಸತಿ ಕಲ್ಪಿಸಿಕೊಡಲಾಗುವುದು ಎಂದು ತಿಳಿಸಿದರು.[ಸಾರಕ್ಕಿ ಕೆರೆ ತೆರವು: 2 ಸಾವಿರ ಕೋಟಿ ಮೌಲ್ಯದ ಜಾಗ ವಶ]

ಜಿಲ್ಲಾಧಿಕಾರಿ ಮಾತಿನಿಂದ ನಿಟ್ಟುಸಿರು ಬಿಟ್ಟ ನಿರಾಶ್ರಿತರು ಜಿಲ್ಲಾಧಿಕಾರಿ ಕಾಲು ಹಿಡಿಯಲು ಮುಂದಾದರು. ಆದರೆ ಜಿಲ್ಲಾಧಿಕಾರಿ ಜನರಿಂದ ಬಿಡಿಸಿಕೊಂಡು ಅರ್ಹರಿಗೆ ಸೌಲಭ್ಯ ತಲುಪಲಿದೆ ಎಂದು ತಿಳಿಸಿದರು.[ಡಿಸಿ ಶಂಕರ್ ದಿಟ್ಟ ನಡೆ: ಸಾರಕ್ಕಿ ಕೆರೆ ತೆರವು]
ಕಳೆದ ನಾಲ್ಕು ದಿನಗಳಿಂದ ನಿರಂತರ ಕಾರ್ಯಾಚರಣೆ ನಡೆಸಿ ಅತಿಕ್ರಮಣವಾದ ಎಲ್ಲ ಕಟ್ಟಡದ ಜಾಗ ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದ ಜಾಗವನ್ನು ಇನ್ನೆರಡು ದಿನದಲ್ಲಿ ಬಿಬಿಎಂಪಿ ಗೆ ನೀಡಲಾಗುವುದು ಎಂದು ಮಾಹಿತಿ ನೀಡಿದರು. ಯಾರ ಒತ್ತಡಕ್ಕೂ ಮಣಿಯುವ ಪ್ರಶ್ನೆಯೇ ಇಲ್ಲ. ಒತ್ತುವರಿ ಜಾಗ ಯಾರಿಗೆ ಸೇರಿದ್ದರೂ ನಿರ್ದಾಕ್ಷಿಣ್ಯವಾಗಿ ತೆರವು ಮಾಡುತ್ತೇವೆ. ಇನ್ನು 2-3 ದಿನ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.












Click it and Unblock the Notifications