Bengaluru Lion: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿಢೀರ್ ಸಿಂಹ..
ಬೆಂಗಳೂರಿನಲ್ಲಿ ಚಿರತೆ ನೋಡಿದ್ದು ಆಯ್ತು, ಕೊನೆಗೆ ರಾಜಧಾನಿ ಬೆಂಗಳೂರಿನ ಹೊರಗಡೆ ಹುಲಿ ಕೂಡ ಪ್ರತ್ಯಕ್ಷ್ಯವಾಗಿತ್ತು. ಹೀಗೆ ಬೆಂಗಳೂರಿನ ನಿವಾಸಿಗಳಿಗೆ ವನ್ಯ ಮೃಗಗಳ ಕುರಿತು ಭಯ ಮೂಡಿರುವ ಸಮಯದಲ್ಲೇ, ಇದೀಗ ಮತ್ತೊಂದು ಬ್ರೇಕಿಂಗ್ ನ್ಯೂಸ್ ಸಿಕ್ಕಿದೆ. ಆದ್ರೆ ಈ ಬಾರಿ ಬಂದಿರುವ ಸುದ್ದಿ ಸಿಂಹದ ಬಗ್ಗೆ. ಅರೆ ಹಾಗಾದರೆ ಬೆಂಗಳೂರಲ್ಲಿ ಸಿಂಹ ಕೂಡ ಪ್ರತ್ಯಕ್ಷ್ಯವಾಯ್ತಾ? ಬನ್ನಿ ಬೆಂಗಳೂರಿನ ಸಿಂಹದ ಸ್ಟೋರಿ ತಿಳಿಯೋಣ.
ಬೆಂಗಳೂರು ನಿವಾಸಿಗಳಿಗೆ ಕೆಲ ದಿನದಿಂದ ಚಿರತೆ ಭಯ ಶುರುವಾಗಿದೆ. ನಗರದ ಹೃದಯ ಭಾಗ ಚಿರತೆ ಕಂಡ ನಂತರ ಬೆಚ್ಚಿಬಿದ್ದಿದೆ. ಒಂದು ಚಿರತೆ ಮೇಲೆ ಗುಂಡು ಹಾರಿಸಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತಷ್ಟು ಚಿರತೆಗಳನ್ನ ಹುಡುಕಾಡುತ್ತಿದ್ದರು. ಈ ಸಮಯದಲ್ಲಿ ಬೆಂಗಳೂರು ಹೊರಗೆ ಚಿರತೆ ಜೊತೆ ಹುಲಿ ಕೂಡ ಪ್ರತ್ಯಕ್ಷ್ಯವಾಗಿತ್ತು. ಇಷ್ಟೆಲ್ಲಾ ಬೆಳವಣಿಗೆ ಮಧ್ಯೆ, ಐಟಿ ಬಿಟಿ ನಗರಿ ಎಂಬ ಬಿರುದು ಪಡೆದ ಈ ನಮ್ಮ ಬೆಂಗಳೂರಲ್ಲಿ ಈಗ ಸಿಂಹದ ಬಗ್ಗೆ ನ್ಯೂಸ್ ಹೊರಬಿದ್ದಿದೆ. ಸಿಂಹದ ಕುರಿತು ಈಗ ಬಂದಿರುವ ಸುದ್ದಿಯ ಸಂಪೂರ್ಣ ಮಾಹಿತಿ ಇಲ್ಲಿದೆ, ಮುಂದೆ ಓದಿ.

ಏನಿದು ಬೆಂಗಳೂರಿನಲ್ಲಿ ಸಿಂಹ?
ರಾಜ್ಯ ರಾಜಧಾನಿ ಬೆಂಗಳೂರು ಕೇವಲ ಗಗನಚುಂಬಿ ಸಿಮೆಂಟ್ ಕಟ್ಟಡ, ದೊಡ್ಡ ದೊಡ್ಡ ಸೇತುವೆ ಮತ್ತು ರಸ್ತೆಗಳಿಗೆ ಸೀಮಿತವಾಗಿಲ್ಲ. ಈ ನಮ್ಮ ಬೆಂಗಳೂರು ನೈಸರ್ಗಿಕವಾಗಿಯೂ ಭಾರಿ ಶ್ರೀಮಂತವಾಗಿದೆ. ಅದರಲ್ಲೂ ಬೆಂಗಳೂರು ಸುತ್ತಮುತ್ತಲ ಭಾಗವು ಭಾರಿ ಅರಣ್ಯ & ಗಿಡಮರಗಳಿಂದ ಕೂಡಿದೆ. ಹೀಗೆ ಬೆಂಗಳೂರಿನ ಕೀರ್ತಿ ಹೆಚ್ಚಿಸಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನ ಕೂಡ ಜಗತ್ತಿನಾದ್ಯಂತ ಸದ್ದು ಮಾಡುತ್ತದೆ. ಆದ್ರೆ ಇದೇ ಬನ್ನೇರುಘಟ್ಟದಲ್ಲಿ ಈಗ ಬೇಸರದ ಘಟನೆ ನಡೆದಿದೆ, ಅದು ಸಿಂಹದ ವಿಚಾರಕ್ಕೆ ಎಂಬುದು ಮತ್ತಷ್ಟು ಬೇಸರ ತರಿಸಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ...
ಅಂದಹಾಗೆ ಬೆಂಗಳೂರಿನಿಂದ ಕೆಲವೇ ಕಿಲೋಮೀಟರ್ ದೂರದಲ್ಲಿ ಇರುವ ಬನ್ನೇರುಘಟ್ಟ ಉದ್ಯಾನ ಅಂದ್ರೆ ಎಲ್ಲರಿಗೂ ಇಷ್ಟ. ಆದರೆ ಇದೇ ಬನ್ನೇರುಘಟ್ಟದಲ್ಲಿ ಈಗ ಸಿಂಹದ ಬಗ್ಗೆ ಬೇಸರದ ಸುದ್ದಿ ಹೊರಬಿದ್ದಿದೆ. ಬನ್ನೇರುಘಟ್ಟ ಮೃಗಾಲಯದಲ್ಲಿ ಪ್ರವಾಸಿಗರನ್ನು ರಂಜಿಸಿ ಕೈಬೀಸಿ ಕರೆಯುತ್ತಿದ್ದ 'ರಾಮ' ಎಂಬ ಸಿಂಹ ಇಂದು ಮೃತಪಟ್ಟಿದೆ. ಇನ್ನು ಈ 'ರಾಮ' ಎಂಬ ಸಿಂಹವು ಗಣೇಶ ಮತ್ತು ಸಿಂಹಿಣಿ ಅನುಗೆ ಜನಿಸಿತ್ತು. ಅನಾರೋಗ್ಯದ ಕಾರಣ ಸಿಂಹ, 16-11-2023 ರಂದು ಮುಂಜಾನೆ ಅಂದ್ರೆ ಇಂದು ಬೆಳಗ್ಗೆ ಮೃತಪಟ್ಟಿದೆ.

12 ಸಿಂಹದ ಮರಿಗಳ ತಂದೆ!
ಈಗ ಮೃತಪಟ್ಟಿರುವ ರಾಮ ಎಂಬ ಸಿಂಹವು, ಒಟ್ಟು 12 ಸಿಂಹದ ಮರಿಗಳಿಗೆ ತಂದೆಯಾಗಿ ಸಫಾರಿಯಲ್ಲಿ ಮಿಂಚಿತ್ತು. ಆದರೆ ನವೆಂಬರ್ 15 ರಂದು ಬೆಳಗ್ಗೆ ಸಿಂಹಕ್ಕೆ ವಾಂತಿ ಲಕ್ಷಣಗಳು ಕಾಣಿಸಿಕೊಂಡ ಕಾರಣ ಚಿಕಿತ್ಸೆ ಆರಂಭಿಸಲಾಗಿತ್ತು. ನವೆಂಬರ್ 15 ರ ಸಂಜೆ 7 ಗಂಟೆಗೆ ಈ ಸಿಂಹ ನಿಶ್ಯಕ್ತಿಯಿಂದ ಬಳಲುತ್ತಿತ್ತು ಎನ್ನಲಾಗಿದೆ. ಇದೇ ಕಾರಣ ಪಶುವೈದ್ಯರ ತಂಡ ತಕ್ಷಣ ಬಂದು ಚಿಕಿತ್ಸೆ ಆರಂಭಿಸಿತ್ತು. ಆದರೆ ಈ ಪ್ರಯತ್ನಗಳು ಫಲ ನೀಡಲೇ ಇಲ್ಲ ಎಂದು ಈಗ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಂತಿಮವಾಗಿ ಚಿಕಿತ್ಸೆಗೆ ಸ್ಪಂದಿಸದೆ ಇಂದು ಮುಂಜಾನೆ 'ರಾಮ' ಎಂಬ ಸಿಂಹ ಮೃತಪಟ್ಟ ವಿಚಾರವನ್ನು ಬನ್ನೇರುಘಟ್ಟ ಅಧಿಕಾರಿಗಳು ಹಂಚಿಕೊಂಡಿದ್ದಾರೆ. ಹಾಗೇ ಈ ಬಗ್ಗೆ ತನಿಖೆ ನಡೆಸುವ ಸಲುವಾಗಿ & ಸಿಂಹದ ಸಾವಿಗೆ ನಿಖರ ಕಾರಣ ತಿಳಿಯಲು ದೇಹದ ಅಂಗಾಂಗದ ಭಾಗಗಳನ್ನು ಇದೀಗ ಪರೀಕ್ಷೆಗೂ ಕಳುಹಿಸಲಾಗಿದೆ. ಹೆಚ್ಚಿನ ಪರೀಕ್ಷೆಗೆ IAH & VB ಲ್ಯಾಬ್ಗೆ ಕಳುಹಿಸಲಾಗುತ್ತದೆ ಎಂದು ಬನ್ನೇರುಘಟ್ಟ ಅಧಿಕಾರಿಗಳು ತಿಳಿಸಿದ್ದಾರೆ. ಹಾಗೇ ಈ ಸಿಂಹದ ಸಾವು ಬನ್ನೇರುಘಟ್ಟದ ಉದ್ಯಾನವನಕ್ಕೆ, ತುಂಬಲಾರದ ನಷ್ಟವಾಗಿದೆ ಎಂದು ಅಧಿಕಾರಿಗಳು ಸಂತಾಪ ಸೂಚಿಸಿದ್ದಾರೆ. ಸಿಂಹದ ಸಾವಿನ ಅಸಲಿ ಕಾರಣ ತಿಳಿಯಲು ಇನ್ನೂ ವರದಿಯು ಬರುವ ತನಕ ಕಾದು ನೋಡಬೇಕಾಗಿದೆ.












Click it and Unblock the Notifications