ದೈತ್ಯ ಓಲಾ, ಉಬರ್ ಗೆ ಸಡ್ಡು ಹೊಡೆಯಲು ಚಾಲಕರಿಂದ ಮಾಸ್ಟರ್ ಪ್ಲಾನ್!
ಆ್ಯಪ್ ಆಧಾರಿತ ಕ್ಯಾಬ್ ಸೇವೆ ನೀಡುವ ದೈತ್ಯ ಕಂಪನಿಗಳಾದ ಓಲಾ ಮತ್ತು ಉಬರ್ ಗೆ ಸಡ್ಡು ಹೊಡೆಯಲು ಬಂಡಾಯ ಚಾಲಕರು ನಿರ್ಧರಿಸಿದ್ದಾರೆ. ತಮ್ಮದೇ ಸ್ವಂತ ಆ್ಯಪ್ ಹೊಂದುವ ಹಾದಿಯಲ್ಲಿ ಈ ಚಾಲಕರು ಅಡಿ ಇಟ್ಟಿದ್ದಾರೆ.
ಬೆಂಗಳೂರು, ಫೆಬ್ರವರಿ 6: ಆ್ಯಪ್ ಆಧಾರಿತ ಕ್ಯಾಬ್ ಸೇವೆ ನೀಡುವ ದೈತ್ಯ ಕಂಪನಿಗಳಾದ ಓಲಾ ಮತ್ತು ಉಬರ್ ಗೆ ಸಡ್ಡು ಹೊಡೆಯಲು ಬಂಡಾಯ ಚಾಲಕರು ನಿರ್ಧರಿಸಿದ್ದಾರೆ. ತಮ್ಮದೇ ಸ್ವಂತ ಆ್ಯಪ್ ಹೊಂದುವ ಹಾದಿಯಲ್ಲಿ ಈ ಚಾಲಕರು ಅಡಿ ಇಟ್ಟಿದ್ದಾರೆ.
ತಮ್ಮ ಮೇಲಿನ ದೌರ್ಜನ್ಯಗಳನ್ನು ಖಂಡಿಸಿ ಓಲಾ ಮತ್ತು ಉಬರ್ ಚಾಲಕರು ಬೆಂಗಳೂರಿನಲ್ಲಿ ಕಳೆದ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಇದಕ್ಕೆ ಸರಕಾರವಾಗಲೀ ಆ್ಯಪ್ ಆಧಾರಿತ ಸೇವೆ ನೀಡುವ ಕಂಪನಿಗಳಾಗಿ ಸ್ಪಂದಿಸಿರಲಿಲ್ಲ. ಕೊನೆಗೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಮಾರ್ಚ್ 1ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಹೀಗಿದ್ದೂ ಸರಕಾರ ಮತ್ತು ಕಂಪೆನಿಗಳು ಕ್ಯಾರೇ ಅನ್ನುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ಸ್ವಂತ ಆ್ಯಪ್ ತಯಾರಿಸಿ ಈ ದೈತ್ಯ ಕಂಪೆನಿಗಳಿ ಸಡ್ಡು ಹೊಡೆಯಲು ಕ್ಯಾಬ್ ಚಾಲಕರು ನಿರ್ಧರಿಸಿದ್ದಾರೆ.[ಬೆಂಗಳೂರು: 7ನೇ ದಿನಕ್ಕೆ ಕಾಲಿಟ್ಟ ಓಲಾ, ಉಬರ್ ಚಾಲಕರ ಪ್ರತಿಭಟನೆ]
ಇನ್ನೇನು ಒಂದು ತಿಂಗಳಲ್ಲಿ ಆ್ಯಪ್ ಸಿದ್ದವಾಗಲಿದೆ ಎಂದು ಚಾಲಕರ ಸಂಘಟನೆ ಹೇಳಿದೆ. ಇದರ ರಚನೆಗೆ ಸಹಾಯ ಕೇಳಿ ಈಗಾಗಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಜತೆಗೂ ಒಂದು ಹಂತದ ಮಾತುಕತೆ ನಡೆಸಿದ್ದೇವೆ ಎಂದು ಓಲಾ, ಟಾಕ್ಸಿ ಫಾರ್ ಶೂರ್ ಮ್ತತು ಉಬರ್ ಚಾಲಕರ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಹೇಳಿದ್ದಾರೆ.
ಇದಕ್ಕಾಗಿ ಬೇರೆ ಬೇರೆ ಚಾಲಕರ ಒಕ್ಕೂಟದ ಪ್ರತಿನಿಧಿಗಳು ಸೇರಿ ಕೋರ್ ಕಮಿಟಿ ರಚನೆ ಮಾಡಿಕೊಂಡಿದ್ದಾರೆ. ಇದು ಆ್ಯಪ್ ಜಾರಿಗೆ ತರುವಲ್ಲಿ ಕೆಲಸ ಮಾಡಲಿದೆ.[ಓಲಾ, ಉಬರ್ ವಿರುದ್ಧ ಚಾಲಕರ ಪ್ರತಿಭಟನೆ]
ಸದ್ಯ ಇಲ್ಲಿವರೆಗೆ 8,000 ಚಾಲಕರು ಈ ಯೋಜನೆಗೆ ಬೆಂಬಲ ಸೂಚಿಸಿದ್ದಾರೆ. ಕಚೇರಿ ಎಲ್ಲಿ? ಹೇಗೆ ರಚನೆ ಮಾಡಬೇಕು? ಗ್ರಾಹಕ ಸೇವಾ ಪ್ರತಿನಿಧಿಗಳ ನೇಮಕ ಮುಂತಾದ ವಿಚಾರದಲ್ಲಿ ಚರ್ಚೆಗಳು ನಡೆಯುತ್ತಿವೆ ಎಂದು ಪಾಷಾ ಹೇಳಿದ್ದಾರೆ. ಈ ಆ್ಯಪ್ ತಯಾರಿಕೆ ಕುಮಾರಸ್ವಾಮಿ ಹಣ ನೀಡಲಿದ್ದಾರೆ. ಮತ್ತು ತಂತ್ರಜ್ಞರನ್ನು ನೇಮಿಸಿಕೊಳ್ಳಲು ಸಹಾಯ ಮಾಡಲಿದ್ದಾರೆ.
ಈಗಾಗಲೇ ಅರ್ಧದಷ್ಟು ಚಾಲಕರು ಕೆಲಸಕ್ಕೆ ವಾಪಾಸಾಗಿದ್ದಾರೆ. ಇನ್ನುಳಿದವರು ಇನ್ನೂ ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲವು ಕಾರುಗಳನ್ನು ಓಲಾ ಮತ್ತು ಉಬರ್ ಖರೀದಿಸಿ ಚಾಲಕರನ್ನು ನೇಮಿಸಿಕೊಂಡಿರುವುದರಿಂದ ಅಂತಹ ಚಾಲಕರು ಮಾತ್ರ ಕೆಲಸಕ್ಕೆ ವಾಪಾಸಾಗಿದ್ದಾರೆ.
ಚಾಲಕರದ್ದೇ ಆ್ಯಪ್ ಬಂದರೆ ಮಾರುಕಟ್ಟೆಯಲ್ಲಿ ಸ್ಪರ್ಧೆ ಸೃಷ್ಟಿಯಾಗಲಿದೆ. ಇದರಿಂದ ಈಗ ನೀಡುತ್ತಿರುವ ಇನ್ಸೆಂಟಿವ್ ಜಾಸ್ತಿಯಾಗಬಹುದು ಎಂದು ಸದ್ಯ ಪ್ರತಿಭಟನೆ ಬಿಟ್ಟು ಕೆಲಸಕ್ಕೆ ಮರಳಿರುವ ಓಲಾ ಮತ್ತು ಉಬರ್ ಚಾಲಕರೂ ಅಂದುಕೊಂಡಿದ್ದಾರೆ.