ಜಯನಗರ ರಣಧೀರ ಕಂಠೀರವ ಪಾರ್ಕ್ ವಿಶೇಷತೆಗಳು
ಬೆಂಗಳೂರು, ಜೂ, 26: ನೀವು ಇಲ್ಲಿ ಹೂವಿನ ಮೇಲೆ ಕುಳಿತು ಸುಂದರ ಪರಿಸರ ಆಸ್ವಾದಿಸಬಹುದು. ಅಂಗೈ ಮೇಲೆ ಕುಳಿತು ದಿನದ ಆಯಾಸವನ್ನು ಮರೆಯಬಹುದು. ದೇಹ ದಂಡಿಸಬೇಕೆಂದರೆ ಮಿನಿ ಜಿಮ್ ಕೂಡಾ ಇದೆ. ಕರ್ನಾಟಕದ ಇತಿಹಾಸ ಸಾರುವ ರಾಜ ಮಹಾರಾಜರ ಪುತ್ಥಳಿ ಸದಾ ಸ್ಫೂರ್ತಿ ನೀಡುತ್ತಿರುತ್ತದೆ. ಜತೆಗೆ ನಿಮ್ಮ ಜ್ಞಾನ ಭಂಡಾರವನ್ನು ವೃದ್ಧಿ ಮಾಡಿಕೊಳ್ಳಬಹುದು.
ಹೌದು... ನಾವು ಹೇಳ ಹೊರಟಿರುವುದು ಜಯನಗರದ ಸೌತ್ ಎಂಡ್ ವೃತ್ತದ ಸಮೀಪ ಲೋಕಾರ್ಪಣೆಗೆ ಸಿದ್ಧವಾಗಿರುವ 'ರಣಧೀರ ಕಂಠೀರವ' ಹೆಸರಿನ ಉದ್ಯಾನದ ಬಗ್ಗೆ. ಸೌತ್ ಎಂಡ್ ವೃತ್ತಕ್ಕೆ ಮತ್ತೊಂದು ಹಿರಿಮೆಯನ್ನು ಈ ಪಾರ್ಕ್ ತಂದುಕೊಡುವುದರಲ್ಲಿ ಅನುಮಾನವಿಲ್ಲ. ಅಂಬರ ಚುಂಬನ ಗಂಟೆ ಗಡಿಯಾರ, ಡಾ. ರಾಜ್ ಕುಮಾರ್ ಪುತ್ಥಳಿ, ಮೆಟ್ರೋ ನಿಲ್ದಾಣ, ಗಿಡಮೂಲಿಕೆ ಉದ್ಯಾನ, ದಕ್ಷಿಣ ಕೇಂದ್ರ ಗ್ರಂಥಾಲಯ ಪಟ್ಟಿಗೆ ಈ ಪಾರ್ಕ್ ಹೊಸ ಸೇರ್ಪಡೆ.[ಜಯನಗರ ಸೌತ್ ಎಂಡ್ ವೃತ್ತಕ್ಕೀಗ 'ಸಂಜೀವಿನಿ' ಶಕ್ತಿ]
ಸುಮಾರು 2.25 ಎಕರೆ ವಿಸ್ತೀರ್ಣದ ಉದ್ಯಾನದಲ್ಲಿ ಒಂದೇ ವೇದಿಕೆಯಡಿ ರಾಜ್ಯದ ಪ್ರತಿಷ್ಠಿತ ರಾಜ ಮನೆತನಗಳ ಮಾಹಿತಿ, ನಾಡಿನ 711 ಕವಿಗಳ ಪೂರ್ಣ ವಿವರ ದೊರೆಯಲಿದೆ. ಬಿಬಿಎಂಪಿ ಅನುದಾನದಡಿ ನಿರ್ಮಾಣವಾಗಿರುವ ಪಾರ್ಕ್ ಶೀಘ್ರವೇ ಲೋಕಾರ್ಪಣೆಗೊಳ್ಳಲಿದ್ದು ಅಂತಿಮ ಹಂತದ ಕೆಲಸಗಳು ಯಾವ ರೀತಿಯಲ್ಲಿದೆ ಎಂದು ಒಂದು ಸುತ್ತು ಹಾಕಿಕೊಂಡು ಬರೋಣ....

ಉದ್ಯಾನ ಎಲ್ಲಿದೆ?
ಸೌತ್ ಎಂಡ್ ವೃತ್ತದಿಂದ ಬನಶಂಕರಿ ಕಡೆಗೆ ತೆರಳುವ ರಸ್ತೆಯ ಬಲಕ್ಕೆ ಉದ್ಯಾನ ನಿರ್ಮಾಣವಾಗುತ್ತಿದೆ. ಅಂಬರ ಚುಂಬನ ಗಡಿಯಾರದ ಹಿಂದೆ ಎಂದು ಕರೆದರೂ ತಪ್ಪಿಲ್ಲ. ಸಂಜೀವಿನಿ ಉದ್ಯಾನ ಒಂದು ಕಡೆ, ಒಂದು ಕಡೆ ರಣಧೀರ ಕಂಠೀರವ' ಉದ್ಯಾನ.

ಸ್ವಾಗತಿಸುವ ಹೊಯ್ಸಳರ ಲಾಂಛನ
ಮುಖ್ಯ ರಸ್ತೆ ಕಡೆಯಿಂದ ಉದ್ಯಾನ ಪ್ರವೇಶ ಮಾಡಿದಾಗ ನಿಮ್ಮನ್ನು ಹೊಯ್ಸಳರ ಲಾಂಛನ ಸಿಂಹ ಸ್ವಾಗತಿಸುತ್ತವೆ. ನಂತರ ಕಾವೇರಿ ತಾಯಿ ಒಳಕ್ಕೆ ಕರೆದುಕೊಳ್ಳುತ್ತಾಳೆ. ನಂತರ ಎರಡೂ ದಿಕ್ಕಿನಲ್ಲಿ ವಿಶಾಲ ಪಾರ್ಕ್ ನಿಮಗೆ ಭವ್ಯ ಸ್ವಾಗತ ನೀಡುತ್ತದೆ.

ಸುಂದರ ನೋಟ
ಎಡಕ್ಕೆ ತಿರುಗಿದರೆ ಮಿನಿ ಜಿಮ್ ಮತ್ತು ರಾಜರ ಪ್ರತಿಮೆ ಕಾಣಸಿಗುವುದು. ಜತೆಯಲ್ಲಿ ಹೂವಿನ ಆಕಾರದ ಆಸನಗಳು, ಅಂಗೈ ಆಕಾರದ ಆಸನಗಳನ್ನು ವಿಶೇಷ ಬಣ್ಣಗಳಿಂದ ಪೇಂಟ್ ಮಾಡಲಾಗಿದ್ದು ಮನಸ್ಸಿಗೆ ಉಲ್ಲಾಸ ನೀಡುವುದರಲ್ಲಿ ಅನುಮಾನವಿಲ್ಲ

ಮಧ್ಯದಲ್ಲಿ ಕಾರಂಜಿ
ಉದ್ಯಾನದ ಮಧ್ಯಭಾಗದಲ್ಲಿ ದೊಡ್ಡ ಕಾರಂಜಿ ನಿರ್ಮಾಣ ಮಾಡಲಾಗಿದೆ. ಸಿಂಹ ಮುಖದ ಕಾರಂಜಿಗೆ ಬಣ್ಣ ನೀಡಲಾಗಿದ್ದು ಲೋಕಾರ್ಪಣೆ ನಂತರ ಪರಿಸರದ ಅಂದ ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ. ಅಲ್ಲಿಯೇ ಬೃಹತ್ ತೊಟ್ಟಿಯಲ್ಲಿ ತಯಾರಿ ಮಾಡಲಾಗಿರುವ ಡ್ರಿಂಕ್ಮ್ಯಾನ್ ನನ್ನು ಮಾತನಾಡಿಸಿಕೊಂಡೇ ಬರಬೇಕು.

ಉದ್ಯಾನಕ್ಕೆ ಬಂದ ರಾಕ್ಷಸ!
ಬಲಗಡೆಯ ಮೂಲೆಯಲ್ಲಿ ರಾಕ್ಷಸ ಆಕೃತಿಯೊಂದನ್ನು ನಿರ್ಮಾಣ ಮಾಡಲಾಗಿದ್ದು ಪಾರ್ಕ್ ಗೆ ನಿಜ ಕಳೆ ತಂದುಕೊಟ್ಟಿದೆ. ಮಕ್ಕಳ ಆಕರ್ಷಣೆಗೆಂದೇ ಇದನ್ನು ನಿರ್ಮಾಣ ಮಾಡಲಾಗಿದೆ.

ಆರೋಗ್ಯಕ್ಕೆ ಟಾನಿಕ್
ವಾಕಿಂಗ್ ಟ್ರ್ಯಾಕ್ಗೆ ಆರೋಗ್ಯ ವೃದ್ಧಿಸುವ ಆಕ್ಯುಪ್ರೆಷರ್ನ ಟೈಲ್ಸ್ಗಳನ್ನು ಅಳವಡಿಸಲಾಗುತ್ತಿದೆ. ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ಪ್ರತ್ಯೇಕ ಜಿಮ್ ಇದ್ದು ಮನರಂಜನೆ ಜತೆ ಆರೋಗ್ಯ ಕಾಪಾಡಿಕೊಳ್ಳಬಹುದು.

ಪರಿಸರ ಕಾಳಜಿ
19 ಬಣ್ಣದ ಗುಲಾಬಿ ಹೂವಿನ ಗಿಡಗಳು ಪುಷ್ಪಪ್ರಿಯರ ಮನ ಸೆಳೆಯಲಿವೆ. 55 ಸಾವಿರ ಲೀಟರ್ ನೀರು ಸಂಗ್ರಹಿಸುವಂತೆ 11ಇಂಗುಗುಂಡಿಗಳನ್ನು ನಿರ್ಮಿಸಲಾಗಿದೆ. ತ್ಯಾಜ್ಯದ ಮರುಬಳಕೆಯಿಂದ ಪಡೆದ ವಿದ್ಯುತ್ ಉಪಯೋಗಿಸಿ ದೀಪಗಳನ್ನು ಬೆಳಗಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.












Click it and Unblock the Notifications