Bengaluru Rain: ನೆನ್ನೆ 136.5 ಮಿಮಿ ಮಳೆ ದಾಖಲು: ಮುಂದಿನ 5 ದಿನದ ಹವಾಮಾನ ಮುನ್ಸೂಚನೆ ವರದಿ
ಬೆಂಗಳೂರು, ಸೆಪ್ಟಂಬರ್ 01: ದಾಖಲೆಮಟ್ಟದ ತಾಪಮಾನಕ್ಕೆ ಕಂಗೆಟ್ಟಿದ್ದ ಉದ್ಯಾನ ನಗರಿ ಬೆಂಗಳೂರಿಗೆ ಗುರುವಾರ ರಾತ್ರಿ ಮಳೆ ತಂಪೆರೆದಿದ್ದಾರೆ. ಒಂದೆಡೆ ಸಂತಸವಾದರೆ, ಮತ್ತೊಂದೆಡೆ ಸಂಚಾರ, ಮತ್ತಿತರ ತೊಂದರೆ ಅನುಭವಿಸಬೇಕಾಯಿತು. ಈ ಮಳೆ ಮುಂದಿನ ಐದು ದಿನಗಳ ಕಾಲ ಹೀಗೆ ಮುಂದುವರಿಯಲಿದೆ. ಇನ್ನೂ ಗುರುವಾರ ತಡರಾತ್ರಿ ಪಶ್ಚಿಮ ವಲಯದ 136.5 ಮಿಲಿ ಮೀಟರ್ ಮಳೆ ದಾಖಲಾಗಿದೆ.
ಪಶ್ಚಿಮ ವಲಯದ ರಾಜ್ಮಹಲ್ ಗುಟ್ಟಹಳ್ಳಿಯಲ್ಲಿ ಅತ್ಯಧಿಕ 136.5 ಮಿಲಿ ಮೀಟರ್ ಮಳೆ ದಾಖಲಾಗಿದೆ. ವಿವಿಧೆಡೆ ಇದೇ ರೀತಿ ಜೋರು ಮಳೆ ಬಿದ್ದಿದೆ. ರಾತ್ರಿ 8 ಗಂಟೆ ನಂತರ ಆರಂಭವಾದ ಮಳೆ ತಡರಾತ್ರಿವರೆಗೂ ಭರ್ಜರಿ ಸುರಿಯಿತು.

ನಗರದಲ್ಲಿ ಎರಡು ವಾರಗಳ ಹಿಂದೆ ಮಳೆ ದಾಖಲಾಗಿತ್ತು. ಅದಾದ ಬಳಿಕ ನಿರಂತರವಾಗಿ ದಾಖಲೆ ಮಟ್ಟದಲ್ಲಿ ಗರಿಷ್ಠ ತಾಪಮಾನ ಏರಿಕೆ ಆಗುತ್ತಲೇ ಇತ್ತು. ಗುರವಾರವು ಬೆಳಗ್ಗೆಯಿಂದಲೇ ಭಾರೀ ಬಿಸಿಲ ವಾತಾವರಣ ಕಂಡು ಬಂದಿದ್ದು, ಈ ಶುಷ್ಕ ವಾತಾವರಣಕ್ಕೆ ನೆನ್ನೆ ಸುರಿದ ಮಳೆ ಬ್ರೇಕ್ ನೀಡಿತು. ಮಳೆಗಾಲದಲ್ಲೂ ಬೆಸಿಗೆ ಅನುಭವ ಪಡೆದು ಸೆಕೆಗೆ ನರಳುತ್ತಿದ್ದ ನಗರವಾಸಿಗಳು ಮಳೆಯಿಂದ ನಿಟ್ಟುಸಿರು ಬಿಡುವಂತಾಯಿತು.
ಮುಂದಿನ ಐದು ದಿನ ಮಳೆ ಮುನ್ಸೂಚನೆ
ಮುಂಗಾರು ಮಳೆ ಸದ್ಯ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಸಕ್ರಿಯಗೊಂಡ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಕಾರಣದಿಂದ ಬೆಂಗಳೂರಿನಲ್ಲಿ ಮುಂದಿನ ಐದಾರು ದಿನಗಳ ಕಾಲ ಮಧ್ಯಾಹ್ನದ ನಂತರ ಇಲ್ಲವೇ ರಾತ್ರಿ ಉತ್ತಮ ಮಳೆ ಸುರಿಯಲಿದೆ. ಒಂದೆರಡು ಧಾರಾಕಾರ ಮಳೆ ಆದರೆ, ಇನ್ನೂ ಕೆಲವೆಡೆ ಹಗುರದಿಂದ ಸಾಧಾರಣವಾಗಿ ಮಳೆ ಆಗಲಿದೆ.
ಬೆಳಗ್ಗೆಯಿಂದ ಇಲ್ಲವೇ ಆಗಾಗ ಬಿಸಿಲಿನ ವಾತಾವರಣ ಇದ್ದರೂ ಸಹಿತ ಸಂಜೆ ಬಳಿಕ ಎಲ್ಲವು ಮರೆಯಾಗಿ ಮೋಡ ಕವಿದ ವಾತಾವರಣ ಸೃಷ್ಟಿಯಾಗಲಿದೆ. ಈ ಸಂಬಂದ ಬಿಬಿಎಂಪಿಯು ತಗ್ಗು ಪ್ರದೇಶ, ಅಂಡರ್ಪಾಸ್ಗಳಲ್ಲಿ ಅಗತ್ಯ ಎಚ್ಚರಿಕೆ ವಹಿಸಲಿದೆ.

ಐದು ದಿನ ಮಳೆಯ ಮುನ್ಸೂಚನೆ ಇದ್ದರೂ ಸಹಿತ ತಾಪಮಾನದಲ್ಲಿ ಹೇಳಿಕೊಳ್ಳುವಂತಹ ಬದಲಾವಣೆಗಳು ಇಲ್ಲದಾಗಿದೆ. ಅಂದರೆ ಮಳೆ ಮಧ್ಯೆ ನಗರದ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಂಭವವಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ (KSNDMC) ಮಳೆ ಮುನ್ಸೂಚನಾ ವರದಿ ಮಾಹಿತಿ ನೀಡಿದೆ.
ಗುರುವಾರ ರಾತ್ರಿ ಅಬ್ಬರಿಸಿದ ಮಳೆ ವಿವರ
ರಾತ್ರಿ ಬಿಬಿಎಂಪಿ ವ್ಯಾಪ್ತಿಯ ಪಶ್ಚಿಮ ವ್ಯಾಪ್ತಿಯಲ್ಲಿ ಜೋರಾಗಿ ಅಬ್ಬರಿಸಿದ ಮಳೆ ರಾಜ್ಮಹಲ್ ಗುಟ್ಟಹಳ್ಳಿಯಲ್ಲಿ ಅಧಿಕ 136.5 ಮಿಲಿ ಮೀಟರ್ ದಾಖಲಾಗಿದೆ. ಇದರೊಂದಿಗೆ ಯಲಹಂಕದಲ್ಲಿ 113 ಮಿ.ಮೀ, ವಿದ್ಯಾರಣ್ಯಪು 112 ಮಿ.ಮೀ, ವಿದ್ಯಾಪೀಠ 95ಮಿ.ಮೀ, ಸಂಪಂಗಿರಾಮನಗರ (2) 89ಮಿ.ಮೀ, ವಿಶ್ವನಾಥ್ ನಾಗೇನಹಳ್ಳಿ 88ಮಿ.ಮೀ, ಎಚ್ಎಎಲ್ ವಿಮಾಣ ನಿಲ್ದಾಣ 87.5ಮಿ.ಮೀ, ಕೊಡಿಗೇಹಳ್ಳಿ 86.5ಮಿ.ಮೀ, ಅಟ್ಟೂರು 86 ಮಿ.ಮೀ, ಸಂಪಂಗಿರಾಮನಗರ (1) 84ಮಿ.ಮೀ, ಕೋಣನಕುಂಟೆ 76.5ಮಿ.ಮೀ, ಕೆಂಗೇರಿ 76ಮಿ.ಮೀ, ಚೌಡೇಶ್ವರಿ ವಾರ್ಡ್ 74.5ಮಿ.ಮೀ, ರಾಜರಾಜೇಶ್ವರಿ ನಗರ 73.5ಮಿ.ಮೀ, ಗಾಳಿ ಆಂಜನೇಯ ವಾರ್ಡ್ 71ಮಿ.ಮೀ ಮಳೆ ಬಿದ್ದಿದೆ.
ಇನ್ನೂಳಿದಂತೆ ಸಾಧಾರಣ ಮಳೆ ಸುರಿದಿದೆ. ಇದರಿಂದ ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡು ಕೆಲ ಕಾಲ ವಾಹನ ಸಂಚಾರ ಅಸ್ತವೆಸ್ತವಾಯಿತು. ತಗ್ಗು ಪ್ರದೇಶದ ಮನೆಗಳಿ ನೀರು ನುಗ್ಗಿ ಅವಾಂತರ ಸೃಷ್ಟಿಸಿತು. ಇನ್ನೂ ಕೆಲವೆಡೆ ಮರ ಕೊಂಬೆಗಳು ಬಿದ್ದಿವೆ ಎಂದು ತಿಳಿದು ಬಂದಿದೆ. ಇನ್ನೂ ಕರ್ನಾಟಕದ ಕರಾವಳಿ ಸೇರಿದಂತೆ ಕೆಲವು ಒಳನಾಡಿನ ಜಿಲ್ಲೆಗಳಲ್ಲಿ ಉತ್ತಮ ಮಳೆ ಆಗಿದೆ.












Click it and Unblock the Notifications