Bengaluru rain: ಮೂರು ದಿನದ ಬೆಂಗಳೂರು ಹವಾಮಾನ ವರದಿ, ಮಾಹಿತಿ
ಬೆಂಗಳೂರು, ಜೂನ್ 09: ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿಯಲ್ಲಿ ಒಂದು ದಿನ ಬಿಸಿಲಿದ್ದರೆ, ಇನ್ನೊಂದು ದಿನ ಮಳೆಯ ಆಗಮನವಾಗುತ್ತಿದೆ. ಸದ್ಯ ಎಲ್ಲೆಲ್ಲೂ ಬಿಪರ್ಜಾಯ್ ಚಂಡಮಾರುತ ಅಬ್ಬರ ಉಂಟಾಗಿದ್ದರ ಹಿನ್ನೆಲೆಯಲ್ಲಿ ಮುಂದಿನ ಜೂನ್ 12ರವರೆಗೆ ನಗರದಲ್ಲಿ ಸಾಧಾರಣದಿಂದ ಧಾರಾಕಾರ ಮಳೆ ಮುಂದುವರಿಯಲಿದೆ.
ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಚಂಡಮಾರುತವು ತೀವ್ರಗೊಳ್ಳುತ್ತಲೇ ಸಾಗಿದೆ. ಇದರ ಪ್ರಭಾವದಿಂದ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮಳೆ ಸುರಿಯುತ್ತಿದೆ. ಅಂತೆಯೇ ಬೆಂಗಳೂರಿನ ಕೆಲವೆಡೆ ಗುರುವಾರ ಸಂಜೆಯೂ ವ್ಯಾಪಕವಾಗಿ ಸುರಿದಿದೆ.

ಈ ಮಳೆಯು ಮುಂದಿನ ಮೂರು ದಿನ ಮುಂದುವರಿಯುವ ಸಾಧ್ಯತೆ ಇದೆ. ಬೆಳಗ್ಗೆಯಿಂದ ಬಿಸಿಲು ಕಂಡು ಬಂದರೂ ಸಹಿತ ಸಂಜೆಯಾಗುತ್ತಿದ್ದಂತೆ ಕಡಿಮೆಯಾಗಿ ಮಳೆ ಶುರುವಾಗುತ್ತದೆ. ಮೆಜೆಸ್ಟಿಕ್ ಸುತ್ತಮುತ್ತಲಿನ ಪ್ರದೇಶಗಳು, ಹಂಪಿನಗರ, ವಿಜಯನಗರ, ನಾಯಂಡಹಳ್ಳಿ, ಕೆಂಗೇರಿ, ಯಶವಂತಪುರ ಭಾಗದಲ್ಲಿ ಹಗುರ ಮಳೆ ಇಲ್ಲವೇ ಉತ್ತಮ ಮಳೆ ನಿರೀಕ್ಷೆ ಇದೆ.
ಇತ್ತ ಹೆಬ್ಬಾಳ, ಮಹದೇವಪುರ ವಲಯ, ಯಲಹಂಕ, ಎಚ್ಎಲ್ ವಿಮಾನ ನಿಲ್ದಾಣ, ನಾಗವಾರ, ಗೊಟ್ಟಿಗೆರೆ, ವೈಟ್ಪಿಲ್ಡ್, ಮಾರತ್ತಹಳ್ಳಿ, ಕೋರಮಂಗಲ, ಮಡಿವಾಳ ಕಡೆಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುವ ನಿರೀಕ್ಷೆ ಇದೆ. ಕೆಲವೆಡೆ ತುಂತುರು ಮಳೆಯ ಆಗಮನವಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮುನ್ಸೂಚನೆ ವರದಿ ತಿಳಿಸಿದೆ.
ಮುಂದಿನ ಮೂರು ದಿನ ನಗರದಲ್ಲಿ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂದು ತಿಳಿಸಲಾಗಿದೆ. ಗುರುವಾರ ಸಂಜೆ ನಗರದ ಹಗದೂರಿನಲ್ಲಿ 38 ಮಿಲಿ ಮೀಟರ್ ಮಳೆ ದಾಖಲಾಗಿದೆ.

ಕರಾವಳಿ ಜಿಲ್ಲೆಗಳಿಗೆ 3 ದಿನ ಯೆಲ್ಲೋ ಅಲರ್ಟ್
ಕರ್ನಾಟಕದಲ್ಲಿ ನಾಳೆಯಿಂದ ಮೂರು ದಿನ ಅಂದರೆ ಜೂನ್ 10ರಿಂದ 12ರವರೆಗೆ ಕರಾವಳಿ ಜಿಲ್ಲೆಗಳಿಗೆ ಗುಡುಗು ಮಿಂಚು ಸಹಿತ ಭಾರೀ ಮಳೆ ಬರಲಿದೆ. ಹೀಗಾಗಿ ಮೂರು ದಿನ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ''ಹಳದಿ ಎಚ್ಚರಿಕೆ'' ನೀಡಿದೆ.
ಉಳಿದಂತೆ ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಗಾಳಿ ಸಹಿತ ಜೋರು ಮಳೆ ಬರಲಿದೆ.












Click it and Unblock the Notifications