ಬೆಂಗಳೂರು ಮಳೆ: ಗಗನಕ್ಕೇರಿದ ಹೋಟೆಲ್ ರೂಮ್ಗಳ ದರ!
ಬೆಂಗಳೂರು, ಸೆಪ್ಟೆಂಬರ್ 07: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರು ಪೂರ್ವ ಭಾಗ ಜಲಕಂಟಕ ಎದುರಿಸುತ್ತಿದ್ದು, ಜನರ ಮನೆಗಳಿಗೆ ನೀರು ನುಗ್ಗಿದೆ. ಜನರು ಸುರಕ್ಷಿತ ತಾಣಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ. ಹೀಗಾಗಿ ಅವರು ಆಶ್ರಯಕ್ಕಾಗಿ ಹೋಟೆಲ್ ರೂಮ್ಗಳು, ಲಾಡ್ಜ್ಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ. ಆದರೆ ಇದೇ ಸಂದರ್ಭ ಎಂದು ಹೋಟೆಲ್ನವರು ಈಗ ದುಪ್ಪಟ್ಟು ಬೆಲೆ ಏರಿಸಿವೆ.
ಬಹಳ ಇಷ್ಟದಿಂದ ಕೊಂಡ ಮನೆಗಳು ಜಲಾವೃತಗೊಂಡು ನೆಲೆ ಬಿಡಬೇಕಾದ ಸ್ಥಿತಿ ಬಂದೋದಗಿದೆ. ಬೆಂಗಳೂರಿನ ಪೂರ್ವ ಭಾಗದ ಟೆಕ್ ಕಾರಿಡಾರ್ ಜಲಾವೃತವಾಗಿ ತಾತ್ಕಾಲಿಕ ಆಶ್ರಯಕ್ಕಾಗಿ ಜನರು ಹೋಟೆಲ್ಗಳಿಗೆ ಮುಗಿಬಿಳುತ್ತಿದ್ದಾರೆ. ಹೀಗಾಗಿ ಹೋಟೆಲ್ ದರಗಳು ಗಗನಕ್ಕೇರಿವೆ. ಸ್ಥಳಾಂತರಗೊಂಡ ಮತ್ತು ಹತಾಶ ಕುಟುಂಬಗಳು ಈಗ ಒಂದು ರಾತ್ರಿಗೆ ಸರಾಸರಿ 30,000-40,000 ರೂ.ಗೆ ಬೆಲೆ ತೆರಬೇಕಾದ ಅನಿವಾರ್ಯತೆ ಬಂದೊದಗಿದೆ.
ವಿದ್ಯುತ್, ನೀರು ಇಲ್ಲ: ಬೆಂಗಳೂರು ಪ್ರವಾಹಕ್ಕೆ ಸಿಲುಕಿದ್ದ ಕುಟುಂಬಗಳು ಹೋಟೆಲ್ಗೆ ಶಿಫ್ಟ್
ಪರ್ಪಲ್ಫ್ರಂಟ್ ಟೆಕ್ನಾಲಜೀಸ್ನ ಸಿಇಒ ಮತ್ತು ಸಂಸ್ಥಾಪಕಿ ಮೀನಾ ಗಿರಿಸಬಲ್ಲಾಳ ಮಾತನಾಡಿ, "ಯಮಲೂರಿನಲ್ಲಿ ತಮ್ಮ ಐಷಾರಾಮಿ ಗೇಟೆಡ್ ಸಮುಚ್ಚಾಯವು ಜಲಾವೃತಗೊಂಡ ನಂತರ ಓಲ್ಡ್ ಏರ್ಪೋರ್ಟ್ ರಸ್ತೆಯ ಹೋಟೆಲ್ನಲ್ಲಿ ರಾತ್ರಿ ಕಳೆಯಲು ಅವರ ನಾಲ್ಕು ಜನರ ಕುಟುಂಬವು 42,000 ರೂ. ಬೆಲೆ ತೆತ್ತಿದೆ," ಎಂದು ಹೇಳಿದ್ದಾರೆ.
ಅಧಿಕ ಬೆಲೆ ತೆತ್ತರೂ ರೂಮ್ ಸಿಗುತ್ತಿಲ್ಲ
ವೈಟ್ಫೀಲ್ಡ್, ಔಟರ್ ರಿಂಗ್ ರೋಡ್, ಓಲ್ಡ್ ಏರ್ಪೋರ್ಟ್ ರಸ್ತೆ ಮತ್ತು ಕೋರಮಂಗಲದಲ್ಲಿರುವ ಕೆಲವು ಹೋಟೆಲ್ಗಳಲ್ಲಿ ಶುಕ್ರವಾರದವರೆಗೂ ಸಂಪೂರ್ಣವಾಗಿ ರೂಮ್ಗಳು ಬುಕ್ ಆಗಿವೆ ಎಂದು ತಿಳಿದು ಬಂದಿದೆ. ಗೇಟೆಡ್ ಸಮುದಾಯದ ನಿವಾಸಿಯೊಬ್ಬರಿಗೆ ರೂಮ್ಗಳಿಗೆ ಅಧಿಕ ಬೆಲೆಯ ಹೊರತಾಗಿಯೂ ಜನರು ಕೊಠಡಿಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಆರಂಭದಲ್ಲಿ ಪ್ರವಾಹದ ನೀರು ಕಡಿಮೆಯಾಗುವವರೆಗೂ ನಾವು ನಮ್ಮ ವಿಲ್ಲಾದ ಮೊದಲ ಮಹಡಿಯಲ್ಲಿ ಇರಬಹುದೆಂದು ನಾವು ಭಾವಿಸಿದ್ದೇವು. ಆದರೆ ವಿದ್ಯುತ್ ಬ್ಯಾಕ್ ಅಪ್ ಖಾಲಿಯಾಯಿತು. ಆದ್ದರಿಂದ ಲಭ್ಯವಿರುವ ಹೋಟೆಲ್ ರೂಮ್ ಬುಕ್ ಮಾಡುವುದು ನಮ್ಮ ಆಯ್ಕೆಯಾಯಿತು ಎಂದು ಹೇಳಿದರು.
10ರಿಂದ 15 ದಿನಗಳವರೆಗೆ ರೂಮ್ ಬುಕ್ಕಿಂಗ್
ಅನೇಕ ಹೋಟೆಲ್ಗಳಿಗೆ ಜನರು ಸಾಕುಪ್ರಾಣಿಗಳು ಹಾಗೂ ಅತಿಥಿಳೊಂದಿಗೆ ಹೋಗುತ್ತಿದ್ದಾರೆ. ಹೀಗಾಗಿ ಹೋಟೆಲ್ನವರು ಸುಂಕದ ಏರಿಕೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಆತಿಥ್ಯ ವಲಯದ ಮೂಲಗಳು ಹೇಳುವಂತೆ ಸ್ಟಾರ್ ಹೋಟೆಲ್ಗಳಲ್ಲಿನ ಕೊಠಡಿಗಳು 10ರಿಂದ 15 ದಿನಗಳವರೆಗೆ ಕಾಯ್ದಿರಿಸಲ್ಪಟ್ಟಿವೆ. ಏಕೆಂದರೆ ಅತಿಥಿಗಳು ತಮ್ಮ ಐಷಾರಾಮಿ ಮನೆಗಳನ್ನು ಸ್ವಚ್ಛಗೊಳಿಸಲು ಮತ್ತು ನವೀಕರಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ.
ಟೆಕ್ ಕಾರಿಡಾರ್ನಲ್ಲಿರುವ ಆಸ್ಪತ್ರೆಗಳೂ ಸಹ ದಾಖಲಾತಿಗಳಲ್ಲಿ ಹಠಾತ್ ಹೆಚ್ಚಳವನ್ನು ಕಂಡಿವೆ. ಅನೇಕ ಆಘಾತಕ್ಕೊಳಗಾದ ಹಾಗೂ ಹಿರಿಯ ನಾಗರಿಕರು ರಕ್ತದೊತ್ತಡ ಮತ್ತು ಹೈ ಶುಗರ್ನಿಂದ ಬಳಲುತ್ತಿರುವುದರಿಂದ ಈ ಏರಿಕೆ ಕಂಡುಬಂದಿದೆ.
ಎಲ್ಲರಿಗೂ ನಗರದಲ್ಲಿ ಸಂಬಂಧಿಕರಿರುವುದಿಲ್ಲ
ಆದರೆ ಬೃಹತ್ ಬೆಂಗಳೂರು ಹೊಟೇಲ್ ಮಾಲೀಕರ ಸಂಘದ (ಬಿಬಿಎಚ್ಎ) ಅಧ್ಯಕ್ಷ ಪಿ ಸಿ ರಾವ್ ಅವರು ಕೆಲವು ಹೋಟೆಲ್ಗಳ ಈ ದುಪ್ಪಟ್ಟು ಬೆಲೆ ಏರಿಕೆ ಗುರುತಿಸಿದ್ದಾರೆ. ನಿರಾಶ್ರಿತರಿಗೆ ಶೇಕಡಾ 50 ರಷ್ಟು ರಿಯಾಯಿತಿ ನೀಡಲು ಸಿದ್ಧರಾಗಿದ್ದಾರೆ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಎಲ್ಲರೂ ನಗರದಲ್ಲಿ ಇರಲು ಸಂಬಂಧಿಕರನ್ನು ಹೊಂದಿರುವುದಿಲ್ಲ. ಆದ್ದರಿಂದ, ಸದ್ಭಾವನೆಯ ಸೂಚಕವಾಗಿ ನಾವು ಕೆಲವು ಹೋಟೆಲ್ಗಳನ್ನು ಗುರುತಿಸಿದ್ದೇವೆ, ಅಲ್ಲಿ ನಾವು ಶೇಕಡಾ 50 ರಷ್ಟು ರಿಯಾಯಿತಿಯನ್ನು ನೀಡುತ್ತೇವೆ ಎಂದು ಹೇಳಿದರು.
ಬೆಂಗಳೂರಿಗೆ 'ಪ್ರಕೃತಿ ಚಿಕಿತ್ಸೆ': ಐಷಾರಾಮಿ ವಿಲ್ಲಾಗಳ ಮಾಲೀಕರು ಟ್ರ್ಯಾಕ್ಟರ್ನಲ್ಲಿ ಪ್ರಯಾಣ
ರೂಮ್ನ ಬಾಡಿಗೆ ವೆಚ್ಚದ ಬಗ್ಗೆ ಆತಂಕ
ಹೆಚ್ಚಿನ ಜನರು ಹೋಟೆಲ್ಗಳಲ್ಲಿ ಉಳಿಯಲು ಆಯ್ಕೆ ಮಾಡಿಕೊಳ್ಳುತ್ತಿದ್ದು, ರೂಮ್ನ ಬಾಡಿಗೆ ವೆಚ್ಚದ ಬಗ್ಗೆ ಆತಂಕಗೊಂಡಿದ್ದಾರೆ. ಸಾಂಕ್ರಾಮಿಕ ಸಮಯದಲ್ಲಿಯೂ ಸಹ ನಾವು ಪ್ರತ್ಯೇಕ ಮತ್ತು ಜನ ಸಂಪರ್ಕ ರಹಿತ ಕೊಠಡಿಗಳನ್ನು ನೀಡಿದ್ದೇವೆ. ಈಗ ಬಾಡಿಗೆ ಕೊಠಡಿಗಳಲ್ಲಿ ಉಳಿಯುವುದು ಎಲ್ಲರಿಗೂ ಕೈಗೆಟುಕುವಂತಿಲ್ಲ ಎಂದು ನಮಗೆ ತಿಳಿದಿದೆ. ಆದ್ದರಿಂದ ನಾವು ಅವರಿಗೆ ನೆರವು ನೀಡಲು ನಿರ್ಧರಿಸಿದ್ದೇವೆ ಎಂದು ರಾವ್ ಹೇಳಿದರು.