ಜನರನ್ನು ಚದುರಿಸಲು ಲಾಠಿ ಹಿಡಿದ ಬೆಂಗಳೂರು ಪೊಲೀಸರು
ಬೆಂಗಳೂರು, ಮಾರ್ಚ್ 23 : ಕೊರೊನಾ ಹರಡದಂತೆ ತಡೆಯಲು ಭಾನುವಾರ 'ಜನತಾ ಕರ್ಫ್ಯೂ' ನಡೆಯಿತು. ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಕರ್ನಾಟಕ ಸ್ತಬ್ಧವಾಗಿತ್ತು.
ಬೆಂಗಳೂರು ನಗರದಲ್ಲಿ 'ಜನತಾ ಕರ್ಫ್ಯೂ' ಸಮಯದಲ್ಲಿ ರಸ್ತೆಯಲ್ಲಿ ಓಡಾಡುತ್ತಿದ್ದ ಜನರನ್ನು ಚದುರಿಸಲು ಪೊಲೀಸರು ಲಾಠಿ ಬಳಕೆ ಮಾಡಿದ್ದಾರೆ. ಹೌದು, ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ ಎಂಬ ಆರೋಪ ಈಗ ಕೇಳಿ ಬಂದಿದೆ.
'ಜನತಾ ಕರ್ಫ್ಯೂ' ಇದ್ದರೂ ಕಾಟನ್ ಪೇಟೆಯಲ್ಲಿ ಕೆಲವು ಯುವಕರು ಮನೆಯಿಂದ ಅನಗತ್ಯವಾಗಿ ಹೊರ ಬಂದಿದ್ದರು. ಬೈಕ್ನಲ್ಲಿ ಬೀದಿ ಸುತ್ತುತ್ತಿದ್ದರು, ರಸ್ತೆಯಲ್ಲಿ ನಿಂತು ಜೋರಾಗಿ ಮಾತನಾಡುತ್ತಾ ಗದ್ದಲ ಮಾಡುತ್ತಿದ್ದರು.

ಇದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೊದಲು ಮನೆಗೆ ಹೋಗುವಂತೆ ಮನವಿ ಮಾಡಿದ್ದಾರೆ. ಆದರೆ, ಯುವಕರು ಪ್ರತಿಕ್ರಿಯೆ ನೀಡಿದ ಕಾರಣ ಲಾಠಿ ಹಿಡಿದು ಅವರನ್ನು ವಾಪಸ್ ಮನೆಗೆ ಕಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕೊರೊನಾ ಸೋಂಕು ಹರಡುವುದನ್ನು ತಡೆಯಲು ಮಾರ್ಚ್ 22ರ ಭಾನುವಾರ 'ಜನತಾ ಕರ್ಫ್ಯೂ'ಗೆ ಕರೆ ನೀಡಿದ್ದರು. ದೇಶಾದ್ಯಂತ ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆ ತನಕ 'ಜನತಾ ಕರ್ಫ್ಯೂ' ಜಾರಿಯಲ್ಲಿತ್ತು.
ಬೆಂಗಳೂರು ನಗರ ಪೊಲೀಸರು ರಾತ್ರಿ 9 ರಿಂದ ಮಧ್ಯರಾತ್ರಿ 12ರ ತನಕ ಬೆಂಗಳೂರು ನಗರದಲ್ಲಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಆದ್ದರಿಂದ, ಭಾನುವಾರ ಬೆಂಗಳೂರು ಸಂಪೂರ್ಣ ಬಂದ್ ಆಗಿತ್ತು.












Click it and Unblock the Notifications