Breaking: ಬೆಂಗಳೂರಿನ ಪೇಸಿಎಂ ಪೋಸ್ಟರ್ ಪ್ರಕರಣ ಸಿಸಿಬಿಗೆ ವರ್ಗಾವಣೆ
ಬೆಂಗಳೂರು, ಸೆಪ್ಟೆಂಬರ್ 22: ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪೇಸಿಎಂ ಎಂಬ ಅಸ್ತ್ರ ಪ್ರಯೋಗಿಸಿದೆ. ಇದೇ ಪ್ರಕರಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆರಳಿ ಕೆಂಡವಾಗುತ್ತಿದ್ದಂತೆ ಪೊಲೀಸರು ಅಲರ್ಟ್ ಆಗಿದ್ದಾರೆ.
ಬೆಂಗಳೂರಿನ ಹಲವೆಡೆಗಳಲ್ಲಿ ಪೇಸಿಎಂ ಪೋಸ್ಟರ್ ಅನ್ನು ಅಂಟಿಸಿರುವುದಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣಗಳ ತನಿಖೆಯನ್ನು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಕೇಂದ್ರೀಯ ತನಿಖಾ ವಿಭಾಗಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಪೇಸಿಎಂ ಪೋಸ್ಟರ್ ಅಂಟಿಸಿರುವುದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸದಾಶಿವನಗರ, ಹೈಗ್ರೌಂಡ್, ಶೇಷಾದ್ರಿಪುರಂ, ಭಾರತೀನಗರ, ಸೇರಿದಂತೆ ಐದು ಪೊಲೀಸ್ ಠಾಣೆೆಗಳಲ್ಲಿ ದೂರುಗಳನ್ನು ದಾಖಲಿಸಲಾಗಿತ್ತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೋಪದಿಂದ ಬೆಂಗಳೂರು ಪೊಲೀಸರು ಅಲರ್ಟ್ ಆಗಿದ್ದಾರೆ. ಈ ಹಿನ್ನೆಲೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಪಶ್ಚಿಮ ವಿಭಾಗದ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಡಿಸಿಪಿಗಳ ಜೊತೆ ಸಭೆ ನಡೆಸಿದರು. ನಗರದ ಯಾವುದೇ ಕಡೆಗಳಲ್ಲಿ ಅಂಥ ಪೋಸ್ಟರ್ ಅಂಟಿಸುವುದಕ್ಕೆ ಅವಕಾಶ ನೀಡದಂತೆ ಎಚ್ಚರಿಕೆ ವಹಿಸಲು ಸೂಚನೆ ನೀಡಿದ್ದಾರೆ.
ಆರೋಪಿಗಳ ಪತ್ತೆಗೆ ಸಿಸಿಬಿ ಬಲೆ:
ಬೆಂಗಳೂರಿನ ಸದಾಶಿನಗರ, ಶೇಷಾದ್ರಿಪುರಂ ಒಂದು ಕಡೆಯಲ್ಲಿ ಹಾಗೂ ಹೈಗ್ರಾಂಡ್ ವ್ಯಾಪ್ತಿಯ ನಾಲ್ಕೈದು ಕಡೆಗಳಲ್ಲಿ ಪೇಸಿಎಂ ಎಂಬ ಪೋಸ್ಟರ್ ಅನ್ನು ಅಂಟಿಸಲಾಗಿತ್ತು. ಇದೇ ಘಟನೆಗೆ ಸಂಬಂಧಿಸಿದಂತೆ ಐದು ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ಕೂಡ ದಾಖಲಾಗಿತ್ತು. ಎಲ್ಲಾ ಪ್ರಕರಣಗಳನ್ನು ಇದೀಗ ಸಿಸಿಬಿ ಪೊಲೀಸರಿಗೆ ವರ್ಗಾಯಿಸಲಾಗಿದೆ.

ಈಗಾಗಲೇ ಅಖಾಡಕ್ಕೆ ಧುಮುಕಿರುವ ಸಿಸಿಬಿ ಪೊಲೀಸರು, ನಗರದಲ್ಲಿ ಪೇಸಿಎಂ ಪೋಸ್ಟರ್ ಅಂಟಿಸಿದ ಆರೋಪಿಗಳನ್ನು ಬಂಧಿಸುವುದಕ್ಕೆ ಬಲೆ ಬೀಸಿದ್ದಾರೆ. ಆರೋಪಿಗಳ ಪತ್ತೆಗೆ ಈಗಾಗಲೇ ಹುಡುಕಾಟ ಶುರುವಾಗಿದೆ ಎಂದು ಕೇಂದ್ರ ಡಿಸಿಪಿ ಶ್ರೀನಿವಾಸ್ ಗೌಡ ಮಾಹಿತಿ ನೀಡಿದ್ದಾರೆ.












Click it and Unblock the Notifications