Varsha Wodeyar : ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ್ ವರ್ಷಾ ಒಡೆಯರ್ ಹಿನ್ನೆಲೆ ಏನು?
ಬೆಂಗಳೂರು ನವೆಂಬರ್ 15: ಬೆಂಗಳೂರು ಉತ್ತರ ತಾಲೂಕಿನ ವಿಶೇಷ ತಹಶೀಲ್ದಾರ್ ವರ್ಷಾ ಒಡೆಯರ್ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ಕೆಂಗನಹಳ್ಳಿನ ತಮ್ಮ ಜಮೀನಿನ ಖಾತೆ ಬದಲಾವಣೆ ಮಾಡಲು ಕಾಂತರಾಜು ಎನ್ನುವವರು ಅರ್ಜಿ ಸಲ್ಲಿಸಿದ್ದರು. ಈ ಜಮೀನಿನ ಖಾತೆ ಬದಲಾವಣೆ ಮಾಡಲು ತಹಶೀಲ್ದಾರ್ ವರ್ಷಾ ಒಡೆಯರ್ ಮಧ್ಯವರ್ತಿಗಳ ಮೂಲಕ 10 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಗಮನ ಸೆಳೆದ ಹುಬ್ಬಳ್ಳಿ ತಹಶೀಲ್ದಾರ್ 100 ದಿನದ ಪ್ರವಾಸ!
ಈ ಬಗ್ಗೆ ಅರ್ಜಿದಾರರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು. ನವೆಂಬರ್ 15ರಂದು ವರ್ಷಾ ಒಡೆಯರ್ 5 ಲಕ್ಷ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಅಧಿಕಾರಿಯನ್ನು ಹಾಗೂ ಮಧ್ಯವರ್ತಿ ರಮೇಶ್ ಎಂಬಾತನನ್ನು ಬಂಧಿಸಿದ್ದಾರೆ. ಅರ್ಜಿದಾರರು ಖಾತೆ ಬದಲಾವಣೆಗೆ ಸಲ್ಲಿಸಿದ್ದ ಅರ್ಜಿಯನ್ನು ಹಾಗೂ ಇತರ ದಾಖಲೆಗಳನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕನಕಪುರದಲ್ಲಿ ವಿವಾದ: ಒಡೆಯರ್ಗೆ ಸಾರ್ವಜನಿಕರ ಬೆಂಬಲ
ಈ ಪ್ರಕರಣದಲ್ಲಿ ಬಂಧಿತರಾಗಿರುವ ತಹಶೀಲ್ದಾರ್ ವರ್ಷಾ ಒಡೆಯರ್ ಈ ಹಿಂದೆ ಕೂಡ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಲ್ಲಿದ್ದರು. ಈ ಹಿಂದೆ ಕನಕಪುರ ತಹಶೀಲ್ದಾರ್ ಆಗಿದ್ದ ವರ್ಷಾ ಒಡೆಯರ್ಗೆ ಡಿ.ಕೆ ಶಿವಕುಮಾರ್ ಹಾಗೂ ಡಿ.ಕೆ ಸುರೇಶ್ ಬೆಂಬಲಿಗರು ತೊಂದರೆ ಕೊಡುತ್ತಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ಈ ವೇಳೆ ತಹಸೀಲ್ದಾರ್ ವರ್ಷಾ ಒಡೆಯರ್ಗೆ ನೈತಿಕ ಬೆಂಬಲ ಘೋಷಿಸಿ ಕನಕಪುರದ ತಾಲೂಕು ಕಚೇರಿ ಬಳಿಕ ಬೈಕ್ ಜಾಥಾ ಕೂಡ ನಡೆಸಲಾಗಿತ್ತು.
ಕನಕಪುರ ತಾಲೂಕಿನಲ್ಲಿ ಉತ್ತಮ ಕೆಲಸ ಮಾಡುತ್ತಿರುವ ತಹಸೀಲ್ದಾರ್ ವರ್ಷಾ ಒಡೆಯರ್ಗೆ ಡಿ.ಕೆ ಸಹೋದರರು ತಮ್ಮ ಚೇಲಾಗಳ ಮೂಲಕ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು ಎಂದು ಅನೇಕ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದರು. ಅಲ್ಲದೇ ಈ ಬಡಪಾಯಿ ಹೆಣ್ಣು ಮಗಳ ಶಾಪ ನಿಮಗೆ ತಟ್ಟದೇ ಬಿಡುವುದಿಲ್ಲ ಎಂದು ಸಹ ಆಕ್ರೋಶ ವ್ಯಕ್ತಪಡಿಸಿದ್ದರು.
ಬಳಿಕ ವರ್ಷಾ ಒಡೆಯರ್ ಅವರನ್ನು ವರ್ಗಾವಣೆ ಮಾಡಿದ್ದು, ಭಾರೀ ವಿವಾದಕ್ಕೆ ಕಾರಣವಾಗಿತ್ತು. ಹಲವಾರು ಸಂಘಟನೆಗಳು ಅವರ ಪರವಾಗಿ ನಿಂತು ಬೆಂಬಲ ನೀಡಿದ್ದವು, ಸಾಮಾಜಿಕ ಜಾಲತಾಣದಲ್ಲಿಯೂ ಅವರನ್ನು ಬೆಂಬಲಿಸಿ ಅಭಿಯಾನ ನಡೆದಿತ್ತು. ಜನರು ವಿಶ್ವಾಸ ಇಟ್ಟಿದ್ದ ಅಧಿಕಾರಿಯನ್ನು ಇದೀಗ ಭ್ರಷ್ಟಾಚಾರ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
2014ನೇ ಸಾಲಿಕ ಕೆಎಎಸ್ ಅಧಿಕಾರಿಯಾಗಿರುವ ವರ್ಷಾ ಒಡೆಯರ್, ಮೊದಲು ಚಾಮರಾಜನಗರ ಯಳಂದೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ರಾಮನಗರ ಜಿಲ್ಲೆಯ ಕನಕಪುರದಲ್ಲಿ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸಿದ್ದು, ಒಂದಿಷ್ಟು ವಿವಾದಗಳ ನಂತರ ವರ್ಗಾವಣೆಯಾಗಿ ಕೆಲವೇ ತಿಂಗಳ ಹಿಂದಷ್ಟೇ ಬೆಂಗಳೂರು ಉತ್ತರ ತಾಲೂಕಿನ ವಿಶೇಷ ತಹಶೀಲ್ದಾರ್ ಆಗಿ ನೇಮಕಗೊಂಡಿದ್ದರು. ವರ್ಷಾ ಒಡೆಯರ್ ಮೂಲತಃ ಉತ್ತರ ಕರ್ನಾಟಕದ ಕಲಬುರಗಿಯವರಾಗಿದ್ದು, ಮೊದಲು ಪ್ರಾಧ್ಯಾಪಕರಾಗಿ ವೃತ್ತಿ ಜೀವನವನ್ನು ಆರಂಭಿಸಿದ್ದರು.