ನಮ್ಮ ಮೆಟ್ರೋಕ್ಕೆ ರಕ್ಷಣಾ ಇಲಾಖೆ ಭೂಮಿ: ಚರ್ಚ್ನ ಅಕ್ರಮ ಸಂಪತ್ತು ಮುಟ್ಟುಗೋಲು
ನವದೆಹಲಿ, ಸೆಪ್ಟೆಂಬರ್ 9: ಜಾರಿ ನಿರ್ದೇಶನಾಲಯವು (ಇ.ಡಿ) ಬೆಂಗಳೂರಿನಲ್ಲಿ ಸುಮಾರು 60 ಕೋಟಿ ರೂ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಈ ಆಸ್ತಿಯನ್ನು ರಕ್ಷಣಾ ಸಚಿವಾಲಯವು ಚರ್ಚ್ ಆಫ್ ಸೌತ್ ಇಂಡಿಯಾ ಟ್ರಸ್ಟ್ ಅಸೋಸಿಯೇಷನ್ಗೆ (ಸಿಎಸ್ಐಟಿಎ) ಭೋಗ್ಯದ ಭೂಮಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಿತ್ತು ಎಂದು ಆರೋಪಿಸಲಾಗಿದೆ.
ವಶಪಡಿಸಿಕೊಂಡ ಆಸ್ತಿಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಿಶ್ಚಿತ ಠೇವಣಿ ರೂಪದಲ್ಲಿ ನಿರ್ವಹಣೆಯಾಗುತ್ತಿದ್ದು, ಹಣ ವರ್ಗಾವಣೆ ತಡೆ ಕಾಯ್ದೆ, 2002 (ಪಿಎಂಎಲ್ಎ) ಅಡಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಹೇಳಿಕೆ ತಿಳಿಸಿದೆ.
ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್ ಆಧಾರದಲ್ಲಿ ತನಿಖೆ ನಡೆಸಲಾಗಿತ್ತು. ರಕ್ಷಣಾ ಸಚಿವಾಲಯಕ್ಕೆ ಸೇರಿದ 7426.886 ಚದರ ಮೀಟರ್ ಅಳತೆಯ ಭೂಮಿಯನ್ನು ವರ್ಗಾವಣೆ ಮಾಡುವ ಪ್ರಕ್ರಿಯೆಯಲ್ಲಿ 'ಅಪ್ರಾಮಾಣಿಕವಾಗಿ' ಪ್ರವೇಶಿಸಿದ ಆರೋಪಕ್ಕಾಗಿ ಸಿಎಸ್ಐಟಿಎ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಭೂಮಿಯನ್ನು ಮೊದಲು ಬೆಂಗಳೂರಿನ ಆಲ್ ಸೇಂಟ್ಸ್ ಚರ್ಚ್ಗೆ ಭೋಗ್ಯಕ್ಕೆ ನೀಡಲಾಗಿತ್ತು. ಮುಂದೆ ಓದಿ.

59.29 ಕೋಟಿ ರೂ ಪರಿಹಾರ!
ಆಲ್ ಸೈಂಟ್ಸ್ ಚರ್ಚ್ ಇರುವ ಸ್ಥಳದ ಆವರಣದ ಭಾಗವನ್ನು ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತಕ್ಕೆ (ಬಿಎಂಆರ್ಸಿಎಲ್) ವರ್ಗಾವಣೆ ಮಾಡಿದ ಆರೋಪ ಮಾಡಲಾಗಿದೆ. ಇದಕ್ಕಾಗಿ ಸಿಎಸ್ಐಟಿಎ 2019ರಲ್ಲಿ ಪರಿಹಾರದ ರೂಪದಲ್ಲಿ 59.29 ಕೋಟಿ ರೂ ಪಡೆದುಕೊಂಡಿದೆ.
ಈ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದ ಬಿಎಂಆರ್ಸಿಎಲ್, ತಾನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಮೂಲಕ ಭೂಮಿಯನ್ನು ಪಡೆದುಕೊಂಡಿದ್ದಾಗಿ ತಿಳಿಸಿತ್ತು.

ಭೋಗ್ಯಕ್ಕೆ ನೀಡಿದ್ದಷ್ಟೇ
ಇದರಲ್ಲಿನ ಸ್ವಲ್ಪ ಪ್ರಮಾಣದ ಭೂಮಿಯು ಭಾರತ ಸರ್ಕಾರದ ಅಡಿಯಲ್ಲಿನ ರಕ್ಷಣಾ ಸಚಿವಾಲಯಕ್ಕೆ ಸೇರಿದೆ. ಇದನ್ನು ರಕ್ಷಣಾ ಸಚಿವಾಲಯವು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಆಲ್ ಸೇಂಟ್ಸ್ ಚರ್ಚ್ಗೆ ಭೋಗ್ಯಕ್ಕೆ ನೀಡಿತ್ತು. ಆದರೆ ಭೂಮಿಯ ಯಾವುದೇ ಆಸ್ತಿ ಹಕ್ಕನ್ನು ಚರ್ಚ್ಗೆ ವರ್ಗಾವಣೆ ಮಾಡಿರಲಿಲ್ಲ.
ರಕ್ಷಣಾ ಸಚಿವಾಲಯಕ್ಕೆ ಸೇರಿದ ಭೂಮಿಯನ್ನು ಬಿಎಂಆರ್ಸಿಎಲ್ಗೆ ಸಿಎಸ್ಐಟಿಎ ಅಕ್ರಮವಾಗಿ ವರ್ಗಾವಣೆ ಮಾಡಿತ್ತು ಎಂದು ಜಾರಿ ನಿರ್ದೇಶನಾಲಯದ ಆರೋಪಿಸಿದೆ.

ನಿಜವಾದ ಮಾಲೀಕ ರಕ್ಷಣಾ ಸಚಿವಾಲಯ
ಭೂಮಿಯ ನಿಜವಾದ ಮಾಲೀಕ ರಕ್ಷಣಾ ಸಚಿವಾಲಯ ಆಗಿರುವುದರಿಂದ ಈ ಭೂಮಿಯ ಸ್ವಾಧೀನಕ್ಕೆ ಪ್ರತಿಯಾಗಿ ನೀಡಲಾದ ಪರಿಹಾರವನ್ನು ಕನ್ಸೋಲಿಡೇಟೆಡ್ ಫಂಡ್ ಆಫ್ ಇಂಡಿಯಾಕ್ಕೆ ಪಾವತಿ ಮಾಡಬೇಕಿದೆ. ಭೂಮಿಯ ನಿಜವಾದ ಹಕ್ಕುದಾರನಲ್ಲದ ಸಿಎಸ್ಐಟಿಎ, ರಕ್ಷಣಾ ಸಚಿವಾಲಯದ ಭೂಮಿಯನ್ನು ಅಕ್ರಮವಾಗಿ ಪ್ರವೇಶಿಸಿರುವುದು ಮತ್ತು ಆಸ್ತಿಯನ್ನು ವರ್ಗಾವಣೆ ಮಾಡಿ ಬಿಎಂಆರ್ಸಿಎಲ್ನಿಂದ 59.29 ಕೋಟಿ ರೂ ಹಣವನ್ನು ಪರಿಹಾರದ ರೂಪದಲ್ಲಿ ಪಡೆದುಕೊಂಡಿದೆ ಎಂದು ಇ.ಡಿ. ಆರೋಪಿಸಿದೆ.
Recommended Video

ಬಡ್ಡಿ ಸಮೇತ ಮುಟ್ಟುಗೋಲು
ಈ ಆಸ್ತಿಯನ್ನು 59.29 ಕೋಟಿ ರೂ. ರೂಪದಲ್ಲಿ ಇರಿಸಲಾಗಿದೆ. ಸ್ವೀಕೃತವಾದ ಮೊತ್ತದ ಮೇಲಿನ ಬಡ್ಡಿಯನ್ನು ಸೇರಿದಂತೆ ಬ್ಯಾಂಕ್ ಖಾತೆಯಲ್ಲಿನ ಹಣವನ್ನು ಪಿಎಂಎಲ್ಎ ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಇ.ಡಿ. ತಿಳಿಸಿದೆ.












Click it and Unblock the Notifications