Bengaluru Lakes: ಮಡಿವಾಳ ಕೆರೆಯಲ್ಲಿ ಸಾಯುತ್ತಿರುವ ಮೀನುಗಳು: ಬಿಬಿಎಂಪಿ ನಿರ್ಲಕ್ಷ್ಯವೇ ಕಾರಣ ಎಂದು ಆರೋಪ
ಬೆಂಗಳೂರು, ಮೇ 26: ನಗರದ ದೊಡ್ಡ ಕೆರೆಗಳಲ್ಲಿ ಒಂದಾದ ಮಡಿವಾಳ ಕೆರೆಯಲ್ಲಿ 200ಕ್ಕೂ ಹೆಚ್ಚು ಮೀನುಗಳು ಸತ್ತು ತೇಲುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಗುರುವಾರ ಬೆಳಿಗ್ಗೆ ಇಲ್ಲಿ ವಾಕಿಂಗ್ ಮಾಡುವ ಸಂದರ್ಭದಲ್ಲಿ ಸಾರ್ವಜನಿಕರು ಮೀನುಗಳು ಸತ್ತು ತೇಲುತ್ತಿರುವುದನ್ನು ಗಮನಿಸಿದ್ದಾರೆ.
ಮಡಿವಾಳ ಕೆರೆ 252 ಎಕರೆ ವಿಸ್ತೀರ್ಣ ಹೊಂದಿದ್ದು ಕರ್ನಾಟಕ ಅರಣ್ಯ ಇಲಾಖೆ ಸುಪರ್ದಿಗೆ ಒಳಪಟ್ಟಿದೆ. ಮಡಿವಾಳ ಮಾತ್ರವಲ್ಲದ ನಗರದ ಹಲವು ಕೆರೆಗಳಲ್ಲಿ ಮೀನುಗಳು ಸಾಯುತ್ತಿರುವ ಘಟನೆಗಳು ವರದಿಯಾಗಿವೆ. ಕೆರೆಗೆ ಸೇರುತ್ತಿರುವ ಕೊಳಚೆ ನೀರು ಸಮರ್ಪಕವಾಗಿ ಸಂಸ್ಕರಣೆ ಮಾಡದೇ ಇರುವುದೇ ಇಂತಹ ಘಟನೆಗಳಿಗೆ ಕಾರಣ ಎಂದು ನಾಗರೀಕರು ಆರೋಪಿಸಿದ್ದಾರೆ.

ಕೆರೆಗಳಿಗೆ ಸೇರುವ ಕೊಳಚೆ ನೀರನ್ನು ಸಂಸ್ಕರಣೆ ಮಾಡುವಲ್ಲಿ ಬಿಬಿಎಂಪಿ ನಿರ್ಲಕ್ಷ್ಯ ಮಾಡುತ್ತಿದ್ದು, ಕೆರೆಗಳಲ್ಲಿ ಮೀನುಗಳ ಸಾವಿಗೆ ಕಾರಣವಾಗಿದೆ. ಇದು ಪರಿಸರಕ್ಕೆ ಮಾರಕ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಳೆನೀರು ಹರಿಯುವ ಕಾಲುವೆಯ ಗೋಡೆ ಒಂದು ಭಾಗ ಮುರಿದ ಪರಿಣಾಮ, ಹೆಚ್ಚಿನ ಪ್ರಮಾಣದ ಕೊಳಚೆ ನೀರು ಕೆರೆಯ ಒಡಲು ಸೇರುತ್ತಿದ್ದು, ನೀರಿನ ಆಮ್ಲಜನಕ ಮಟ್ಟ ಕಡಿಮೆಯಾಗಿದೆ, ಈ ಕಾರಣಕ್ಕೆ ಮೀನುಗಳು ಸಾವನ್ನಪ್ಪುತ್ತಿವೆ ಎಂದು ಹೇಳಲಾಗಿದೆ.
ಕಳೆದ ಮೂರು ದಿನಗಳಿಂದ ನಗರದಲ್ಲಿ ಉತ್ತಮ ಮಳೆಯಾಗುತ್ತಿದೆ, ಬುಧವಾರ ಮಡಿವಾಳ ಪ್ರದೇಶದಲ್ಲಿ ವ್ಯಾಪಕ ಮಳೆಯಾದ ಪರಿಣಾಮ ಚರಂಡಿ ನೀರು ಹೆಚ್ಚಿನ ಪ್ರಮಾಣದಲ್ಲಿ ಕೆರೆಯನ್ನು ಸೇರಿದೆ ಎಂದು ಅರಣ್ಯಾಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.
ವಲಸೆ ಹಕ್ಕಿಗಳ ಆವಾಸಸ್ಥಾನ
ಮಡಿವಾಳ ಕೆರೆಯ ಹಲವು ವಲಸೆ ಹಕ್ಕಿಗಳಿಗೆ ಪ್ರಮುಖ ಆವಾಸ ಸ್ಥಾನವಾಗಿದೆ. ಈ ಕೆರೆಯ ಮೀನು, ಜಲಚರಗಳೇ ಹಕ್ಕಿಗಳ ಪ್ರಮುಖ ಆಹಾರ ಮೂಲವಾಗಿದೆ. ಅಲ್ಲದೆ 250 ಎಕರೆ ವ್ಯಾಪ್ತಿಯ ಕೆರೆ ನಗರದ ಪ್ರಮುಖ ಜಲಮೂಲವಾಗಿದೆ. ಕೆರೆಯ ಸ್ವಚ್ಛತೆ ಕಾಪಾಡುವಲ್ಲಿ ಸರ್ಕಾರಿ ಸಂಸ್ಥೆಗಳು ಮತ್ತು ಮೀನುಗಾರಿಕೆ ಇಲಾಖೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ನಾಗರೀಕರು ಒತ್ತಾಯಿಸಿದ್ದಾರೆ. ಕೆರೆಯ ನೀರಿನ ಗುಣಮಟ್ಟ ಕಡಿಮೆ ಇದ್ದಾಗಲೂ ಮೀನು ಸಾಕಾಣಿಕೆ ಮಾಡಲು ಟೆಂಡರ್ ಗಳಿಗೆ ಒಪ್ಪಿಗೆ ಕೊಟ್ಟಿರುವುದೇಕೆ ಎಂದು ಪ್ರಶ್ನೆ ಮಾಡಲಾಗಿದೆ.
'ಡಿ' ವರ್ಗದಲ್ಲಿ ಸೇರಿರುವ ಮಡಿವಾಳ ಕೆರೆ
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಇತ್ತೀಚೆಗೆ ನೀಡಿರುವ ವರದಿಯಲ್ಲಿ, ಏಪ್ರಿಲ್ 2022 ಮತ್ತು ಮಾರ್ಚ್ 2023 ರ ನಡುವೆ ಮಡಿವಾಳ ಕೆರೆಯನ್ನು ನಾಲ್ಕು ಬಾರಿ 'ಇ' ವರ್ಗದಲ್ಲಿ ಮತ್ತು ಎಂಟು ಬಾರಿ 'ಡಿ' ವರ್ಗದಲ್ಲಿ ವರ್ಗೀಕರಿಸಲಾಗಿದೆ ಎಂದು ಬಹಿರಂಗಪಡಿಸಿದೆ.
'ಡಿ' ವರ್ಗಕ್ಕೆ ಸೇರಿದ ಕೆರೆಗಳಲ್ಲಿ ವನ್ಯಜೀವಿ ಮತ್ತು ಮೀನುಗಾರಿಕೆಯ ಪ್ರಸರಣ ಮಾತ್ರ ನಡೆಯುತ್ತದೆ. ಆದರೂ ಇಲ್ಲಿ ಮೀನು ಸಾಕಾಣಿಕೆ ಮಾಡಲು ಟೆಂಡರ್ ನೀಡಲಾಗಿದೆ. ಇ ವರ್ಗಕ್ಕೆ ಸೇರಿದ ಕೆರೆಗಳಲ್ಲಿ ಕೈಗಾರಿಕಾ ತಂಪಾಗಿಸುವಿಕೆ, ನೀರಾವರಿ ಮತ್ತು ನಿಯಂತ್ರಿತ ತ್ಯಾಜ್ಯ ವಿಲೇವಾರಿಗೆ ಮಾತ್ರ ಅರ್ಹವಾಗಿದೆ ಎಂದು ಹೇಳಲಾಗುತ್ತದೆ. 2023ರ ಮಾರ್ಚ್ನಲ್ಲಿ ಬೆಂಗಳೂರಿನ 105 ಕೆರೆಗಳ ಪೈಕಿ 68 ಕೆರೆಗಳಿಗೆ 'ಡಿ' ಮತ್ತು 28 'ಇ' ಶ್ರೇಣಿಯನ್ನು ನೀಡಲಾಗಿದೆ ಎಂದು ಕೆಎಸ್ಪಿಸಿಬಿ ವರದಿಯಲ್ಲಿ ತಿಳಿಸಿದೆ.












Click it and Unblock the Notifications