ಜುಲೈ 12 ಚಾಮರಾಜಪೇಟೆ ಬಂದ್: ಕೆಲ ಶಾಲೆಗಳಿಗೆ ರಜೆ
ಬೆಂಗಳೂರು, ಜುಲೈ11: ಚಾಮರಾಜಪೇಟೆ ಈದ್ಗಾ ಮೈದಾನ ವಿವಾದಕ್ಕೆ ಸಂಬಂಧಿಸಿದಂತೆ ಚಾಮರಾಜಪೇಟೆ ನಾಗರೀಕ ವೇದಿಕೆ ಬಂದ್ಗೆ ಕರೆಯನ್ನು ನೀಡಿದೆ. ಚಾಮರಾಜಪೇಟೆಯ ನಾಗರೀಕರಿಗೆ ಅಂಗಡಿಯನ್ನು ಹೊಂದಿರುವವರಿಗೆ ಬಂದ್ಗೆ ಸಹಕಾರವನ್ನು ನೀಡುವಂತೆ ಕೋರಿಕೊಳ್ಳಲಾಗಿದೆ. ಇದರಿಂದಾಗಿ ಶಾಲಾ ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂಬ ಉದ್ದೇಶಕ್ಕೆ ಕೆಲವು ಖಾಸಗಿ ಶಾಲೆಗಳು ಜುಲೈ 12(ನಾಳೆ) ರಜೆಯನ್ನು ಘೋಷಣೆ ಮಾಡಿವೆ.
ಚಾಮರಾಜಪೇಟೆಯಲ್ಲಿ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಿಗೆ ಸರ್ಕಾರವಾಗಲೀ ಅಧಿಕಾರಿಗಳಾಗಲಿ ರಜೆಯನ್ನು ಘೋಷಣೆ ಮಾಡಿಲ್ಲ. ಆದರೆ ಶಾಲೆಗಳಿಗೆ ಬರುವ ಮಕ್ಕಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶಕ್ಕಾಗಿ ಕೆಲವು ಶಾಲಾ ಕಾಲೇಜುಗಳು ರಜೆಯನ್ನು ನೀಡಿವೆ. ರಜೆಯನ್ನು ನೀಡಿರುವ ಶಾಲೆಗಳು ಶನಿವಾರ ಪೂರ್ತಿದಿನದ ತರಗತಿಯನ್ನು ನಡೆಸಲು ಉದ್ದೇಶವನ್ನು ಹೊಂದಿದೆ.
ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಿಸುವ ಅಧಿಕಾರವನ್ನು ಮೊದಲನೇಯದಾಗಿ ಸರ್ಕಾರ ಹೊಂದಿದೆ. ಜಿಲ್ಲಾಧಿಕಾರಿಗಳು ಸಂದರ್ಭಾನುಸಾರ ರಜೆಯನ್ನು ಘೋಷಣೆಯನ್ನು ಸಹ ಮಾಡಬಹುದಾಗಿದೆ. ಇನ್ನು ಸ್ಥಳೀಯ ಡಿಡಿಪಿಐ ನಿರ್ದೇಶಾನುಸಾರ ಬಿಇಓಗಳು ಸಹ ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಣೆಯನ್ನು ಮಾಡುವ ಅಧಿಕಾರವನ್ನು ಹೊಂದಿದೆ. ಇವರನ್ನು ಹೊರತುಪಡಿಸಿ ಶಾಲೆಗೆ ರಜೆಯನ್ನು ನೀಡುವ ಹಾಕಿಲ್ಲ. ಆದರೂ ಬಂದ್ ಹಿನ್ನೆಲೆಯಲ್ಲಿ ಮಕ್ಕಳ ಹಿತದೃಷ್ಟಿಯಿಂದ ಕೆಲವು ಖಾಸಗಿ ಶಾಲೆಗಳು ರಜೆಯನ್ನು ನೀಡಿವೆ.

ಈದ್ಗಾ ಮೈದಾನ ಎದುರಲ್ಲಿದೆ ಬಿಬಿಎಂಪಿ ಶಾಲೆ
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮೂರ್ನಾಲ್ಕು ಬಿಬಿಎಂಪಿ ಶಾಲೆಗಳಿವೆ. ಈ ಶಾಲೆಗಳಿಗೆ ಬಿಬಿಎಂಪಿ ರಜೆಯನ್ನು ನೀಡಿಲ್ಲ. ಈದ್ಗಾಮೈದಾನದ ಎದುರಲ್ಲೇ ಬಿಬಿಎಂಪಿ ಶಾಲೆಯು ಇರುವುದರಿಂದ ಶಾಲೆಗೆ ತೆರಳಿದ್ದ ಚಾಮರಾಜಪೇಟೆ ನಾಗರೀಕ ವೇದಿಕೆಯ ಕಾರ್ಯಕರ್ತರು ಶಾಲೆಗೆ ರಜೆಯನ್ನು ನೀಡುವಂತೆ ಮನವಿಯನ್ನು ಮಾಡಿದ್ದರು. ಈ ಕುರಿತು ಶಾಲೆಯು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮನವಿಯನ್ನು ನೀಡಿ. ಮುಖ್ಯ ಆಯುಕ್ತರು ರಜೆಯನ್ನು ಘೋಷಣೆಯನ್ನು ಮಾಡಿದರೇ ನಾವು ರಜೆಯನ್ನು ನೀಡುತ್ತೇವೆ ಎಂದು ಶಾಲಾ ಮುಖ್ಯಸ್ಥರು ತಿಳಿಸಿದ್ದಾರೆ ಎಂದು ಬಿಬಿಎಂಪಿ ಮೂಲಗಳಿಂದ ತಿಳಿದು ಬಂದಿದೆ.

ಜಿಲ್ಲಾಧಿಕಾರಿ ನಿರ್ಧರಿಸಿದರೇ ಮಾತ್ರವೇ ರಜೆ
ಚಾಮರಾಜಪೇಟೆ ಬಂದ್ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳಿಗೂ ರಜೆಯನ್ನು ನೀಡಿಲ್ಲ. ಶಾಲೆಗಳ ರಜೆಯ ವಿಚಾರವಾಗಿ ಡಿಡಿಪಿಐ ಬೈಲಾಂಜನೇಯರನ್ನು ಸಂಪರ್ಕ ಮಾಡಿದ "ಒನ್ಇಂಡಿಯಾ ಕನ್ನಡ' ರಜೆ ಘೋಷಣೆ ಬಗ್ಗೆ ಕೇಳಿದಾಗ ""ಚಾಮರಾಜಪೇಟೆ ಬಂದ್ ಹಿನ್ನೆಲೆಯಲ್ಲಿ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಿಗೆ ರಜೆಯನ್ನು ನೀಡಿಲ್ಲ. ಜಿಲ್ಲಾಧಿಕಾರಿಗಳು ನಿರ್ದೇಶನವನ್ನು ನೀಡದರೇ ಮಾತ್ರವೇ ರಜೆಯನ್ನು ನೀಡಲಾಗುತ್ತದೆ. ಯಾವುದಾದರು ಶಾಲೆ ರಜೆಯನ್ನು ನೀಡಿದ್ದರೆ. ಬಿಇಓ ಮತ್ತು ಸಿಆರ್ಪಿಗಳ ಮುಖೇನ ವರದಿಯನ್ನು ಪಡೆಯಲಾಗುತ್ತದೆ'' ಎಂದು ತಿಳಿಸಿದ್ದಾರೆ.

ಶಾಲಾ ಮಕ್ಕಳ ಹಿತಕ್ಕಾಗಿ ಆಡಳಿತ ಮಂಡಳಿ ನಿರ್ಧಾರ
ಚಾಮರಾಜಪೇಟೆಯ ಕೆಲವು ಖಾಸಗಿ ಶಾಲೆಗಳು ಮಾತ್ರವೇ ಜುಲೈ 12ರಂದು ಶಾಲೆಗೆ ರಜೆಯನ್ನು ಘೋಷಣೆ ಮಾಡಿದೆ. ಖಾಸಗಿ ಶಾಲೆಯು ಬಂದ್ ಇರುವ ಹಿನ್ನೆಲೆಯಲ್ಲಿ ಮಕ್ಕಳ ಹಿತದೃಷ್ಟಿಯಿಂದ ಶಾಲೆಗೆ ರಜೆಯನ್ನು ನೀಡುತ್ತಿರುವುದಾಗಿ ತಿಳಿಸಿದೆ. ಮಂಗಳವಾರ ರಜೆಯನ್ನು ನೀಡಿ ಶನಿವಾರ ಪೂರ್ಣ ಪ್ರಮಾಣದ ಶಾಲೆಯನ್ನು ನಡೆಸಲು ಆಡಳಿತ ಮಂಡಳಿ ನಿರ್ಧಾರವನ್ನು ಮಾಡಿದೆ ಎನ್ನಲಾಗಿದೆ.

ಮಾಜಿ ಕಾರ್ಪೋರೇಟರ್ ಗಣೇಶ್ ಹೇಳಿಕೆ
""ಚಾಮರಾಜಪೇಟೆ ಸ್ವಯಂಪ್ರೇರಿತವಾಗಿ ಬಂದ್ ಆಗಲಿದೆ. ಅಂಗಡಿ, ಮುಂಗಟ್ಟು ಬಂದ್ ಮಾಡಲು ಒಪ್ಪಿದ್ದಾರೆ. ಶಾಪ್ ಮುಂದೆ ಸ್ಟಿಕರ್ ಹಚ್ಚಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಚಾಮರಾಜಪೇಟೆ ಶಾಲಾಕಾಲೇಜುಗಳ ಆಡಳಿತ ಮಂಡಳಿಯನ್ನು ರಜೆಯನ್ನು ನೀಡಿ ಎಂದು ಕೇಳಿಕೊಳ್ಳಲಾಗಿದೆ. ನಾಳೆ ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಬಂದ್ ಇರಲಿದೆ. ಶಾಂತಿಯುತವಾಗಿ ಬಂದ್ ಆಗೇ ಆಗುತ್ತದೆ. ಚಾಮರಾಜಪೇಟೆ ಆಟದ ಮೈದಾನ, ಬಿಬಿಎಂಪಿ ಸ್ವತ್ತು ಆಗಬೇಕು ಎಂಬುದು ನಮ್ಮ ಬಂದ್ ಉದ್ದೇಶವಾಗಿದೆ,'' ಎದು ಮಾಜಿ ಕಾರ್ಪೋರೇಟರ್ ಬಿವಿ ಗಣೇಶ್ ತಿಳಿಸಿದ್ದಾರೆ.












Click it and Unblock the Notifications