Vande Bharat Eexpress: ಬೆಂಗಳೂರು-ಚೆನ್ನೈ ವಂದೇ ಭಾರತ್ ಪ್ರಯಾಣಿಕರಿಗೆ ಸಿಹಿಸುದ್ದಿ
ಬೆಂಗಳೂರು, ಡಿಸೆಂಬರ್ 05: ಮೈಸೂರು ಮತ್ತು ಪುರುಚ್ಚಿ ತಲೈವರ್ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವಿನ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸಂಚಾರಕ್ಕೆ 2022ರ ನವೆಂಬರ್ 11ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಈ ರೈಲು ಬೆಂಗಳೂರು ಮೂಲಕ ಚೆನ್ನೈಗೆ ಸಂಚಾರವನ್ನು ನಡೆಸುತ್ತದೆ. ಇದು ದಕ್ಷಿಣ ಭಾರತದ ಮತ್ತು ಕರ್ನಾಟಕದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಎಂಬ ಹೆಗ್ಗಳಿಕೆ ಪಡೆದಿದೆ.
ಈ ರೈಲಿನಲ್ಲಿ ಬೆಂಗಳೂರು ಮತ್ತು ಪುರುಚ್ಚಿ ತಲೈವರ್ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಿಲ್ದಾಣದ ನಡುವೆ ಸಂಚಾರ ನಡೆಸುವ ಪ್ರಯಾಣಿಕರಿಗೆ ಸಿಹಿಸುದ್ದಿಯೊಂದಿದೆ. ಶೀಘ್ರವೇ ಉಭಯ ನಗರಗಳ ನಡುವಿನ ಪ್ರಯಾಣದ ಅವಧಿ 4 ಗಂಟೆಗೆ ಇಳಿಕೆಯಾಗಲಿದೆ. ಇದರಿಂದಾಗಿ ಸಮಯದ ಉಳಿತಾಯವಾಗಲಿದ್ದು, ಜನರಿಗೆ ಸಹಕಾರಿಯಾಗಲಿದೆ.

ನೈಋತ್ಯ ರೈಲ್ವೆಯಿಂದ ಪರೀಕ್ಷೆ: ಡಿಸೆಂಬರ್ 5ರ ಗುರುವಾರ ನೈಋತ್ಯ ರೈಲ್ವೆ ಬೆಂಗಳೂರು ವಿಭಾಗ ಬೆಂಗಳೂರು-ಜೋಲಾರ್ಪಟ್ಟಿ ನಡುವೆ ಪರೀಕ್ಷೆಯೊಂದನ್ನು ನಡೆಸಲಿದೆ. ಈ ಮಾರ್ಗದಲ್ಲಿ ರೈಲುಗಳನ್ನು ಗಂಟೆಗೆ 110 ರಿಂದ 130 ಕಿ. ಮೀ. ವೇಗದಲ್ಲಿ ಓಡಿಸುವ ಪರೀಕ್ಷೆ ಇದಾಗಿದೆ.
ಈ ಪರೀಕ್ಷೆ ಯಶಸ್ವಿಯಾಗಿ ಇದೇ ವೇಗದಲ್ಲಿ ರೈಲುಗಳ ವಾಣಿಜ್ಯ ಸಂಚಾರಕ್ಕೆ ಒಪ್ಪಿಗೆ ಸಿಕ್ಕಿದರೆ ಬೆಂಗಳೂರು-ಚೆನ್ನೈ ನಡುವಿನ ವಂದೇ ಭಾರತ್ ರೈಲುಗಳ ಸಂಚಾರದ ಅವಧಿ 25 ನಿಮಿಷ ಕಡಿಮೆಯಾಗಿ, 4 ಗಂಟೆ ಆಗಲಿದೆ. ಇದೇ ಮಾದರಿಯಲ್ಲಿ ಈ ಮಾರ್ಗದ ಶತಾಬ್ದಿ ರೈಲಿನ ಸಂಚಾರದ ಅವಧಿ ಸುಮಾರು 20 ನಿಮಿಷ ಕಡಿಮೆಯಾಗಿ 5 ಗಂಟೆಗಳಿಗೆ ಬರಲಿದೆ.
ಬೆಂಗಳೂರು-ಜೋಲಾರ್ಪಟ್ಟಿ ನಡುವಿನ ಪರೀಕ್ಷೆ ಮುಗಿದು ರೈಲ್ವೆ ಸುರಕ್ಷತಾ ಆಯುಕ್ತರು ಈ ಮಾರ್ಗದಲ್ಲಿ ರೈಲುಗಳನ್ನು ಗಂಟೆಗೆ 110 ರಿಂದ 130 ಕಿ. ಮೀ. ವೇಗದಲ್ಲಿ ಓಡಿಸಲು ಪ್ರಮಾಣ ಪತ್ರವನ್ನು ನೀಡಬೇಕಿದೆ. ಪ್ರಾಯೋಗಿಕ ವೇಗದ ಪರೀಕ್ಷೆ ಹಿನ್ನಲೆಯಲ್ಲಿ ಈ ಮಾರ್ಗದಲ್ಲಿ ಇಂದು ಜನರು ರೈಲ್ವೆ ಹಳಿಗಳ ಅಕ್ಕ-ಪಕ್ಕ ಸಂಚಾರ ನಡೆಸಬಾರದು ಎಂದು ಸೂಚನೆ ನೀಡಲಾಗಿತ್ತು.
ಕಳೆದ ವರ್ಷ ಜೋಲಾರ್ಪಟ್ಟಿ-ಚೆನ್ನೈ ನಡುವಿನ ಮಾರ್ಗದಲ್ಲಿ ರೈಲನ್ನು ಗಂಟೆಗೆ 130 ಕಿ. ಮೀ. ವೇಗದಲ್ಲಿ ಓಡಿಸುವ ಕಾಮಗಾರಿ ಪೂರ್ಣಗೊಂಡಿತ್ತು. ಈ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಅನುಮತಿ ಸಿಕ್ಕಿತ್ತು. ಈಗ ಬೆಂಗಳೂರು-ಜೋಲಾರ್ಪಟ್ಟಿ ಮಾರ್ಗದಲ್ಲಿ ರೈಲುಗಳ ವೇಗ ಹೆಚ್ಚಿಸುವ ಕಾಮಗಾರಿ ಪೂರ್ಣಗೊಂಡು ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತಿದೆ.
ಬೆಂಗಳೂರು-ಜೋಲಾರ್ಪಟ್ಟಿ ನಡುವೆ ರೈಲು ಗಂಟೆಗೆ 130 ಕಿ. ಮೀ. ವೇಗದಲ್ಲಿ ಸಂಚಾರ ನಡೆಸಲು ಅನುಮತಿ ಸಿಕ್ಕಿದರೆ ಪ್ರತಿನಿತ್ಯ ಬೆಂಗಳೂರು-ಚೆನ್ನೈ ನಡುವೆ ಸಂಚಾರ ನಡೆಸುವ ಎರಡು ಜನ ಶತಾಬ್ದಿ ಮತ್ತು ಒಂದು ವಂದೇ ಭಾರತ್ ರೈಲುಗಳ ಸಂಚಾರದ ವೇಗ ಹೆಚ್ಚಲಿದೆ, ಜನರಿಗೆ ಅನುಕೂಲವಾಗಲಿದೆ.
ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ವಂದೇ ಭಾರತ್ ರೈಲನ್ನು ಗಂಟೆಗೆ 183 ಕಿ. ಮೀ. ವೇಗದಲ್ಲಿ ಸಾಗುವಂತೆ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿತ್ತು. ಆದರೆ ಸದ್ಯ ಗಂಟೆಗೆ 160 ಕಿ. ಮೀ. ವೇಗದಲ್ಲಿ ಸಾಗುವಂತೆ ಮಾಡಲಾಗಿದೆ. ಇದಕ್ಕೆ ಕಾರಣ ರೈಲುಗಳ ಅಭವೃದ್ಧಿ ಕಾಮಗಾರಿ ನಡೆಯುತ್ತಿರುವುದು. ಈಗ ಕಾಮಗಾರಿ ಪೂರ್ಣಗೊಂಡಿದೆ.
360 ಕಿ. ಮೀ. ಬೆಂಗಳೂರು-ಚೆನ್ನೈ ಕಾರಿಡಾರ್ ಅತಿ ಹೆಚ್ಚು ದಟ್ಟಣೆಯ ರಸ್ತೆಯಾಗಿದೆ. ಟೆಕ್ ಪಾರ್ಕ್, ತಯಾರಿ ಘಟಕಗಳು, ಟೌನ್ಶಿಪ್ಗಳು ಈ ಮಾರ್ಗದಲ್ಲಿದೆ. ಬೆಂಗಳೂರು ಆಟೋ ಮೊಬೈಲ್ ಹಬ್ ಆದರೆ ಬೆಂಗಳೂರು ಐಟಿ ಹಬ್ ಆಗಿದೆ. ಪ್ರತಿನಿತ್ಯ ಸಾವಿರಾರು ಜನರು ಉಭಯ ನಗರದ ನಡುವೆ ಸಂಚಾರವನ್ನು ನಡೆಸುತ್ತಾರೆ.
ರೈಲಿನ ವೇಗವನ್ನು ಗಂಟೆಗೆ 130 ಕಿ. ಮೀ.ಗೆ ಏರಿಕೆ ಮಾಡುವುದರಿಂದ ಪ್ರಯಾಣಿಕರ ಸಮಯ ಉಳಿತಾಯವಾಗಲಿದೆ. ಎರಡು ನಗರಗಳ ನಡುವಿನ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ.












Click it and Unblock the Notifications