Bengaluru–Chennai Expressway: ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ ವೇನಲ್ಲಿ ಸಂಚರಿಸುವವರಿಗೆ NHAIನಿಂದ ಮಹತ್ವದ ಸಂದೇಶ
Bengaluru-Chennai Expressway: ಇದೇ ವರ್ಷ ಉದ್ಘಟನೆಯಾಗಲಿರುವ ಬಹುನೀರಿಕ್ಷಿತ ಎಕ್ಸ್ಪ್ರೆಸ್ ವೇಗಳಲ್ಲಿ ಬೆಂಗಳೂರು-ಚೆನ್ನೇ ಎಕ್ಸ್ಪ್ರೆಸ್ ವೇ ಒಂದಾಗಿದೆ. ಇದು ಕರ್ನಾಟಕ ವ್ಯಾಪ್ತಿಯಲ್ಲಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಸಂಚಾರಕ್ಕೆ ಮುಕ್ತವಾಗಿದೆ. ಸದ್ಯ ಈ ಭಾಗದ ಸ್ಥಳೀಯರು ಎಕ್ಸ್ಪ್ರೆಸ್ ವೇ ಬಳಸುತ್ತಿದ್ದಾರೆ. ಜಾಲಿ ರೈಡ್ಗಳಿಗೆ ಹೆಚ್ಚಾಗಿ ಬಳಕೆಯಾಗುತ್ತಿದೆ ಎಂದಯ ತಿಳಿದುಬಂದಿದೆ.
260 ಕಿಲೋ ಮೀಟರ್ ಉದ್ದದ ಈ ಎಕ್ಸ್ಪ್ರೆಸ್ ವೇ ಅನ್ನು ಗ್ರೀನ್ಫೀಲ್ಡ್ ಯೋಜನೆಯಡಿ ₹17,900 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಇದು ಪೂರ್ಣಗೊಂದರೆ ಬೆಂಗಳೂರು ಮತ್ತು ಚೆನ್ನೈ ನಡುವಿನ ಪ್ರಯಾಣದ ಸಮಯ 7 ಗಂಟೆಗಳಿಂದ ಕೇವಲ 3 ಗಂಟೆಗೆ ಇಳಿಕೆಯಾಗಲಿದೆ.

ಕರ್ನಾಟಕ ಭಾಗದಲ್ಲಿ ಇದರ ಕಾಮಗಾರಿ ಸಂಪೂರ್ಣವಾಗಿ ಮುಕ್ತಾಯವಾಗಿದ್ದು, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲಿ ಇನ್ನೂ ನಿರ್ಮಾಣ ಹಂತದಲ್ಲಿದೆ. ಕರ್ನಾಟಕ ಭಾಗದಲ್ಲಿ ಈಗಾಗಲೇ ವಾಹನಗಳು ಸಂಚಾರ ಮಾಡುತ್ತಿದ್ದು, ಅತೀ ವೇಗವಾಗಿ ವಾಹನಗಳನ್ನು ಚಾಲಾಯಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಹಿನ್ನೆಲೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಾಹನ ಚಾಲಕರಿಗೆ ಎಚ್ಚರಿಕೆಯಿಂದ ವಾಹನ ಸಂಚಾರ ಮಾಡುವಂತೆ ಸೂಚನೆ ನೀಡಿದೆ. ಈ ಹೆದ್ದಾರಿ ಕಾಮಗಾರಿ ಹಲವೆಡೆ ಇನ್ನೂ ಅಪೂರ್ಣದಲ್ಲಿರುವ ಪರಿಣಾಮ ಅಪಾಯಕಾರಿಯಾಗಿದೆ. ಈ ಮಧ್ಯೆಯೇ ಕೆಲವು ದ್ವಿಚಕ್ರ ವಾಹನ ಸವಾರರು ನಿಯಮ ಮೀರಿ ಎಕ್ಸ್ಪ್ರೆಸ್ ವೇ ಅನ್ನು ಸ್ಟಂಟ್ ಮತ್ತು ಸಾಹಸಗಳಿಗಾಗಿ ಬಳಸುತ್ತಿದ್ದಾರೆ. ಇದು ಸರಿಯಲ್ಲ ಎಂದು ಪ್ರಾಧಿಕಾರ ತಿಳಿಸಿದೆ.
ಸದ್ಯ ಕರ್ನಾಟಕದ ವ್ಯಾಪ್ತಿಯಲ್ಲಿ 71 ಕಿಲೋ ಮೀಟರ್ ರಸ್ತೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಈ ಎಕ್ಸ್ಪ್ರೆಸ್ ವೇನಲ್ಲಿ ಸುತ್ತಮುತ್ತ ವಾಸಿಸುವ ಸ್ಥಳೀಯರು ಸಂಚಾರ ಆರಂಭಿಸಿದ್ದಾರೆ. ಅದರಲ್ಲೂ ಲಾಂಗ್ ರೈಡ್ ಮಾಡುವವರಿಗೆ ಹೇಳಿ ಮಾಡಿಸಿದ ಹೆದ್ದಾರಿ ಇದಾಗಿದ್ದು, ವಾರಾಂತ್ಯದಲ್ಲಿ ಹೆಚ್ಚಿನ ಜನರು ಸಂಚಾರ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಎಕ್ಸ್ಪ್ರೆಸ್ ವೇನಲ್ಲಿ ಇನ್ನೂ ಯಾವುದೇ ಟೋಲ್ ಶುಲ್ಕವನ್ನು ಆರಂಭಿಸಿಲ್ಲ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯೊಬ್ಬರು ಮಾತನಾಡಿ, ಮಾಲೂರು, ಬಂಗಾರಪೇಟೆ ಮತ್ತು ಬೇತಮಂಗಲದಲ್ಲಿ ನಿರ್ಗಮನ ಕೇಂದ್ರಗಳಿವೆ. ಟೋಲ್ ಸಂಗ್ರಹ ಪ್ರಾರಂಭವಾಗದ ಕಾರಣ, ಜನರು ಜಾಲಿ ರೈಡ್ನಲ್ಲಿ ಈ ರಸ್ತೆಯನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ಇದು ಸಂಪೂರ್ಣವಾಗಿ ಪೂರ್ಣಗೊಂಡರೆ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡುಗಳನ್ನು ಸಂಪರ್ಕಿಸಲಿದ್ದು, ಈ ಮೂಲಕ ದಕ್ಷಿಣ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಕ್ರಾಂತಿ ಉಂಟು ಮಾಡಲಿದೆ.
260 ಕಿಲೋಮೀಟರ್ ಉದ್ದದ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ ವೇ ಕಾಮಗಾರಿ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಇನ್ನೂ ಪೂರ್ಣಗೊಂಡಿಲ್ಲ. 2025ರ ಆಗಸ್ಟ್ ವೇಳೆಗೆ ಕಾಮಗಾರಿ ಸಂಪೂರ್ಣವಾಗಿ ಮುಕ್ತಾಯವಾಗಿ ಲೋಕಾರ್ಪಣೆಯಾಗುವ ಸಾಧ್ಯತೆಯಿದೆ ಎಂದು ಪ್ರಾಧಿಕಾರದ ಮೂಲಗಳಿಂದ ತಿಳಿದುಬಂದಿದೆ. ಚತುಷ್ಪಥ ಇದನ್ನು ಕರ್ನಾಟಕದಲ್ಲಿ ಮೂರು ಪ್ಯಾಕೇಜ್ಗಳಾಗಿ ವಿಂಗಡನೆ ಮಾಡಲಾಗಿದೆ.
ರಾಜ್ಯದಲ್ಲಿ ಮೂರು ಹಂತಗಳಲ್ಲಿ ನಿರ್ಮಾಣ
ಹಂತ 1: ಹೊಸಕೋಟೆ-ಮಾಲೂರು ನಡುವೆ 27.1 ಕಿಲೋ ಮೀಟರ್
ಹಂತ 2: ಮಾಲೂರು-ಬಂಗಾರಪೇಟೆ 27.1 ಕಿಲೋ ಮೀಟರ್
ಹಂತ 3: ಬಂಗಾರಪೇಟೆ-ಬೇತಮಂಗಲ, 17.5 ಕಿಲೋ ಮೀಟರ್
ಪ್ರತಿಯೊಂದು ಹಂತವು ಅದರ ಅಂತಿಮ ಹಂತದಲ್ಲಿದೆ ಮತ್ತು ಶೀಘ್ರದಲ್ಲೇ ಪ್ರಯಾಣಿಕರು ಬೆಂಗಳೂರು-ಚೆನ್ನೈ ನಡುವೆ ತಡೆರಹಿತ ಪ್ರಯಾಣದ ಅನುಭವವನ್ನು ಪಡೆಯುತ್ತಾರೆ. ದಕ್ಷಿಣ ಭಾರತದ ಮೊದಲ ಗ್ರೀನ್ಫೀಲ್ಡ್ ಎಕ್ಸ್ಪ್ರೆಸ್ವೇ ಎಂದು ಇದನ್ನು ಕರೆಯಲಾಗುತ್ತದೆ. ಈ ಎಕ್ಸ್ಪ್ರೆಸ್ವೇ ನಿರ್ಮಾಣವಾದರೆ ವ್ಯಾಪಾರ, ಪ್ರವಾಸೋದ್ಯಮ ಮತ್ತು ಆರ್ಥಿಕ ಬೆಳವಣಿಗೆಯನ್ನು ಕಾಣಬಹುದಾಗಿದೆ.
ಆದರೆ ಈ ಕಾಮಗಾರಿ ಪೂರ್ಣವಾಗುವವರೆಗೆ ಚಾಲಕರು ಸುರಕ್ಷತೆಯಿಂದ ವಾಹನಗಳನ್ನು ಚಾಲನೆ ಮಾಡಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ. ಈ ಹಿಂದೆ ಹೊಸಕೋಟೆ ಸಮೀಪದಲ್ಲಿ ದೇವಸ್ಥಾನವೊಂದರಿಂದಾಗಿ ಕಾಮಗಾರಿ ವಿಳಂಬ ಆಗಿತ್ತು. ದೇವಸ್ಥಾನವನ್ನು ಸ್ಥಳಾಂತರಿಸಲಾಗಿದ್ದು, 400 ಮೀಟರ್ ವ್ಯಾಪ್ತಿಯ ಕಾಮಗಾರಿ ಇದೀಗ ಮುಗಿದಿದೆ. ಕೆಲವು ಸಣ್ಣಪುಟ್ಟ ಕಾಮಗಾರಿಗಳನ್ನು ಹೊರತುಪಡಿಸಿದರೆ, ಸಾವರ್ಜನಿಕರಿಗೆ ಮುಕ್ತವಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಗಳಿಂದ ತಿಳಿದುಬಂದಿದೆ.
ಕರ್ನಾಟಕದ ಎಲ್ಲೆಲ್ಲಿ ನಿರ್ಗಮನ ಕೇಂದ್ರಗಳಿವೆ?: ಮಾಲೂರು, ಬಂಗಾರಪೇಟೆ ಮತ್ತು ಬೇತಮಂಗಲದಲ್ಲಿ ನಿರ್ಗಮನ ಕೇಂದ್ರಗಳನ್ನು ಈ ಎಕ್ಸ್ಪ್ರೆಸ್ ವೇ ಹೊಂದಿದೆ. ಸಂಪೂರ್ಣ ವಿಸ್ತರಣೆ ಇನ್ನೂ ಪೂರ್ಣಗೊಳ್ಳದ ಕಾರಣ ಟೋಲ್ ಸಂಗ್ರಹಿಸುತ್ತಿಲ್ಲ. ಎಕ್ಸ್ಪ್ರೆಸ್ವೇ ಅನ್ನು ಈಗ ಸ್ಥಳೀಯರು ಮತ್ತು ಲಾಂಗ್ ಡ್ರೈವ್ಗಳಿಗೆ ಹೋಗುವವರು ಬಳಕೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಈ ಎಕ್ಸ್ಪ್ರೆಸ್ವೇಯಲ್ಲಿ ಗಂಟೆಗೆ ಗರಿಷ್ಠ 120 ಕಿಮೀ ವೇಗದ ಮಿತಿ ನಿಗದಿಪಡಿಸಲಾಗಿದೆ.












Click it and Unblock the Notifications