ಬಿಎಂಟಿಸಿ ಬಸ್ಸಲ್ಲಿನ್ನು ಆಡಿಯೋ ಆ್ಯಡ್ಸ್, ಸ್ಟಾಪ್ ಹೇಳೋದು ಮಿಸ್ ಆಗೋ ಚಿಂತೆ ಪ್ರಯಾಣಿಕರಿಗೆ
ಬೆಂಗಳೂರು: ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಘೋಷಿಸಿದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯಿಂದ ಕರ್ನಾಟಕ ರಾಜ್ಯ ಸರಕಾರದ ಬೊಕ್ಕಸಕ್ಕೆ ಸಾಕಷ್ಟು ಪೆಟ್ಟು ಬೀಳುತ್ತಿದೆ. ಹೇಗಾದರೂ ಮಾಡಿ, ಆದಾಯ ಹೆಚ್ಚಿಸುವ ಚಿಂತನೆಯಲ್ಲಿರುವ ಸಾರಿಗೆ ಇಲಾಖೆ, ಬಿಎಂಟಿಸಿ ಬಸ್ಗಳಲ್ಲಿಯೂ ಆಡಿಯೋ ಜಾಹೀರಾತು ಬಿತ್ತರಗೊಳಿಸಲು ಚಿಂತಿಸುತ್ತಿದೆ. ಆ ಮೂಲಕ ಆದಾಯ ಹೆಚ್ಚಿಸಿಕೊಳ್ಳಲು ನಿರ್ಧರಿಸಿದೆ. ಆದರೆ, ಇದರಿಂದ ಪ್ರಯಾಣಿಕರು ತಮ್ಮ ಮುಂದಿನ ನಿಲ್ದಾಣದ ಬಗ್ಗೆ ಘೋಷಿಸೋದು ಮಿಸ್ ಆಗಬಹುದೆಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಬಸ್ಸಿನ ಹೊರ ಭಾಗದಲ್ಲಿ ಪೂರ್ತಿ ವಾಣಿಜ್ಯ ಜಾಹೀರಾತುಗಳಿಂದಲೇ ತುಂಬಿ ತುಳುಕುತ್ತಿದೆ. ಬಿಎಂಟಿಸಿ ಐಕಾನಿಕ್ ಬಣ್ಣವಾದ ನೀಲಿಯೇ ಕಣ್ಮರೆಯಾಗಿ ಜಾಹೀರಾತಿಗೆ ತಕ್ಕಂತೆ ಬಸ್ಸಿನ ಬಣ್ಣ ಬದಲಾಗುತ್ತಿದೆ. ಅದರು ಮುಂದುವರಿದ ಭಾಗವಾಗಿ ಇದೀಗ ಬಸ್ಸಿನೊಳಗೆ ಆಡಿಯೋ ಜಾಹೀರಾತುಗಳನ್ನು ಪ್ಲೇ ಮಾಡಲು ಇಲಾಖೆ ನಿರ್ಧರಿಸಿದ್ದು, ಶಕ್ತಿ ಯೋಜನೆಯಿಂದ ಬೊಕ್ಕಸಕ್ಕೆ ಕಡಿಮೆಯಾಗುತ್ತಿರುವ ಆದಾಯವನ್ನು ಸರಿ ದೂಗಿಸಲು ಯೋಚಿಸುತ್ತಿದೆ.

ಇದುವರೆಗೆ ಕೇವಲ ಬಸ್ ನಿಲ್ದಾಣಗಳಲ್ಲಿ ಮಾತ್ರ ಈ ಧ್ವನಿಯಾಧಾರಿತ ಜಾಹೀರಾತು ವ್ಯವಸ್ಥೆ ಜಾರಿಯಲ್ಲಿತ್ತು. ಸಾರ್ವಜನಿಕ ಪ್ರಕಟಣೆಗಳ ಜೊತೆಗೆ, ಕೆಲವು ಜಾಹೀರಾತುಗಳನ್ನು ನಿರಂತರವಾಗಿ ಪ್ರಕಟಿಸಲಾಗುತ್ತದೆ. ಆದರೆ, ಇನ್ನು ಬಿಎಂಟಿಸಿ ಬಸ್ಗಳಲ್ಲಿ ಮುಂದಿನ ಬಸ್ ನಿಲ್ದಾಣಗಳ ಬಗ್ಗೆ ಮಾಹಿತಿ ನೀಡುವ ಧ್ವನಿ ಆಧಾರಿತ ಪ್ರಯಾಣಿಕರ ಮಾಹಿತಿಯ ಜೊತೆ ಬಿಡುವಿನ ಸಮಯದಲ್ಲಿ ಆಡಿಯೋ ಜಾಹೀರಾತನ್ನು ಭಿತ್ತರಿಸಲಾಗುತ್ತದೆ.
ಸಾರಿಗೆ ಸಂಸ್ಥೆಗೆ ಆದಾಯ ಹೇಗೆ?:
ಬೆಂಗಳೂರು ಮತ್ತದರ ಸುತ್ತಮುತ್ತಲಿನ ನಗರ, ಉಪನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬಿಎಂಟಿಸಿ ತನ್ನ ಸೇವೆಯನ್ನು ನೀಡುತ್ತಿದೆ. ಪ್ರಯಾಣಿಕರಿಂದ ಬರುವ ಆದಾಯಕ್ಕೆ ಪೂರಕವಾಗಿ ಸಾರಿಗೆ ಸಂಸ್ಥೆ ತನ್ನ ಆಸ್ತಿ, ವಾಣಿಜ್ಯ ಬಳಕೆ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದೆ. ಬಸ್ ಮೇಲೆ ಜಾಹೀರಾತುಗಳನ್ನು ಅಳವಡಿಸುವ ಜೊತೆಗೆ, ಸಂಸ್ಥೆಯು ಭೂಮಿ ಲೀಸ್ ನೀಡುವುದು, ಬಸ್ ನಿಲ್ದಾಣಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ಬಾಡಿಗೆಗೆ ಕೊಡುವುದು, ಕಚೇರಿ ಸ್ಥಳಗಳು, ಪಾರ್ಕಿಂಗ್ ಸೌಲಭ್ಯಗಳು ಮತ್ತು ಬಸ್ಗಳಲ್ಲಿನ ಜಾಹೀರಾತು ಫಲಕಗಳ ಮೂಲಕ ಆದಾಯ ಗಳಿಸುತ್ತಿದೆ.
ಸಂಸ್ಥೆಯಲ್ಲಿ ಪ್ರಸ್ತುತ 1,027 ಎಲೆಕ್ಟ್ರಿಕ್ ಬಸ್ಗಳು ಸೇರಿ ಒಟ್ಟು 6,158 ಬಸ್ಗಳು ಕಾರ್ಯ ನಿರ್ವಹಿಸುತ್ತಿವೆ. 2023-24ರ ಹಣಕಾಸು ವರ್ಷದಲ್ಲಿ, ಬಿಎಂಟಿಸಿ ವಿವಿಧ ವಾಣಿಜ್ಯ ಮೂಲಗಳಿಂದ ಸುಮಾರು ₹811 ಕೋಟಿ ಸಾರಿಗೆಯೇತರ ಆದಾಯ ಗಳಿಸಿತ್ತು. ಇದೀಗ ಮತ್ತೆ ಟಿಕೆಟ್ನಿಂದ ಬರುವ ಆದಾಯ ಹೊರತುಪಡಿಸಿ, ಮತ್ತಷ್ಟು ಹೊಸ ವಿಧಾನಗಳಿಂದ ಆದಾಯ ಕಲೆ ಹಾಕಲು ಯತ್ನಿಸುತ್ತಿದೆ.
ಪ್ರಯಾಣಿಕರ ವಿರೋಧ ಯಾಕೆ?
ಧ್ವನಿ ಘೋಷಣಾ ವ್ಯವಸ್ಥೆಯಲ್ಲಿ ಜಾಹೀರಾತುಗಳನ್ನು ಬಿತ್ತರಿಸಿದರೆ ಸಾರ್ವಜನಿಕ ಉದ್ದೇಶವನ್ನು ಪೂರೈಸುವ ಸೌಲಭ್ಯಕ್ಕೆ ಧಕ್ಕೆಯಾಗಬಹುದು ಎಂದು ಹಲವು ಪ್ರಯಾಣಿಕರು ಪ್ರಶ್ನಿಸಿದ್ದಾರೆ. 'ಧ್ವನಿ ಘೋಷಣಾ ವ್ಯವಸ್ಥೆ ಮುಖ್ಯವಾಗಿ ಪ್ರಯಾಣಿಕರಿಗೆ, ವಿಶೇಷವಾಗಿ ದೃಷ್ಟಿಹೀನರಿಗೆ ಅಥವಾ ಮಾರ್ಗದ ಪರಿಚಯವಿಲ್ಲದವರಿಗೆ ಬಸ್ ನಿಲ್ದಾಣಗಳನ್ನು ಗುರುತಿಸಲು ಸಹಾಯ ಮಾಡುವ ಉದ್ದೇಶವನ್ನು ಹೊಂದಿದೆ. ಆದರೆ, ನಡುವೆ ಜಾಹೀರಾತುಗಳನ್ನು ಸೇರಿಸುವುದರಿಂದ ತಮ್ಮ ನಿಲ್ದಾಣದ ಬಗ್ಗೆ ಸ್ಪಷ್ಟ ಮಾಹಿತಿ ಪಡೆಯಲು ವಿಶೇಷ ವ್ಯಕ್ತಿಗಳಿಗೆ ತೊಂದರೆಯಾಗಬಹುದು,' ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಒಟ್ಟಿನಲ್ಲಿ ಬಸ್ ನಿಲ್ದಾಣಗಳ ಘೋಷಣೆ ನಡುವೆಯೇ ವಾಣಿಜ್ಯ ಜಾಹೀರಾತುಗಳನ್ನು ಸೇರಿಸುವುದು ಸರಿಯಲ್ಲ. ಆಡಿಯೋ ಘೋಷಣಾ ವ್ಯವಸ್ಥೆ ಒಂದು ನಿರ್ದಿಷ್ಟ ಕಾರಣಕ್ಕಾಗಿ ಅಸ್ತಿತ್ವದಲ್ಲಿದೆ. ಇದು ದೃಷ್ಟಿಹೀನ ಪ್ರಯಾಣಿಕರು ಸ್ವತಂತ್ರವಾಗಿ ಪ್ರಯಾಣಿಸಲು ಸಹಾಯ ಮಾಡುತ್ತದೆ ಮತ್ತು ಬೆಂಗಳೂರಿಗೆ ಹೊಸದಾಗಿ ಬಂದವರಿಗೆ ಅಥವಾ ಅಪರಿಚಿತ ಮಾರ್ಗದಲ್ಲಿ ಪ್ರಯಾಣಿಸುವ ಜನರಿಗೆ ನೆರವಾಗುತ್ತದೆ. ಮಧ್ಯದಲ್ಲಿ ಜಾಹೀರಾತುಗಳನ್ನು ಸೇರಿಸುವುದರಿಂದ ಅನಗತ್ಯ ಗೊಂದಲ ಸೃಷ್ಟಿಯಾಗಬಹುದು, ಪ್ರಮುಖ ನಿಲ್ದಾಣದ ಮಾಹಿತಿಯಿಂದ ಪ್ರಯಾಣಿಕರ ಗಮನ ಬೇರೆಡೆಗೆ ಸರಿಯಬಹುದು. ಇದರಿಂದ ಸಹಕಾರಿಯಾಗಬೇಕಾದ ವ್ಯವಸ್ಥೆಯಿಂದ ಪ್ರಯಾಣಿಕರಿಗೆ ಯಾವ ಅನುಕೂಲವೂ ಆಗುವುದಿಲ್ಲ.
ಮುಂದಿನ ನಿಲ್ದಾಣದ ಮಾಹಿತಿಯನ್ನು ಎಲ್ಲ ಬಸ್ನಲ್ಲಿಯೂ ನೀಡುವುದಿಲ್ಲ. ಆ ವ್ಯವಸ್ಥೆಯೇ ಸರಿ ಇಲ್ಲ. ಹಾಗಾಗಿ ಈ ಹೊಸ ಜಾಹೀರಾತು ವ್ಯವಸ್ಥೆ ಜಾರಿ ತಂದರೂ ಒಂದೇ, ಬಿಟ್ಟರೂ ಒಂದೇ. ಮೊದಲು ಸರಿಯಾಗಿ ಟಿಕೆಟ್ ವಿತರಿಸುವ ವ್ಯವಸ್ಥೆ ಆಗಲಿ. ಇಲ್ಲವೇ ಡಿಜಿಟಲ್ ವ್ಯವಸ್ಥೆ ಜಾರಿಗೆ ತರಲಿ. ಆಗ ನಮ್ಮ ಗಮ್ಯವನ್ನು ಆರಾಮಾಗಿ ತಲಬುಹುದಿ, ಅದು ಬಿಟ್ಟು ಬರೀ ಆದಯ ಹೆಚ್ಚಿಸಿಕೊಳ್ಳಲು ಮಾತ್ರ ಸಂಸ್ಥೆ ಯೋಚಿಸಿದರೆ ಪ್ರಯಾಣಿಕರಿಗೇನೂ ಲಾಭವಾಗವುದಿಲ್ಲ ಎನ್ನುತ್ತಾರೆ ಮತ್ತೊಬ್ಬ ಪ್ರಯಾಣಿಕ.
ಅನೇಕ ಬಿಎಂಟಿಸಿ ಬಸ್ಗಳಲ್ಲಿ ಆಡಿಯೋ ಘೋಷಣಾ ವ್ಯವಸ್ಥೆಯು ಒಂದೋ ಕೆಲಸ ಮಾಡುತ್ತಲೇ ಇಲ್ಲ ಅಥವಾ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಮೊದಲು ಈ ಸಮಸ್ಯೆಗಳನ್ನು ಬಗೆಹರಿಸುವ ಬದಲು, ಸಂಸ್ಥೆಯು ಆದಾಯ ಗಳಿಸಲು ಹೊಸ ಮಾರ್ಗಗಳನ್ನು ಹುಡುಕುವತ್ತ ಹೆಚ್ಚು ಗಮನ ಹರಿಸುತ್ತಿರುವಂತೆ ತೋರುತ್ತಿದೆ. ಆಡಿಯೋ ಜಾಹೀರಾತುಗಳ ಬಗ್ಗೆ ಯೋಚಿಸುವ ಮುನ್ನ, ಬಿಎಂಟಿಸಿ ಪ್ರತಿ ಬಸ್ನಲ್ಲಿ ಸರಿಯಾಗಿ ಕಾರ್ಯನಿರ್ವಹಿಸುವ ಘೋಷಣಾ ವ್ಯವಸ್ಥೆ ಇರುವುದನ್ನು ಖಚಿತಪಡಿಸಿಕೊಳ್ಳಲು ಅಷ್ಟೇ ಶ್ರಮ ವಹಿಸಬೇಕು.
ಅನೇಕ ಕಂಪನಿಗಳು ಇದೀಗ ಸೋಷಿಯಲ್ ಮೀಡಿಯಾ ಮೂಲಕ ಜಾಹೀರಾತು ನೀಡಲು ಮುಂದಾಗುತ್ತಿದ್ದು, ಬಿಎಂಟಿಸಿಯ ಹೊಸ ಯೋಜನೆಗೆ ಯಾರು ಆಸಕ್ತಿ ತೋರುತ್ತಾರೆಂಬ ಅನುಮಾನವೂ ಕಾಡುತ್ತಿದೆ. ಮೊದಲು ಪ್ರಯಾಣಿಕರಿಗೆ ಸೂಕ್ತ ಸೇವೆ ಒದಗಿಸುವುದನ್ನು ಒದಿಗಸಲು ಸಾರಿಗೆ ಸಂಸ್ಥೆ ಚಿಂತಿಸಿ, ನಂತರ ಆದಾಯ ಹೆಚ್ಚಿಸಲು ದಾರಿ ಕೊಂಡರೆ ಒಳ್ಳೇದು ಅನ್ನುತ್ತಿದ್ದಾರೆ ಅನೇಕರು.














Click it and Unblock the Notifications