ಯುವತಿ VS ಕಂಡಕ್ಟರ್: ಯಾರದ್ದು ತಪ್ಪು? ಯಾರದ್ದು ಒಪ್ಪು?
ಬೆಂಗಳೂರು, ಫೆಬ್ರವರಿ, 26: ಬೆಂಗಳೂರಿನಲ್ಲಿ ಮಹಿಳೆ ಮೇಲೆ ಹಲ್ಲೆಗೆ ಸಂಬಂಧಿಸಿದ ಮತ್ತೊಂದು ಪ್ರಕರಣ ದಾಖಲಾಗಿದೆ. ಅಲ್ಲದೇ ದೂರು-ಪ್ರತಿ ದೂರು ದಾಖಲಾಗಿದ್ದು ಪೊಲೀಸರು ಘಟನೆಯ ಮೂಲವನ್ನು ಹುಡುಕುತ್ತಿದ್ದಾರೆ.
"ನನ್ನ ಗೆಳೆಯನ ಜೊತೆ ಜಗಳವಾಡಿದ ಬಿಎಂಟಿಸಿ ಕಂಡಕ್ಟರ್, ಮುಕ್ಕಾಲು ಗಂಟೆ ನನ್ನನ್ನು ಬಸ್ನಲ್ಲಿ ಬಂಧಿಸಿಟ್ಟಿದ್ದ. ಅಲ್ಲದೆ ಠಾಣೆಗೆ ಕರೆದೊಯ್ದಿದ್ದು, ಅಲ್ಲಿ ವಿಚಾರಣೆ ನೆಪದಲ್ಲಿ ಪೊಲೀಸರೂ ಕಿರುಕುಳ ನೀಡಲಾಗಿದೆ" ಎಂದು ಕಾಲೇಜು ವಿದ್ಯಾರ್ಥಿನಿಯೊಬ್ಬಳು ಆರೋಪಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಫರೀದಾಬಾದ್ ಮೂಲದ ರಿಯಾ ಅಹುಜಾ ಆರೋಪ ಮಾಡಿರುವ ವಿದ್ಯಾರ್ಥಿನಿ. ಪ್ರಕರಕಣವನ್ನು ಫೇಸ್ಬುಕ್ನಲ್ಲಿ ಬರೆದುಕೊಂಡ ಯುವತಿ ಅಳಲು ಹೊರಹಾಕಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಬಿಎಂಟಿಸಿ ಬಸ್ ಕಂಡಕ್ಟರ್ ಉಮಾಶಂಕರ್ನನ್ನು ಯಲಹಂಕ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ವಿದ್ಯಾರ್ಥಿನಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವುದೇನು?
"ನಾನು ಯಲಹಂಕ ಸಮೀಪದ ಖಾಸಗಿ ಕಾಲೇಜಿನಲ್ಲಿ ನಾನು ಡಿಸೈನಿಂಗ್ ಕೋರ್ಸ್ ವ್ಯಾಸಂಗ ಮಾಡುತ್ತಿದ್ದೇನೆ. ಬುಧವಾರ (ಫೆ.24) ಸಂಜೆ ತರಗತಿ ಮುಗಿಸಿಕೊಂಡು 7.30ಕ್ಕೆ ನನ್ನ ಸ್ನೇಹಿತ ಓಜಶ್ರೀಸಿಂಗ್ ಜತೆ ಮನೆಗೆ ಹೋಗಲು ಬಿಎಂಟಿಸಿ ಬಸ್ ಹತ್ತಿದ್ದೆ. ನಮ್ಮ ಬಳಿ ಬಂದ ಕಂಡಕ್ಟರ್, ಮಹಿಳೆಯರ ಸೀಟಿನ ಹತ್ತಿರ ಏಕೆ ನಿಂತಿದ್ದೀಯಾ, ಹಿಂದಕ್ಕೆ ಹೋಗುವಂತೆ ನನ್ನ ಸ್ನೇಹಿತನ ಬಳಿ ಹೇಳಿದ.
ಇದಕ್ಕೆ ಓಜಶ್ರೀಸಿಂಗ್ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಇಬ್ಬರ ನಡುವೆ ವಾಗ್ವಾದ ನಡೆಯಿತು. ಮಾತಿಗೆ ಮಾತು ಬೆಳೆದು ಅತಿರೇಕಕ್ಕೆ ಹೋದಾಗ ಕಂಡಕ್ಟರ್ ನನ್ನ ಗೆಳೆಯನನ್ನು ದೂಡಿದ. ಕೋಪಗೊಂಡ ಆತನೂ ಕಂಡಕ್ಟರ್ನನ್ನು ಜೋರಾಗಿ ತಳ್ಳಿದ. ನಿಯಂತ್ರಣ ತಪ್ಪಿ ಕಂಡಕ್ಟರ್ ಕೆಳಗೆ ಬಿದ್ದ. ಈ ವೇಳೆ ಬಸ್ನಲ್ಲಿದ್ದ ಇತರ ಪ್ರಯಾಣಿಕರೂ ನನ್ನ ಗೆಳೆಯನನ್ನು ನಿಂದಿಸಲು ಆರಂಭಿಸಿದರು. ಇದರಿಂದ ಭೀತಿಗೆ ಒಳಗಾದ ಸ್ನೇಹಿತ ಹೊರಕ್ಕೆ ನೆಗೆದು ಓಡಿಹೋದ. ಆದರೆ ಕಂಡಕ್ಟರ್ ಬಸ್ಸನ್ನು ಠಾಣೆಗೆ ಚಲಾಯಿಸುವಂತೆ ಚಾಲಕನಿಗೆ ಸೂಚಿಸಿ ನನ್ನನ್ನು ಪ್ರಕರಣದಲ್ಲಿ ಎಳೆದು ತಂದರು.
ಯಲಹಂಕ ಠಾಣೆ ಸಮೀಪಕ್ಕೆ ಹೋಗುತ್ತಿದ್ದಂತೆ ಬಸ್ನಲ್ಲಿದ್ದ ಎಲ್ಲ ಪ್ರಯಾಣಿಕರೂ ಕೆಳಗಿಳಿದರು. ನನ್ನನ್ನು ಮಾತ್ರ ಇಳಿಯಲು ಬಿಡದೆ ಬಾಗಿಲು ಬಂದ್ ಮಾಡಿ ಕೂಡಿಟ್ಟರು. ಕಂಡಕ್ಟರ್ ಮತ್ತು ಚಾಲಕ ಠಾಣೆಯೊಳಗೆ ಹೋದರು. ಸ್ವಲ್ಪ ಸಮಯದ ನಂತರ ಒಬ್ಬ ಕಾನ್ಸ್ಟೆಬಲ್ ಕಿಟಕಿ ಸಮೀಪಕ್ಕೆ ಬಂದು ಓಡಿ ಹೋಗಿರುವ ಸ್ನೇಹಿತನನ್ನು ಠಾಣೆಗೆ ಕರೆಸುವವರೆಗೆ ಬಸ್ ಬಾಗಿಲು ತೆಗೆಯಲ್ಲ ಎಂದು ನನಗೆ ಬೆದರಿಕೆ ಹಾಕಿದರು.
ಸುಮಾರು ಮುಕ್ಕಾಲು ಗಂಟೆ ಬಸ್ನಲ್ಲೇ ಕೂಡಿಟ್ಟಿದ್ದರು. ಗೆಳೆಯ ಠಾಣೆಗೆ ಬಂದ ಬಳಿಕ ಬಸ್ ಬಾಗಿಲು ತೆಗೆದರು ಎಂದು ಯುವತಿ ವಿವರಿಸಿದ್ದಾರೆ. ಬಸ್ನಲ್ಲಿ ಕೂಡಿಟ್ಟು ಕಿರುಕುಳ ನೀಡಿರುವ ಬಗ್ಗೆ ದೂರು ದಾಖಲಿಸಿಕೊಳ್ಳುವಂತೆ ಪೊಲೀಸ್ ಇನ್ಸ್ಪೆಕ್ಟರ್ ಎನ್.ಆರ್. ನಾಗರಾಜ್ ಅವರಲ್ಲಿ ಮನವಿ ಮಾಡಿದೆ. ಬಿಳಿ ಹಾಳೆ ಕೊಟ್ಟು ದೂರು ಬರೆಯುವಂತೆ ಹೇಳಿದ ಅವರು, ಕೋರ್ಟ್ಗೆ ಅಲೆಯಬೇಕು, ಕರೆದಾಗ ವಿಚಾರಣೆಗೆ ಬರಬೇಕು. ಆದ್ದರಿಂದ ಸಂಧಾನ ಮಾಡಿಕೋ ಎಂದು ಸಲಹೆ ನೀಡಿದರು. ವಕೀಲರ ಜತೆ ಚರ್ಚಿಸಿ ದೂರು ಕೊಡುತ್ತೇನೆಂದು ಹೇಳಿ ನಾನು ನನ್ನ ಸ್ನೇಹಿತನೊಂದಿಗೆ ಹಿಂದಕ್ಕೆ ಬಂದೆ " ಎಂದು ಬರೆದುಕೊಂಡಿದ್ದಾರೆ.
ಆದರೆ ಕಂಡಕ್ಟರ್ ಉಮಾಶಂಕರ್ ಯುವತಿ ಗೆಳೆಯ ಓಜಶ್ರೀಸಿಂಗ್ ವಿರುದ್ಧ ಹಲ್ಲೆ ದೂರು ಕೊಟ್ಟಿದ್ದಾರೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ವಿದ್ಯಾರ್ಥಿನಿ ಆರೋಪಿಸಿರುವಂತೆ ಪೊಲೀಸರಿಂದ ಲೋಪವಾಗಿದ್ದರೆ ಎಲ್ಲರ ಮೇಲೆಯೂ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಂಡಕ್ಟರ್ ಹೇಳುವಂತೆ ಯುವತಿ ಮತ್ತು ಆಕೆಯ ಗೆಳೆಯ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಠಾಣೆಗೆ ಕರೆದುಕೊಂಡು ಹೋದರೆ ಬಸ್ ನಿಂದ ಕೆಳಕ್ಕೆ ಇಳಿಯದೇ ಸತಾಯಿಸಿದ್ದಾರೆ. ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಒಟ್ಟಿನಲ್ಲಿ ಸಮಗ್ರ ತನಿಖೆ ಮೂಲಕ ಮಾತ್ರ ಘಟನೆಯ ಸತ್ಯಾಸತ್ಯತೆ ಹೊರಬರಲು ಸಾಧ್ಯ.












Click it and Unblock the Notifications