ಗೋಮಾಂಸ ಭಕ್ಷಣೆ: ವಿವಾದ ಸೃಷ್ಟಿಸಿದ ಹೇಳಿಕೆಗಳು
ಬೆಂಗಳೂರು, ಏ. 9 : ಸುಮ್ಮನಿರಲಾರದೆ ಇರುವೆ ಬಿಟ್ಟುಕೊಂಡ್ರು ಎಂಬ ಗಾದೆಯಂತೆ ಗೋಮಾಂಸ ಭಕ್ಷಣೆ ಕುರಿತಂತೆ ಬುದ್ಧಿಜೀವಿಗಳಾದ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ. ಗಿರೀಶ್ ಕಾರ್ನಾಡ್, ದಲಿತ ಸಾಹಿತಿ ಎಲ್ ಹನುಮಂತಯ್ಯ, ವಿಮರ್ಶಕ ಮರುಳಸಿದ್ದಪ್ಪ ನೀಡಿರುವ ಹೇಳಿಕೆಗಳು ವಿವಾದದ ಕಾರ್ಮೋಡವನ್ನು ಸೃಷ್ಟಿಸಿವೆ.
ನವೀಕರಣಗೊಂಡ ಪುಟ್ಟಣ್ಣಚೆಟ್ಟಿ ಸಭಾಂಗಣದಲ್ಲಿ ಡೆಮಾಕ್ರೆಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ (ಡಿವೈಎಫ್ಐ) ಗುರುವಾರ ಆಯೋಜಿಸಿದ್ದ 'ಗೋಮಾಂಸ ಲಘು ಉಪಹಾರ' ಎಂಬ ಕಾರ್ಯಕ್ರಮದಲ್ಲಿ ಗೋಮಾಂಸ ಕುರಿತಂತೆ ನೀಡಿರುವ ಹೇಳಿಕೆಗಳು ಬಿರುಗಾಳಿ ಎಬ್ಬಿಸಿವೆ.[ಅನಂತಮೂರ್ತಿ ಗೋಮಾಂಸ ಹೇಳಿಕೆಗೆ ಬ್ರಾಹ್ಮಣರ ಖಂಡನೆ]

ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಲ್ಲದೆ, ಮರುಳಸಿದ್ದಪ್ಪ, ಹನುಮಂತಯ್ಯ, ಗಿರೀಶ್ ಕರ್ನಾಡ್ ಮುಂತಾದವರು, ಶುಭ ಸಂದರ್ಭದಲ್ಲಿ ಒಬ್ಬರಿಗೊಬ್ಬರ ಬಾಯಿಗೆ ಸಿಹಿ ಹಂಚುವಂತೆ ಹಸಿ ಗೋಮಾಂಸವನ್ನು ಒಬ್ಬರೊಬ್ಬರ ಬಾಯಿಗೆ ಇಟ್ಟು ಸಂಭ್ರಮಿಸಲು ಮುಂದಾಗಿದ್ದರು. ಇದಕ್ಕೆ ಪ್ರತಿಯಾಗಿ ಶ್ರೀರಾಮಸೇನೆ ಮತ್ತು ಬಿಜೆಪಿ ಪ್ರತಿಭಟನೆಗಿಳಿದಿದೆ.
ಬುದ್ಧಿಜೀವಿಗಳು ಹೇಳಿದ್ದೇನು?:
ಬೇರೆಯವರ ಆಹಾರ ಪದ್ಧತಿ ಕೇಳುವ ಹಕ್ಕಿಲ್ಲ. ಸಂವಿಧಾನ ಬದ್ಧವಾಗಿ ಇದು ಕಾನೂನು ರೀತಿಯ ಅಪರಾಧವಾಗುತ್ತದೆ. ಗೋ ಮಾಂಸ ನಿಷೇಧ ಸಾಂಸ್ಕೃತಿಕ ದಬ್ಬಾಳಿಕೆ, ದಲಿತರು, ಮುಸ್ಲಿಂರ ಪರಂಪರಾಗತ ಆಹಾರಕ್ಕೆ ಅಡ್ಡಿ ಪಡಿಸಲು ಇವರು ಯಾರು? ಎಂದು ಪ್ರಶ್ನಿಸಿದ್ದಾರೆ.
ಗೋಮಾಂಸ ಬ್ರಾಹ್ಮಣರ ಆಹಾರವಾಗಿತ್ತು. ಈ ಬಗ್ಗೆ ಪುರಾಣಗಳಲ್ಲೇ ಪುರಾವೆಯಿದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದ ಮೇಲೆ ಈಗೇಕೆ ನಿಷೇಧ ಎಂದು ಎಲ್ ಹನುಮಂತಯ್ಯ ಸಮರ್ಥನೆ ನೀಡುತ್ತಾರೆ.[ಬಿಜೆಪಿಯ ಗೋಹತ್ಯೆ ನಿಷೇಧ ವಿಧೇಯಕ ರದ್ದು]
ಸ್ವಾಮಿ ವಿವೇಕಾನಂದರು ಗೋಮಾಂಸ ತಿನ್ನುತ್ತಿದ್ದರು. ಇಲ್ಲಿ ಜಾತಿ ಮತ ಎಂಬ ತಾರತಮ್ಯವಿಲ್ಲ. ಆಹಾರ ಸೇವನೆ ಅವರವರಿಗೆ ಬಿಟ್ಟಿದ್ದು. ಇಂಥ ನೀತಿಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂಬುದು ಮರುಳಯ್ಯ ಅವರ ಹೇಳಿಕೆ.

ಅಷ್ಟಕ್ಕೂ ಆಗಿದ್ದೇನು?
ಡಿವೈಎಫ್ಐ ಪುರಭವನದ ಎದುರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗೋ ಮಾಂಸ ಉಪಹಾರ ಏರ್ಪಡಿಸಲಾಗಿತ್ತು. ದಲಿತರು ಸೇರಿದಂತೆ ಪ್ರಗತಿಪರರು ಗೋಮಾಂಸ ಭಕ್ಷಣೆಗೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗೋಮಾಂಸದ ಅಡುಗೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಇದು ಕಾನೂನು ಸುವ್ಯವಸ್ಥೆ ಹದಗೆಡಿಸುವಂಥ ಘಟನೆಯಾಗುತ್ತದೆ. ಹಾಗಾಗಿ ವಶಕ್ಕೆ ಪಡೆದಿದ್ದೇವೆ ಎಂಬುದು ಪೊಲೀಸರ ಹೇಳಿಕೆ.
ಘಟನೆನಂತರ ನ್ಯಾಯಾಲಯದಲ್ಲೂ ಗೋ ಮಾಂಸ ಭಕ್ಷಣೆ ವಿರುದ್ಧ ದೂರು ದಾಖಲಾಗುದ್ದು ಏಪ್ರಿಲ್ 28 ರಂದು ವಿಚಾರಣೆ ನಡೆಯಲಿದೆ. ಮಹಾರಾಷ್ಟ್ರ ಸರ್ಕಾರ ಇತ್ತೀಚೆಗಷ್ಟೇ ಗೋಮಾಂಸ ನಿಷೇಧ ಮಾಡಿ ಆದೇಶ ಹೊರಡಿಸಿತ್ತು. ಅಲ್ಲದೇ ಅಕ್ರಮ ಗೋ ಸಾಗಾಟ ಮತ್ತು ಮಾಂಸ ಭಕ್ಷಣೆ ಅಪರಾಧ ಎಂದು ಹೇಳಿತ್ತು. ಗೋಮಾಂಸ ನಿಷೇಧ ಸಂಬಂಧದ ಮಸೂದೆಗಳು ಸರ್ಕಾರದ ಹಂತದಲ್ಲಿ ಚರ್ಚಿತವಾಗುತ್ತಿವೆ.[ಮಹಾರಾಷ್ಟ್ರದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿ]
ಈ ಘಟನೆಗೆ ಪರ-ವಿರೋಧದ ಅಭಿಪ್ರಾಯ ವ್ಯಕ್ತವಾಗುತ್ತಿದ್ದು ಮುಂದೆ ಯಾವ ಯಾವ ತಿರವುಗಳನ್ನು ಪಡೆದುಕೊಳ್ಳಬಹುದು? ಸರ್ಕಾರ ಯಾವ ಕ್ರಮ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.












Click it and Unblock the Notifications