Bengaluru acid attack case: ಆ್ಯಸಿಡ್ ದಾಳಿ ಮಾಡಿದ ನಾಗನ ಇಂದಿನ ಸ್ಥಿತಿ ಘೋರ!
ಬೆಂಗಳೂರು, ನ.06: ತನ್ನ ಪ್ರೀತಿಯನ್ನು ನಿರಾಕರಿಸದ ಕಾರಣಕ್ಕೆ ಯುವತಿಯ ಮೇಲೆ ಅಮಾನುಷವಾಗಿ ಆ್ಯಸಿಡ್ ದಾಳಿ ಮಾಡಿದ್ದ ನಾಗೇಶ್ ಇಂದು ಘೋರ ದುರಂತಕ್ಕೆ ಒಳಗಾಗಿದ್ದಾನೆ. ಗ್ಯಾಂಗ್ರೀನ್ ಲಕ್ಷಣಗಳಿಂದ ಬಳಲುತ್ತಿದ್ದು, ಹಲವರು ಇದು ವಿಧಿ ನೀಡಿದ ಶಿಕ್ಷೆ ಎಂದಿದ್ದಾರೆ.
ಆರೋಪಿ ನಾಗೇಶ್ ಅಲಿಯಾಸ್ ಆ್ಯಸಿಡ್ ನಾಗ ಕಳೆದ 6 ತಿಂಗಳಿಂದ ನಿರಂತರವಾಗಿ ಬಲಗಾಲಿನ ಗಾಯದ ಸಮಸ್ಯೆಯನ್ನು ಎದುರಿಸುತ್ತಿದ್ದು ಕಾಲಿನಲ್ಲಿ ಗ್ಯಾಂಗ್ರೀನ್ ಲಕ್ಷಣಗಳು ಕಂಡು ಬಂದಿವೆ.
ಬೆಂಗಳೂರಿನ ಹೆಗ್ಗನಹಳ್ಳಿಯ ಯುವತಿಯನ್ನು ಪ್ರೀತಿಸುವಂತೆ ಏಳು ವರ್ಷದಿಂದ ಹಿಂದೆ ಬಿದ್ದಿದ್ದ ಆ್ಯಸಿಡ್ ದಾಳಿಕೋರ ನಾಗೇಶ್ ಏ.28 ರಂದು ಆಕೆಯ ಮೇಲೆ ಆ್ಯಸಿಡ್ ಎರಚಿ ವಿಕೃತಿ ಮೆರೆದಿದ್ದ. ದಾಳಿ ಪ್ರಕರಣದಲ್ಲಿ ಈಗಾಗಲೇ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸರು ಆರೋಪಿ ನಾಗೇಶ್ನನ್ನು ಬಂಧಿಸಿದ್ದಾರೆ. ನಾಗೇಶ್ ತನ್ನನ್ನು ಪ್ರೀತಿಸಲು ನಿರಾಕರಿಸಿದ ಯುವತಿ ಮೇಲೆ ಆಸಿಡ್ ದಾಳಿ ಮಾಡುವ ಮುನ್ನ ಸಂಪೂರ್ಣವಾಗಿ ಪೂರ್ವ ನಿಯೋಜಿತ ಯೋಜನೆಯನ್ನು ಹಾಕಿಕೊಂಡಿದ್ದ. ಆ್ಯಸಿಡ್ ಖರೀದಿಸಲು ತಂತ್ರವನ್ನು ಹೂಡಿದ್ದ ಎನ್ನುವುದು ಬಹಿರಂಗವಾಗಿತ್ತು.

ಆ್ಯಸಿಡ್ ದಾಳಿ ಬಳಿಕ ಈ ಆರೋಪಿ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ. ಆದರೆ ಮನಸು ಒಪ್ಪದೇ ಸನ್ಯಾಸಿ ವೇಷ ಧರಿಸಿ ತಿರುವಣ್ಣಾಮಲೈ ಸೇರಿಕೊಂಡಿದ್ದವ ಕೈದಿಯಾಗಿ ಪರಪ್ಪನ ಅಗ್ರಹಾರ ಸೇರಿದ್ದಾನೆ.
ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಸಿಕ್ಕಿಬಿದ್ದು ಮಾರ್ಗಮಧ್ಯೆ ಬರುವಾಗ ಕಿತಾಪತಿ ಮಾಡಿ ಕಾಮಾಕ್ಷಿಪಾಳ್ಯ ಪೊಲೀಸರಿಂದ ಗುಂಡೇಟು ತಿಂದು ಆಸ್ಪತ್ರೆಗೆ ಸೇರಿದ್ದ ನಾಗ, ಈಗ ಗುಂಡು ತಗುಲಿದ್ದ ಸ್ಥಳದಲ್ಲಿ ರಾಡ್ ಹಾಕಿ ಬ್ಯಾಂಡೇಜ್ ಹಾಕಿದ್ದರೂ ನೋವು ಹೆಚ್ಚಾಗಿದೆ. ಬಲಗಾಲಿನ ನಾಗನ ಗಾಯದ ತೀವ್ರತೆ ಕಡಿಮೆಯಾಗಿಲ್ಲ.
ಹೀಗಾಗಿ ಕಳೆದ ಆರು ತಿಂಗಳಿಂದ ನಿರಂತರವಾಗಿ ಬಲಗಾಲಿನ ಗಾಯದ ಸಮಸ್ಯೆ ಕಾಡುತ್ತಿದ್ದು, ಆರೋಪಿ ನಾಗ ವಿಕ್ಟೋರಿಯಾ ಆಸ್ಪತ್ರೆಗೆ ಜೈಲಿನ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆ್ಯಸಿಡ್ ನಾಗನ ಕಾಲಲ್ಲಿ ಗ್ಯಾಂಗ್ರಿನ್ ಲಕ್ಷಣಗಳು ಕಾಣುತ್ತಿದ್ದು, ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ನಡೆಯುತ್ತಿದೆ.

ಅಂದು ಪ್ರೀತಿಸಲು ನಿರಾಕರಿಸದ ಕಾರಣದಿಂದ ಒಬ್ಬ ಯುವತಿಯ ಸುಂದರ ಬಾಳನ್ನು ಹಾಳು ಮಾಡಲು ಬಯಸಿದ್ದ ಆರೋಪಿ ಆ್ಯಸಿಡ್ ನಾಗ ಇಂದು ನಡೆಯಲು ಸಾಧ್ಯವಾಗದೇ ನರಳಾಡುತ್ತಿದ್ದಾನೆ. ಇನ್ನೊಬ್ಬರ ಬದುಕಿನಲ್ಲಿ ಆಟವಾಡಲು ಹೊರಡುವ ಎಲ್ಲರಿಗೂ ಕಾನೂನಿನ ಶಿಕ್ಷೆಯ ಜೊತೆಗೆ ಇಂತಹ ಘಟನೆಗಳು ಮತ್ತೆ ಮತ್ತೆ ವಿಧಿ ಶಿಕ್ಷೆ ನೀಡುತ್ತದೆ ಎಂಬುದನ್ನು ನಂಬುವಂತಾಗಿದೆ.












Click it and Unblock the Notifications