ಬೆಂಗಳೂರುː ಒಂದೇ ದಿನ 5 ಅತ್ಯಾಚಾರ ಪ್ರಕರಣ ದಾಖಲು
ಬೆಂಗಳೂರು, ನ.12: ಮಂಗಳವಾರ ಬೆಂಗಳೂರಿನ ಹೆಣ್ಣು ಮಕ್ಕಳ ಪಾಲಿಗೆ ಕರಾಳ ದಿನ. ಐಟಿ ಸಿಟಿ ರೇಪ್ ಸಿಟಿಯಾಗಿ ಬದಲಾಗುತ್ತಿರುವುದಕ್ಕೆ ನಿದರ್ಶನ ಎಂಬಂತೆ ಒಂದೇ ದಿನ 5 ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದಿವೆ.
ಮಾನಸಿಕ ಅಸ್ವಸ್ಥೆ, ವಿದ್ಯಾರ್ಥಿನಿ ಮತ್ತು ಇಬ್ಬರು ಅಪ್ರಾಪ್ತ ಬಾಲಕಿಯರು ಕಾಮುಕರ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಅಲ್ಲದೇ ಮಗಳೇ ಸ್ವತಃ ತಂದೆ ಮೇಲೆ ಅತ್ಯಾಚಾರ ದೂರು ದಾಖಲಿಸಿದ್ದಾಳೆ. ಶಾಲೆಯ ಆವರಣದಲ್ಲಿ ನಡೆಯುತ್ತಿದ್ದ ದೌರ್ಜನ್ಯಗಳು ಇದೀಗ ಬೀದಿಗೆ ಬಂದಂತಾಗಿದೆ.

ಪ್ರಿಯಕರನ ಎದುರೇ ಅತ್ಯಾಚಾರ
ಉತ್ತರಹಳ್ಳಿ ಸಮೀಪದ ಓಂಕಾರ ಹಿಲ್ಸ್ ರಸ್ತೆಯಲ್ಲಿ ಸಂಜೀವ್ಮೂರ್ತಿ (24) ಎಂಬಾತ ವಿದ್ಯಾರ್ಥಿನಿ ಮೇಲೆ ಆಕೆಯ ಪ್ರಿಯಕರನ ಎದುರೇ ಅತ್ಯಾಚಾರ ಎಸಗಿದ್ದು ಕೆಂಗೇರಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. [ಕಾಮುಕರಿಂದ ಮಕ್ಕಳ ರಕ್ಷಿಸಲು ಲಾವಣ್ಯ ಹೋರಾಟ]
ಅ.25ರಂದು ನಡೆದಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಓಂಕಾರ ಆಶ್ರಮದಿಂದ ಹಿಂದಿರುಗುತ್ತಿದ್ದ ವೇಳೆ ವಿದ್ಯಾರ್ಥಿನಿ ಮತ್ತು ಆಕೆಯ ಪ್ರಿಯಕರನ ಮೇಲೆ ಹಲ್ಲೆ ನಡೆಸಿದ ಸಂಜೀವ್ಮೂರ್ತಿ ಕೃತ್ಯ ಎಸಗಿದ್ದಾನೆ. ನಂತರ ವಿದ್ಯಾರ್ಥಿನಿಯ ಪ್ರಿಯಕರನ ಮೊಬೈಲ್ ದೋಚಿ ಪರಾರಿಯಾಗಿದ್ದ. ಅಲ್ಲಿಂದ ಬೆದರಿಕೆ ಕರೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಸಂಘಟನೆಯೊಂದರ ಬೆಂಬಲದಿಂದ ಸಂತ್ರಸ್ತೆ ನವೆಂಬರ್ 11 ರಂದು ದೂರು ನೀಡಿದ್ದು ಆರೋಪಿಯನ್ನು ಬಂಧಿಸಲಾಗಿದೆ. ಸಂಜೀವ್ಮೂರ್ತಿ ಉತ್ತರಹಳ್ಳಿಯ ಖಾಸಗಿ ಶಾಲೆಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ.
ಚಾಕೊಲೇಟ್ ಆವಾಂತರ
ಒಂಬತ್ತು ವರ್ಷದ ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮಂಜುನಾಥ್ (21) ಎಂಬಾತನನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ. ಬಾರ್ ಬೆಂಡಿಂಗ್ ಕೆಲಸ ಮಾಡುವ ಮಂಜುನಾಥ್ ನೆಲಮಂಗಲ ತಾಲೂಕಿನ ಸೊಂಡೆಕೊಪ್ಪ ಗ್ರಾಮದವ. ಚಾಕೋಲೆಟ್ ಕೊಡಿಸುವುದಾಗಿ ನಂಬಿಸಿ ಬಾಲಕಿ ಮೇಲೆ ದೌರ್ಜನ್ಯ ಎಸಗಲು ಹೊಂಚು ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನಾಲ್ಕೂವರೆ ವರ್ಷದ ಮಗಳ ಮೇಲೆ ನೆರೆ ಮನೆಯ ಹರಿಂದರ್ (18) ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಬಾಲಕಿ ಪಾಲಕರು ರಾಮಮೂರ್ತಿನಗರ ಠಾಣೆಗೆ ದೂರು ಸಲ್ಲಿಸಿದ್ದು ಆರೋಪಿಯನ್ನು ಬಂಧಿಸಲಾಗಿದೆ.[ಲೈಂಗಿಕ ದೌರ್ಜನ್ಯ ಪ್ರಕರಣ ಇತ್ಯರ್ಥಕ್ಕೆ ತ್ವರಿತ ನ್ಯಾಯಾಲಯ]
ಕಲ್ಕೆರೆ ಸಮೀಪದ ಪೂಜಾ ಗಾರ್ಡನ್ನಲ್ಲಿರುವ ಆರೋಪಿ ಬಾಲಕಿಯ ತಂದೆಯನ್ನು ಭೇಟಿ ಮಾಡಲು ಹೋಗಿದ್ದ. ಈ ವೇಳೆ ಮನೆಯಲ್ಲಿದ್ದ ಬಾಲಕಿಗೆ ಚಾಕೊಲೇಟ್ ಕೊಡಿಸುವುದಾಗಿ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ತಂದೆಯಿಂದಲೇ ಅತ್ಯಾಚಾರ
ನಾನು ಅಪ್ರಾಪ್ತೆಯಾಗಿದ್ದಾಗ ಸ್ವತಃ ನನ್ನ ತಂದೆಯೇ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಬಿಕಾಂ ವಿದ್ಯಾರ್ಥಿನಿಯೊಬ್ಬಳು ವಿದ್ಯಾರಣ್ಯಪುರ ಪೊಲೀಸರಿಗೆ ದೂರು ನೀಡಿದ್ದಾರೆ.
ನಾನು 14 ವರ್ಷದವಳಿದ್ದಾಗ ತಂದೆ ಎರಡು ಬಾರಿ ಅತ್ಯಾಚಾರ ಎಸಗಿದ್ದಾರೆ. ಈ ಸಂಗತಿ ತಾಯಿಗೆ ಮತ್ತು ಸಹೋದರರಿಗೆ ಗೊತ್ತಿದ್ದರೂ ಅವರು ನನ್ನ ನೆರವಿಗೆ ಬರಲಿಲ್ಲ ಎಂದು ವಿದ್ಯಾರ್ಥಿನಿ ದೂರಿನಲ್ಲಿ ಆರೋಪಿಸಿದ್ದಾಳೆ.
ಕೊಳ್ಳೇಗಾಲಕ್ಕೆ ಕರೆದೊಯ್ದು ಅತ್ಯಾಚಾರ
ಕುಮಾರಸ್ವಾಮಿ ಲೇಔಟ್ ಸಮೀಪದ ಸರಬಂಡೆಪಾಳ್ಯದಲ್ಲಿ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದ ರಿಜ್ವಾನ್ (19) ನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯನ್ನು ಪ್ರೀತಿಸುವುದಾಗಿ ನಂಬಿಸಿ ಕೊಳ್ಳೇಗಾಲಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಬಾಲಕಿಯ ತಾಯಿ ದೂರು ನೀಡಿದ್ದು ರಿಜ್ವಾನ್ನನ್ನು ಬಂಧಿಸಲಾಗಿದೆ.












Click it and Unblock the Notifications