ಕಥೆ 3 : ಸರ್ವಶಕ್ತ ಇಲ್ಲಿ ಗೋಡೆ ಕಾಯುವ ಸಿಪಾಯಿ
ಬೆಂಗಳೂರಿನಲ್ಲಿ ಹಲವಾರು ಕಥೆಗಳಿವೆ, ಕಥಾ ಸರಣಿಯಲ್ಲಿ ಇಂದು ಸರ್ವಶಕ್ತ, ಸರ್ವಾಂತರಯಾಮಿ ದೇವರನ್ನು ನಮ್ಮ ಬೆಂಗಳೂರಿಗರು ತಮ್ಮ ಮನೆ ಗೋಡೆ, ಕಾಂಪೌಂಡ್ ಕಾಯಲು ಬಿಟ್ಟಿರುವ ಕಥೆ ಓದಿ...
ಬೆಂಗಳೂರಿನಲ್ಲಿ ಹಲವಾರು ಕಥೆಗಳಿವೆ. ಇವು ಶ್ರೀಸಾಮಾನ್ಯರ ಕಥೆಗಳು, ಪೊಲೀಸರ ಕಥೆಗಳು, ಟೆಕ್ಕಿಗಳ ಕಥೆಗಳು, ಕೆರೆಗಳ ಕಥೆಗಳು, ತಿಪ್ಪೆಯ ಕಥೆಗಳು, ರಸ್ತೆಯ ಕಥೆಗಳು, ಬಡಾವಣೆಯ ಕಥೆಗಳು, ಫ್ಲೈಓವರುಗಳ ಕಥೆಗಳು, ಅರಳಿಕಟ್ಟೆಯ ಹಿರಿಯಜ್ಜರ ಕಥೆಗಳು, ಪುಢಾರಿಗಳ ಕಥೆಗಳು.... ಹೀಗೆ ಹಲವಾರಿವೆ.. ಇಲ್ಲಿ ಸರ್ವಶಕ್ತ, ಸರ್ವಾಂತರಯಾಮಿ ದೇವರನ್ನು ನಮ್ಮ ಬೆಂಗಳೂರಿಗರು ತಮ್ಮ ಮನೆ ಗೋಡೆ, ಕಾಂಪೌಂಡ್ ಕಾಯಲು ಬಿಟ್ಟಿರುವ ಕಥೆ ಓದಿ...
'ಇಲ್ಲಿ ಗಲೀಜು ಮಾಡಬಾರದು; ಮಾಡಿದರೆ ಶಿಕ್ಷೆಗೆ ಗುರಿಪಡಿಸಲಾಗುವುದು' ಎಂದು ಗೋಡೆ ಮೇಲೆ ಬರೆದು ಬರೆದು ನಮ್ಮ ಜನಕ್ಕೆ ಸಾಕಾಗಿ ಹೋಗಿದೆ. ಕಸವನ್ನು ಕಾಯಲು ಶನಿಗೆ ಸುಪಾರಿಗೆ ಕೊಟ್ಟಿರುವುದು ಲೇಟೆಸ್ಟ್ ಸುದ್ದಿ ಇರಬಹುದು. ಆದರೆ, ದೇವರನ್ನು ನಮ್ಮ ಬೆಂಗಳೂರಿನ ಮಹಾನಾಗರೀಕರು ತಮ್ಮ ಮನೆಯ ಗೋಡೆಯ ಸಂರಕ್ಷಣೆಗೆ ಗಾರ್ಡ್ ಆಗಿ ಬಳಕೆ ಮಾಡುವ ಪದ್ಧತಿ ಹಲವು ವರ್ಷಗಳಿಂದ ಜಾರಿಯಲ್ಲಿದೆ.
ಎಲ್ಲಾ ದೇವರಿಗೂ ಮಾನ್ಯತೆ: ಮನೆಯ ಗೋಡೆಗಳನ್ನು ಕಾಯಲು ಕಾವಲುಗಾರರನ್ನು ನೇಮಿಸಿದ್ದಾರೆ. ಅದೂ ಸಾಮಾನ್ಯದವರಲ್ಲ, ದೇವಾನುದೇವತೆಗಳನ್ನೇ.. ಹುಬ್ಬೇರಿಸಬೇಡಿ... ಇದು ನಿಜ... ಈಗಾಗಲೇ ನೀವು ಈ ದೃಶ್ಯವನ್ನು ನೋಡಿರಬಹುದು.
ನಗರದ ಅನೇಕ ಬಡಾವಣೆಯ ಮನೆ, ಕಚೇರಿ ಗೋಡೆಗಳ ಮೇಲೆ ಹಾಕಿರುವ' ದೇವರುಗಳ ಟೈಲ್ಸ್, ಚಿತ್ರವನ್ನು. ಇದರ ಜೊತೆಯಲ್ಲಿ ರೆಡಿಮೇಡ್ ಬರಹ 'ಇಲ್ಲಿ ಗಲೀಜು ಮಾಡಬೇಡಿ, ಒಂದಾ ಮಾಡಬೇಡಿ, ಶಿಕ್ಷೆಗೆ ಗುರಿಪಡಿಸಲಾಗುವುದು'. 'ಇಲ್ಲಿ ಚಿತ್ರವನ್ನು ಅಂಟಿಸಬೇಡಿ' ಇತ್ಯಾದಿ ಮಾಮೂಲಿ ವಾಕ್ಯಗಳಿರುತ್ತದೆ.
ದೇವರ ಚಿತ್ರವನ್ನು ಹಾಕುವಲ್ಲಿ ಕೆಲವರಂತೂ ಸರ್ವಧರ್ಮೀಯರಾಗಿರುತ್ತಾರೆ ಎಲ್ಲಾ ಮತದ ದೇವರುಗಳ ಚಿತ್ರ ಯಾ ಧಾರ್ಮಿಕ ಚಿಹ್ನೆಯನ್ನು ಬಳಸುತ್ತಾರೆ. ಕೆಲವರು ವಾಸ್ತು, ದೋಷ ಪರಿಹಾರ ಇನ್ನಿತರ ಕಾರಣ ಹೇಳಿ ಮನೆಯ ಮುಂದೆ ದೇವರ ಪಟ ಹಾಕಿರುವುದನ್ನು ನೋಡಿರಬಹುದು. ಆದರೆ, ಮನೆ ಕಾಪೌಂಡ್ ತುಂಬಾ ದೀಪಾವಳಿಯಲ್ಲಿ ದೀಪದ ಸಾಲು ಇಟ್ಟ ಹಾಗೆ ದೇವರ ಚಿತ್ರ ಹಾಕಿ ಜೊತೆಗೆ ಗಲೀಜು ಮಾಡಬೇಡಿ ಅಂತಾ ಹಾಕೋ ಗಲೀಜು ಮನಸ್ಸಿನ ಬೆಂಗಳೂರಿಗರಿಗೆ ಏನೆಂದು ಹೇಳೋಣ ಹೇಳಿ.
ಅಲ್ಲಾ ಕಣ್ರಿ, ಸರ್ವಶಕ್ತ, ಸರ್ವವ್ಯಾಪಿ ಎಂದು ದೇವರನ್ನು ಹೇಳುತ್ತೇವೆ. ಅಂತಾ ದೇವರಿಗೆ ಈ ದುರ್ಗತಿ ಬಂದರೆ ಹೇಗೆ ಹೇಳಿ? ದೇವರು ಅಂತಾ ಹೇಳಿದರೆ ಸಾಕು ಪೂಜ್ಯ ಭಾವನೆ ಬರುತ್ತದೆ. ಅದು ಯಾವುದೇ ಧರ್ಮದ ದೇವರಿರಬಹುದು. ದೇವರು ನಿರಾಕಾರ ಅಥವಾ ಆಕಾರವುಳ್ಳವ ನಾಗಿರಬಹುದು ಅದು ಇಲ್ಲಿ ಅಪ್ರಸ್ತುತ.
ಎಲ್ಲರೂ ಪೂಜ್ಯ ಭಾವನೆಯಿಂದ ಕಾಣುವ ದೇವರನ್ನು ತಮ್ಮ ಮನೆಯ ಗೋಡೆಗಳ ಅಂದ, ಚೆಂದ ಕಾಪಾಡುವುದಕ್ಕೋಸ್ಕರ ಬಳಸುವುದು ಸರಿಯೇ?. ದೇವರ ಚಿತ್ರವಿದ್ದರೆ ಭಯದಿಂದಲೋ, ಭಕ್ತಿಯಿಂದಲೋ ಅಥವಾ ಇವೆರಡರ ಮಿಶ್ರಣದಿಂದಲೋ ಏನೋ ಜನ ಗೋಡೆಯ ಮೇಲೆ ಗಲೀಜು ಮಾಡುವುದಿಲ್ಲ ಎಂಬ ದೂ(ದು)ರುದ್ದೇಶ ನಿಮಗಿದ್ದರೆ.. ಇಟ್ಸ್ ವೇರಿ ಬ್ಯಾಡ್... ಬೆಂಗಳೂರಿನ ಬುದ್ಧಿವಂತ (ಅ)ನಾಗರೀಕರೇ ನಿಮ್ಮ ದೇವರು ನಿಮ್ಮ ಮನೆಯ ಒಳಗಿರಲಿ. ಮನದೊಳಗಿರಲಿ. ನಿಮ್ಮ ಮನೆ ಗೋಡೆ ಕಾಯಲಿಕ್ಕೆ ಬಿಡಬೇಡಿ.