ಬೆಂಗಳೂರು; ಕೋವಿಡ್ ಮರೆತ ಜನ, ಮಾಸ್ಕ್ ಹಾಕೋದೆ ಇಲ್ಲ!
ಬೆಂಗಳೂರು, ನವೆಂಬರ್ 07; ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ಜನರು ಮಾಸ್ಕ್, ಸಾಮಾಜಿಕ ಅಂತರವನ್ನು ಮರೆತಿದ್ದಾರೆ. ಅದರಲ್ಲೂ ಬೆಂಗಳೂರಿನಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ.
ಆರೋಗ್ಯ ಸಚಿವಾಲಯದ ಶನಿವಾರದ ಹೆಲ್ತ್ ಬುಲೆಟಿನ್ ಪ್ರಕಾರ ರಾಜ್ಯದಲ್ಲಿ ದಾಖಲಾದ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ 224. ಬೆಂಗಳೂರು ನಗರದಲ್ಲಿ 148 ಆಗಿದೆ. ಬೆಂಗಳೂರಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 6,366.
ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಲೇ ಬೆಂಗಳೂರು ನಗರದಲ್ಲಿ ಜನರು ಮಾಸ್ಕ್ ಹಾಕುವುದನ್ನು ಮರೆಯುತ್ತಿದ್ದಾರೆ. ಸಾಮಾಜಿಕ ಅಂತರ ಸಹ ಪಾಲನೆ ಮಾಡುತ್ತಿಲ್ಲ. ಈ ಬಗ್ಗೆ ಬಿಬಿಎಂಪಿಯ ಮಾರ್ಷಲ್ಗಳೇ ಮಾಹಿತಿ ನೀಡಿದ್ದಾರೆ.

ಮಾರುಕಟ್ಟೆಗಳಲ್ಲಿ ಮಾತ್ರವಲ್ಲ, ಜನ ವಸತಿ ಪ್ರದೇಶಗಳಲ್ಲಿ ಸಹ ಜನರು ಕೋವಿಡ್ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಿ ಎಂದು ಬಿಬಿಎಂಪಿ ಮಾರ್ಷಲ್ಗಳು ಜನರಿಗೆ ಮನವರಿಕೆ ಮಾಡಿಕೊಡುವುದರಲ್ಲಿಯೇ ತಲ್ಲೀನರಾಗಿದ್ದಾರೆ.
ಅಕ್ಟೋಬರ್ ತಿಂಗಳಿನಲ್ಲಿ ಬೆಂಗಳೂರು ನಗರದಲ್ಲಿ ಕೋವಿಡ್ ನಿಯಮ ಪಾಲನೆ ಮಾಡದ ಸುಮಾರು 20 ಸಾವಿರ ಪ್ರಕರಣಗಳನ್ನು ಪತ್ತೆ ಹಚ್ಚಿ ಬಿಬಿಎಂಪಿ ಮಾರ್ಷಲ್ಗಳು ದಂಡ ಹಾಕಿದ್ದಾರೆ. ಆದರೆ ದಂಡ ಹಾಕದ ಪ್ರಕರಣಗಳು ಇದಕ್ಕಿಂತಲೂ ಹೆಚ್ಚಿವೆ.
ನಗರದ ಡಿಜೆ ಹಳ್ಳಿ, ಕೆಜಿ ಹಳ್ಳಿ, ಪುಲಿಕೇಶಿ ನಗರ, ಚಾಮರಾಜಪೇಟೆ, ಮಹದೇವಪುರ, ದಾಸರಹಳ್ಳಿ, ಪೀಣ್ಯ, ಪೀಣ್ಯ ಕೈಗಾರಿಕಾ ಪ್ರದೇಶ ಸೇರಿದಂತೆ ವಿವಿಧ ಕಡೆ ಕೋವಿಡ್ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಬಿಬಿಎಂಪಿ ಮಾರ್ಷಲ್ಗಳು ನಿಯಮ ಪಾಲನೆ ಮಾಡದವರ ವಿರುದ್ಧ ದಂಡ ಪ್ರಯೋಗ ಮಾಡಿದರೆ ದಂಡ ಕಟ್ಟಲು ಸಾಧ್ಯವಿಲ್ಲ ಎಂದು ಜನರು ಗಲಾಟೆ ಮಾಡುತ್ತಿದ್ದಾರೆ.
2020ರ ಮೇ ತಿಂಗಳ ಬಳಿಕ ಬಿಬಿಎಂಪಿ ಮಾಸ್ಕ್ ಧರಿಸದ 5,58,903 ಪ್ರಕರಣಗಳನ್ನು ಪತ್ತೆ ಹಚ್ಚಿದೆ. ದಂಡ ರೂಪದಲ್ಲಿ 13.47 ಕೋಟಿ ರೂಪಾಯಿ ಸಂಗ್ರಹ ಮಾಡಲಾಗಿದೆ. ಸಾಮಾಜಿಕ ಅಂತರ ಕಾಪಾಡದ 32,887 ಪ್ರಕರಣ ಪತ್ತೆ ಹಚ್ಚಿದ್ದು, 75,17 ಲಕ್ಷ ರೂ. ದಂಡವನ್ನು ಸಂಗ್ರಹ ಮಾಡಲಾಗಿದೆ.
ಬೆಂಗಳೂರು ಮಾತ್ರವಲ್ಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜನರು ಮಾಸ್ಕ್ ಹಾಕುವುದನ್ನು ಮರೆಯುತ್ತಿದ್ದಾರೆ. ಕೋವಿಡ್ ನಮ್ಮ ನಡುವೆಯೇ ಇದೆ, ಜನರು ಮಾರ್ಗಸೂಚಿಗಳನ್ನು ಮರೆಯಬಾರದು ಎಂಬ ಕರೆಗೆ ಬೆಲೆಯೇ ಇಲ್ಲದಂತಾಗಿದೆ.
ರಾತ್ರಿ ಕರ್ಫ್ಯೂ ವಾಪಸ್; ಕರ್ನಾಟಕ ಸರ್ಕಾರ ಶುಕ್ರವಾರದಿಂದಲೇ ಜಾರಿಗೆ ಬರುವಂತೆ ರಾತ್ರಿ ಕರ್ಫ್ಯೂ ವಾಪಸ್ ಪಡೆದಿದೆ. ಕೋವಿಡ್ ಹರಡುವಿಕೆ ತಡೆಯಲು ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿತ್ತು.
ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ರಾತ್ರಿ 10 ರಿಇಂದ ಬೆಳಗ್ಗೆ 5 ಗಂಟೆ ತನಕ ಜಾರಿಯಲ್ಲಿತ್ತು. ಅಕ್ಟೋಬರ್ 25ರಂದು ರಾತ್ರಿ ಕರ್ಫ್ಯೂ ಕುರಿತು ಪರಿಷ್ಕೃತ ಆದೇಶವನ್ನು ಹೊರಡಿಸಲಾಗಿತ್ತು. ಈಗ ರಾತ್ರಿ ಕರ್ಫ್ಯೂ ವಾಪಸ್ ಪಡೆಯಲಾಗಿದೆ.
ರಾತ್ರಿ ಕರ್ಫ್ಯೂ ವಾಪಸ್ ಪಡೆಯುವ ಜೊತೆಗೆ ರಾಜ್ಯ ಸರ್ಕಾರ ಕುದುರೆ ರೇಸ್ ನಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ನೀಡಿದೆ. ಎರಡು ಡೋಸ್ ಲಸಿಕೆಯನ್ನು ಪಡೆದವರು ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬಹುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಶನಿವಾರದ ಹೆಲ್ತ್ ಬುಲೆಟಿನ್ ಪ್ರಕಾರ ಕರ್ನಾಟಕದಲ್ಲಿ 224 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 8090 ಆಗಿದೆ. ಇದುವರೆಗೂ ರಾಜ್ಯದಲ್ಲಿ 2943487 ಜನರು ಡಿಸ್ಚಾರ್ಜ್ ಆಗಿದ್ದಾರೆ.
ಭಾರತದಲ್ಲಿಯೂ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿದೆ. ಭಾನುವಾರ ಬೆಳಗ್ಗೆಯ ಮಾಹಿತಿಯಂತೆ ದೇಶದಲ್ಲಿ 24 ಗಂಟೆಯಲ್ಲಿ 10,853 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ.
ದೇಶದಲ್ಲಿ 24 ಗಂಟೆಯಲ್ಲಿ 12,432 ಜನರು ಗುಣಮುಖಗೊಂಡಿದ್ದು, 526 ಜನರು ಸಾವುನ್ನಪ್ಪಿದ್ದಾರೆ. ದೇಶದ ಸಕ್ರಿಯ ಪ್ರಕರಣಗಳ ಸಂಖ್ಯೆ 1,44,845 ಆಗಿದೆ.












Click it and Unblock the Notifications