ನಾನು ಆದೇಶ ಕೊಟ್ಟಿದ್ದಕ್ಕೇ ಸೂರ್ಯೋದಯ ಲೇಟ್ ಆಗಿದ್ದು: ನಿತ್ಯಾನಂದ ಸ್ವಾಮಿ
ಬೆಂಗಳೂರು, ಜುಲೈ 4: ನಲವತ್ತು ನಿಮಿಷ ಲೇಟ್ ಆಗಿ ನೀನು ಉದಯಿಸಬೇಕೆಂದು ಸೂರ್ಯ ದೇವರಿಗೆ ಆದೇಶ ಕೊಟ್ಟಿದ್ದಕ್ಕೆ, ಇದೇ ಕಾರಣಕ್ಕೆ ಇಂದು ಸೂರ್ಯೋದಯ ಲೇಟ್ ಆಗಿರುವುದು ಎಂದು ಬಿಡದಿ ಪೀಠದ ನಿತ್ಯಾನಂದ ಸ್ವಾಮೀಜಿ ಹೇಳಿದ್ದಾರೆ.
ನಿತ್ಯಾನಂದ ಪ್ರವಚನದ ಈ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ. ಕಾರಣಾಂತರದಿಂದ ನಾನಿಂದು ಧ್ವಜಾರೋಹಣ ಮಾಡುವುದು ತಡವಾಯಿತು. ನಲವತ್ತು ನಿಮಿಷದ ನಂತರ ಉದಯವಾಗಬೇಕೆಂದು ಆದೇಶ ಕೊಟ್ಟಿದ್ದೆ, ಅದಕ್ಕೆ 6.20ರ ಬದಲು 7.0 ಗಂಟೆಗೆ ಸೂರ್ಯೋದಯವಾಯಿತು.
ನೀವು ಬೇಕಿದ್ದರೆ ಗೂಗಲ್ ನಲ್ಲಿ ಬಿಡದಿ ಸನ್ ರೈಸ್ ಎಂದು ಟೈಪ್ ಮಾಡಿ ನೋಡಿ, ನಿಜ ನಿಮಗೇ ಗೊತ್ತಾಗುತ್ತದೆ. ಮೋಡ ಕವಿದಿದ್ದರಿಂದ ಸೂರ್ಯೋದಯ ತಡವಾಗಿದ್ದಲ್ಲ, ನಾನು ಹೇಳಿರುವುದಕ್ಕೆ ಲೇಟ್ ಆಗಿದ್ದು ಎಂದು ತನ್ನ ಭಕಾಗ್ರೇಸರ ಮುಂದೆ ಹೇಳಿದ್ದಾರೆ. ನಿತ್ಯಾನಂದನ ಈ ಹೇಳಿಕೆಗೆ ವ್ಯಾಪಕ ಕರತಾಡನ ವ್ಯಕ್ತವಾಗಿದ್ದು ದುರಂತವೋ ಇನ್ನೊಂದೋ ಗೊತ್ತಿಲ್ಲ.

ನಾನು ಧ್ವಜಾರೋಹಣ ಮುಗಿಸಿ ಬಂದ ಮೇಲೆ, ಸೂರ್ಯ ಪೂರ್ವದಲ್ಲಿ ಉದಯಿಸಿದ. ಧ್ವಜಾರೋಹಣದಿಂದ ನನ್ನ ದಿನ ಆರಂಭವಾಗುತ್ತದೆ. ಇಂದು ಅದು ಮುಗಿಸುವುದು ಲೇಟ್ ಆಯಿತು. ನನ್ನ ಧ್ವಜಾರೋಹಣ ಮುಗಿಯುವವರೆಗೆ ಹೊರಗೆ ಬರಬಾರದು ಎಂದು ಸೂರ್ಯನಿಗೆ ಹೇಳಿದೆ, ಅದರಂತೆಯೇ ಆಯ್ತು ಎಂದು ನಿತ್ಯಾನಂದ ಸ್ವಾಮಿ ಹೇಳಿದ್ದಾರೆ.
ಹಸು ಬಾಯಿಯಿಂದ ತಮಿಳು ಮತ್ತು ಸಂಸ್ಕೃತ ಮಾತನಾಡಿಸುತ್ತೇನೆ, ಪ್ರಾಣಿಗಳ ಅತಿಂದ್ರೀಯ ಶಕ್ತಿಗಳನ್ನು ಪ್ರಗತಿಗೊಳಿಸುವ ಮೂಲಕ, ವೈಜ್ಞಾನಿಕವಾಗಿ ಇದನ್ನು ರುಜುವಾತು ಪಡಿಸುತ್ತೇನೆ, ಇದನ್ನು ಒಂದು ದಿನದ ಹಿಂದೆ ಪರೀಕ್ಷೆ ಮಾಡಲಾಗಿದ್ದು, ಇದು ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ನಿತ್ಯಾನಂದ ಹೇಳಿಕೊಂಡಿದ್ದರು.
ಇದಕ್ಕೆ ಸಂಬಂಧಪಟ್ಟ ಸಾಫ್ಟ್ ವೇರ್ ಅನ್ನು ಪ್ರಾಯೋಗಿಕವಾಗಿ ಪರೀಕ್ಷೆ ಮಾಡಲಾಗಿದ್ದು, ಸರಿಯಾದ ದಾರಿಯಲ್ಲಿ ಸಾಗುತ್ತಿದೆ. ನಾನು ಹೇಳಿದ್ದು ರೆಕಾರ್ಡ್ ಆಗಲಿ, ಇನ್ನೊಂದು ವರ್ಷದಲ್ಲಿ ಜಗತ್ತಿಗೆ ಸಾಫ್ಟ್ ವೇರ್ ಅನ್ನು ಪರಿಚಯಿಸುತ್ತೇನೆ ಎಂದು ಭಕ್ತರ ಸಮ್ಮುಖದಲ್ಲಿ ನಿತ್ಯಾನಂದ ಸ್ವಾಮಿ ಘೋಷಿಸಿದ್ದರು.
ಕೊನೇಮಾತು: ಇಸ್ರೋ ಅಥವಾ ನಾಸಾ ವಿಜ್ಞಾನಿಗಳು ಬೇಕಾದರೆ ನನ್ನನ್ನು ಸಂಪರ್ಕಿಸಿ, ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಲಬಹುದು ಎಂದು ನಿತ್ಯಾನಂದ ಸ್ವಾಮೀ ಹೇಳದೇ ಇರುವುದರಿಂದ, ವಿಜ್ಞಾನಿಗಳು ಸದ್ಯಕ್ಕೆ ಬಚಾವ್!!












Click it and Unblock the Notifications