ಬೆಂಗಳೂರಿನಲ್ಲಿ 'ಅನಂತ್ ಕುಮಾರ್ ಗ್ರಂಥಾಲಯ' ಲೋಕಾರ್ಪಣೆ
ಬೆಂಗಳೂರು, ಜನವರಿ 2: ಹೊಸ ವರ್ಷದ ಆರಂಭದಲ್ಲಿರುವ ನಮಗೆ ಈ ವರ್ಷ ಪರಿಸರಸ್ನೇಹಿ ಪರ್ಯಾಯ ವಸ್ತುಗಳ ಬಳಕೆ'ಯ ಸಂಕಲ್ಪವಾಗಲಿ ಎಂದು ಅದಮ್ಯ ಚೇತನದ ಅಧ್ಯಕ್ಷೆ ತೇಜಸ್ವಿನಿ ಅನಂತ್ ಕುಮಾರ್ ಕರೆ ನೀಡಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಶಾರದಾ ಸ್ತ್ರೀಸಮಾಜದಲ್ಲಿ ಗುರುವಾರ ಅನಂತ ಕುಮಾರ್ ಗ್ರಂಥಾಲಯ'ವನ್ನು ಉದ್ಘಾಟಿಸಿ ಮಾತನಾಡಿದ ತೇಜಸ್ವಿನಿ ಅನಂತ್ ಕುಮಾರ್ ಅವರು, 'ರಾಜ್ಯದಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಲಾಗಿದೆ. ನಾವು ಪ್ಲಾಸ್ಟಿಕ್ ಬಳಕೆಯನ್ನು ಕೈಬಿಡಬೇಕಿದೆ. ಬಳಸಿದ ಪ್ಲಾಸ್ಟಿಕ್ ಅಥವಾ ಪ್ಲಾಸ್ಟಿಕ್ ಕವರಿನ ಒಂದು ಸಣ್ಣ ಚೂರು ಸಹ ಪರಿಸರಕ್ಕೆ ಹಾನಿಯನ್ನುಂಟು ಮಾಡುತ್ತದೆ' ಎಂದರು.
ಪರ್ಯಾಯ ವಸ್ತುಗಳ ಬಳಕೆ
'ಈ ಸಣ್ಣ ಪ್ಲಾಸ್ಟಿಕ್ ಚೂರನ್ನು ದನಕರುಗಳು ತಿಂದು ಅನಾರೋಗ್ಯಕ್ಕೆ ತುತ್ತಾಗುತ್ತವೆ ಅಥವಾ ಪ್ರಾಣವನ್ನೂ ಕಳೆದುಕೊಳ್ಳುತ್ತವೆ. ಇದಲ್ಲದೇ ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗದಿರುವುದರಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡುತ್ತದೆ. ಆದ್ದರಿಂದ ಪ್ಲಾಸ್ಟಿಕ್ ಅನ್ನು ಪುನರ್ ಬಳಕೆಗೆ ನೀಡಬೇಕು. ಅಲ್ಲದೇ, ಹೊಸ ವರ್ಷದ ಆರಂಭದಲ್ಲಿರುವ ನಾವೆಲ್ಲರೂ ಪ್ಲಾಸ್ಟಿಕ್ ಬದಲು ಪರಿಸರಸ್ನೇಹಿ ಪರ್ಯಾಯ ವಸ್ತುಗಳ ಬಳಕೆ ಮಾಡುವ ಸಂಕಲ್ಪವನ್ನು ಮಾಡಬೇಕೆಂದು' ಕರೆ ನೀಡಿದರು.
ಯುರೋಪಿಯನ್ ತಂಡಕ್ಕೆ ಅದಮ್ಯ ಚೇತನ ಪರಿಚಯಿಸಿದ ತೇಜಸ್ವಿನಿ ಅನಂತ್
ಅನಂತಕುಮಾರ್ ಅವರು ರಾಜಕಾರಣಿಯಾಗದಿದ್ದಿದ್ದರೆ ಸಾಹಿತಿಯಾಗುತ್ತಿದ್ದರು
'ಅನಂತಕುಮಾರ್ ಅವರು ಎಲ್ಲಿಗೇ ಪ್ರಯಾಣ ಮಾಡಲಿ, ಎರಡೆರಡು ಪುಸ್ತಕಗಳನ್ನು ತಮ್ಮೊಂದಿಗೆ ಕೊಂಡೊಯ್ಯುತ್ತಿದ್ದರು. ಹೋಗುವಾಗ ಒಂದು, ವಾಪಸ್ ಬರುವಾಗ ಮತ್ತೊಂದು ಪುಸ್ತಕವನ್ನು ಓದಿ ಮುಗಿಸುತ್ತಿದ್ದರು. ಈ ಮೂಲಕ ಅವರಲ್ಲಿ ಸಾಕಷ್ಟು ಸಾಹಿತ್ಯದ ಬಗ್ಗೆ ಒಲವಿತ್ತು ಎಂದು ಹೇಳಿದ ತೇಜಸ್ವಿನಿ ಅವರು, ಒಂದು ವೇಳೆ ಅನಂತಕುಮಾರ್ ಅವರು ರಾಜಕಾರಣಿಯಾಗದಿದ್ದಿದ್ದರೆ ಸಾಹಿತಿಯಾಗುತ್ತಿದ್ದರು' ಎಂದು ಹೇಳಿದರು.
ಶಾರದಾ ಸ್ತ್ರೀ ಸಮಾಜ
ಶಾರದಾ ಸ್ತ್ರೀ ಸಮಾಜ ಅನಂತಕುಮಾರ್ ಅವರ ಹೆಸರಿನಲ್ಲಿ ಗ್ರಂಥಾಲಯ ಆರಂಭಿಸಿರುವುದು ಸಂತಸ ತಂದಿದೆ. ಮಕ್ಕಳು ಈಗಿನಿಂದಲೇ ಪುಸ್ತಕಗಳನ್ನು ಓದುವ ಗೀಳನ್ನು ಬೆಳೆಸಿಕೊಳ್ಳಬೇಕು. ಮಕ್ಕಳು ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಬೇಕು. ಇಲ್ಲವಾದರೆ, ಕೂಪಮಂಡೂಕಗಳಾಗಬೇಕಾಗುತ್ತದೆ. ಆದ್ದರಿಂದ ಹೊಸ ಹೊಸ ವಿಚಾರಧಾರೆಗಳ ಬಗ್ಗೆ ಚಿಂತನೆ ನಡೆಸಬೇಕು ಮತ್ತು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕೇಂದ್ರ ಹಾಗೂ ರಾಜ್ಯದ ಸಂಪರ್ಕ ಕೊಂಡಿಯಂತಿದ್ದ 'ಅನಂತಕುಮಾರ್' ಪ್ರಥಮ ಪುಣ್ಯಸ್ಮರಣೆ
ಕಾರ್ಯಕ್ರಮದಲ್ಲಿ ಇದ್ದವರು
ಚಾಮರಾಜಪೇಟೆಯಲ್ಲಿ ಶಾರದಾ ಸ್ಟ್ರೀ ಸಮಾಜದಲ್ಲಿ ಈ ಗ್ರಂಥಾಲಯ ತಲೆ ಎತ್ತಿದೆ. ಕಾರ್ಯಕ್ರಮದಲ್ಲಿ ಶಾರದಾ ಸ್ತ್ರೀ ಸಮಾಜ ಟ್ರಸ್ಟ್ ನ ಅಧ್ಯಕ್ಷೆ ಶಾರದಾ ಉಮೇಶ್ ರುದ್ರ, ಶಾರದಾ ಸ್ತ್ರೀ ಸಮಾಜದ ಅಧ್ಯಕ್ಷೆ ಶಾಂತ ವಿ ಗೌಡ್, ಗೌರವ ಕಾರ್ಯದರ್ಶಿ ಮಂಜುಳಾ ಪ್ರಸಾದ್ ಮತ್ತು ಸಂಚಾಲಕರಾದ ಸಿ.ಯು.ಉಮಾದೇವಿ ಅವರು ಈ ಸಂದರ್ಭದಲ್ಲಿದ್ದರು.