ಗಣೇಶ ಹಬ್ಬ ಸನಿಹ: ಆಚರಣೆ ಬಗ್ಗೆ ಬಿಬಿಎಂಪಿ ಸಷ್ಟತೆ ನೀಡಲಿ, ಉತ್ಸವ ಸಮಿತಿಗಳ ನಡೆ ಏನು?
ಬೆಂಗಳೂರು, ಆಗಸ್ಟ್ 19: ಕೊರೊನಾವೈರಸ್ ಪಿಡುಗು ಹಾಗೂ ಸರ್ಕಾರದ ನಿರ್ಬಂಧಗಳಿಂದ ಕಳೆದ ಎರಡು ವರ್ಷ ಗಣೇಶೋತ್ಸವದ ಆಚರಣೆ ಅತ್ಯಂತ ಸರಳವಾಗಿ ನಡೆದಿತ್ತು. ಇದರಿಂದ ವ್ಯಾಪಾರಿಗಳು, ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಸಾಕಷ್ಟು ತೊಂದರೆ ಅನುಭವಿಸಿದ್ದರು. ಈ ವರ್ಷ ವಿಜೃಂಭಣೆಯಿಂದ ಗಣೇಶೋತ್ಸವ ನಡೆಸಲು ತೀರ್ಮಾನಿಸಲಾಗಿದೆ. ಆದರೆ ಬಿಬಿಎಂಪಿ ಮಾತ್ರ ಆಚರಣೆ ಕುರಿತಂತೆ ಅಧಿಕೃತ ಮಾರ್ಗಸೂಚಿಯನ್ನೇ ನೀಡಿಲ್ಲ.
ಪರಿಸರ ಮಾಲಿನ್ಯ, ಪ್ರತಿ ವರ್ಷ ಹೊಸ ನಿಯಮ, ಮಾರ್ಗಸೂಚಿ, ಕೊನೆ ಕ್ಷಣದಲ್ಲಿನ ಸರ್ಕಾರದ ಆದೇಶ, ಎತ್ತರ ಮತ್ತು ಬಣ್ಣದ ಮಿತಿ ನಿರ್ಬಂಧದಿಂದ ಬೆಂಗಳೂರಿನಲ್ಲಿ ಗಣೇಶ ಮೂರ್ತಿ ತಯಾರಕರು ಆರ್ಥಿಕ ಸಮಸ್ಯೆ ಅನುಭವಿಸಿದ್ದರು. ಇದು ಸಾರ್ವಜನಿಕ ಗಣೇಶ ಆಚರಣೆಗೂ ಭಾರಿ ಪೆಟ್ಟು ನೀಡಿತ್ತು.
ಬೆಂಗಳೂರಿನಲ್ಲಿ ಗಣೇಶೋತ್ಸವಕ್ಕೆ ಮುಕ್ತ ಅವಕಾಶ ನೀಡಿ: ಸರ್ಕಾರಕ್ಕೆ ಮನವಿ
ಈ ವರ್ಷ ಕೊರೊನಾವೈರಸ್ ಬಹುತೇಕ ಇಳಿಕೆಯಾಗಿದ್ದು, ವಿಜೃಂಭಣೆಯ ಗಣೇಶೋತ್ಸವ ಆಚರಣೆಗೆ ಉತ್ಸವ ಸಮಿತಿಗಳು, ಯುವ ಮಂಡಳಿ, ವಾರ್ಡನ್ ಸಂಘ ಸಂಸ್ಥೆಗಳು ಈಗಾಗಲೇ ಸಿದ್ಧತೆ ಆರಂಭಿಸಿವೆ. ಆದರೆ ಸರ್ಕಾರ ಕೊನೆ ಕ್ಷಣದಲ್ಲಿ ಯಾವ ನಿರ್ಧಾರ ಕೈಗೊಳ್ಳುತ್ತದೋ? ಎಂಬುದರ ಬಗ್ಗೆ ಮೂರ್ತಿ ತಯಾರಕರು, ಉತ್ಸವ ಮಂಡಳಿಗಳಲ್ಲಿ ತುಸು ಗೊಂದಲ ಉಂಟಾಗಿದೆ.
ಹಬ್ಬಕ್ಕೆ 11 ದಿನ ಬಾಕಿ: ಅಧಿಕಾರಿ ನಿರ್ಲಕ್ಷ್ಯ
ಗಣೇಶ ಹಬ್ಬಕ್ಕೆ ಕೇವಲ 11 ದಿನ ಬಾಕಿ ಇದೆ. ಇಷ್ಟರಲ್ಲಾಗಲೇ ಗಣೇಶೋತ್ಸವ ಬಗ್ಗೆ ಬಿಬಿಎಂಪಿ ಈಗಾಗಲೇ ಸ್ಪಷ್ಟ ಮಾರ್ಗಸೂಚಿ ನೀಡಬೇಕಿತ್ತು. ಆದರೆ ಪ್ರತಿ ವರ್ಷದಂತೆ ಈ ವರ್ಷ ಅಧಿಕಾರಿಗಳು, ಜನಪ್ರತಿನಿಧಿಗಳು ತಲೆ ಕೆಡಿಸಿಕೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ. ಕಂದಾಯ ಸಚಿವರು ಕೋವಿಡ್ ಪೂರ್ವ ನಿಯಮಗಳೇ ಅನ್ವಯವಾಗುತ್ತದೆ ಎಂದಿದ್ದಾರೆ. ಆದರೆ ಈ ಬಗ್ಗೆ ಆದೇಶ ಹೊರ ಬಿದ್ದಿಲ್ಲ. ಇನ್ನೂ ನಗರದಲ್ಲಿ ವಾರ್ಡಿಗೆ ಒಂದು ಗಣೇಶ ಮೂರ್ತಿಗೆ ಅವಕಾಶ ಎಂದು ಕಳೆದ ವರ್ಷ ಆದೇಶ ನೀಡಿದ್ದ ಬಿಬಿಎಂಪಿ ಈ ವರ್ಷ ಅದರ ಬಗ್ಗೆ ಸ್ಪಷ್ಟತೆ ನೀಡಿಲ್ಲ ಎಂದು ಗಣೇಶ ವ್ಯಾಪಾರಿಗಳು ದೂರಿದರು.
ಬೆಂಗಳೂರಲ್ಲಿ 24ಕಡೆ ಗಣೇಶನ ಬೃಹತ್ ಮೆರವಣಿಗೆ
ಈ ವರ್ಷ ಕೊರೋನಾ ಸಂಪೂರ್ಣ ಕಡಿಮೆ ಆಗಿದ್ದು, ಸಂಭ್ರಮ ಗಣೇಶೋತ್ಸವಕ್ಕೆ ಉತ್ಸವ ಮಂಡಳಿ, ಸಮಿತಿಗಳು, ಸಂಘ ಸಂಸ್ಥೆಗಳು ಕಾಯುತ್ತಿವೆ. ಅದೇ ನಿಟ್ಟಿನಲ್ಲಿ ಈ ಭಾರಿ ಅದ್ಧೂರಿ ಗಣೇಶ ಹಬ್ಬದ ಆಚರಣೆಗೆ, ಸಾರ್ವಜನಿಕ ಪ್ರತಿಷ್ಠಾಪನೆ, ವಿಸರ್ಜನೆ, ಬೃಹತ್ ಮೆರವಣಿಗೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಬೆಂಗಳೂರಲ್ಲಿ ವಿವಿಧೆಡೆ ಸೇರಿ ಒಟ್ಟು 24 ಕಡೆಗಳಲ್ಲಿ ಸಾಮೂಹಿಕವಾಗಿ ಮೆರವಣಿಗೆ ನಡೆಸಲು ತೀರ್ಮಾನಿಸಲಾಗಿದೆ. ಈ ವೇಳೆ ಪಾಲಿಕೆ ವ್ಯಾಪ್ತಿಯ ಸಾವಿರಾರು ಸಾರ್ವಜನಿಕ ಗಣೇಶ ಮೂರ್ತಿಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಆಚರಣೆಗೆ ಮುಕ್ತ ಅವಕಾಶ ನೀಡಿ ಎಂದು ಸರ್ಕಾರಕ್ಕೆ ಕೇಳಲಾಗಿದೆ. ಹೀಗಿದ್ದರೂ ಸರ್ಕಾರ ಇದೂವರೆಗೂ ಮಾರ್ಗಸೂಚಿ ಹೊರಡಿಸಿಲ್ಲ. ಮುಂದೆ ಮಾರ್ಗಸೂಚಿ ಹೊರಡಿಸಿದರೆ ಕೆಲವು ಬದಲಾವಣೆಗಳು ಆಗಬಹುದೇ ವಿನಃ, ಅದ್ಧೂರಿ ಗಣೇಶೋತ್ಸವದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ರಾಜು ಅವರು ತಿಳಿಸಿದರು.
ಬೆಂಗಳೂರಿನಲ್ಲಿ ಗಣೇಶನಿಗೆ ಭಾರಿ ಬೇಡಿಕೆ
ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ವ್ಯಾಪ್ತಿಯಡಿ ಸುಮಾರು 1,200 ಸಾರ್ವಜನಿಕ ಉತ್ಸವ ಸಮಿತಿಗಳು ಬರುತ್ತವೆ. ಒಂದು ದಿನ ಗಣೇಶ ಕೂರಿಸುವ ಸಮಿತಿಗಳು ಹತ್ತು ಸಾವಿರಕ್ಕೂ ಹೆಚ್ಚಿವೆ. ಈ ವರ್ಷ ಮನೆಗಳಲ್ಲಿ ಕೂರಿಸುವ ಗಣೇಶ ಮೂರ್ತಿಗಳಿಗೆ ಸಮಸ್ಯೆ ಆಗುವುದಿಲ್ಲ, ಬದಲಾಗಿ ಸಾರ್ವಜನಿಕ ಆಚರಣೆಗೆ ತೊಂದರೆ ಆಗಲಿದೆ.
ವಿಜೃಂಭಣೆಯ ಆಚರಣೆ ಹಿನ್ನೆಲೆ ಬೆಂಗಳೂರಿನಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳಿಗೆ ಹೆಚ್ಚು ಬೇಡಿಕೆ ಇದೆ. ಅವುಗಳನ್ನು ಪೂರೈಸಬೇಕಾದರೆ ಹೆಚ್ಚು ಮೂರ್ತಿ ನಿರ್ಮಿಸಿರಬೇಕು. ಇಲ್ಲವೇ ಮುಂಬೈ, ಮಹಾರಾಷ್ಟ್ರ, ಸೊಲ್ಲಾಪುರ ಭಾಗದಿಂದ ತರಿಸಿ ಕೊಡಬೇಕು. ಆದರೆ ಸರ್ಕಾರ ಆಚರಣೆ ಬಗ್ಗೆ ಯಾವಾಗ ಏನು ಆದೇಶ ಹೊರಡಿಸುತ್ತದೆಯೋ ಎಂಬುದು ಗೊತ್ತಿಲ್ಲ. ಹೀಗಾಗಿ ಹೆಚ್ಚು ಮೂರ್ತಿ ತಯಾರಿಸಲು, ಆಮದು ಮಾಡಿಕೊಳ್ಳಲು ವ್ಯಾಪಾರಿಗಳು ಮನಸ್ಸು ಮಾಡಿಲ್ಲ ಎಂದು ಪ್ರಕಾಶ್ ರಾಜು ಮಾಹಿತಿ ನೀಡಿದರು.
ಸಾರ್ವಜನಿಕ ಗಣೇಶ ಮೂರ್ತಿ ಬುಕ್ಕಿಂಗ್ ಏರಿಕೆ
ಕಳೆದ 15 ದಿನಗಳಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಬೇಡಿಕೆ ಹೆಚ್ಚಾಗಿದೆ. ಮೈಸೂರು, ಮದ್ದೂರು, ಮಂಡ್ಯ, ಬೆಂಗಳೂರು ಹಾಗೂ ಸುತ್ತಮುತ್ತಲಿನವರು ಗಣೇಶ ಮೂರ್ತಿ ಕಾಯ್ದಿರಿಸಿದ್ದಾರೆ. ಈಗಾಗಲೇ ಅರ್ಧದಷ್ಟು ಅಂದರೆ ಸುಮಾರು 400-500 ಮೂರ್ತಿಗಳು ಬುಕ್ ಆಗಿವೆ. ಒಂದೇ ವೇಳೆ ಅಧಿಕ ಮೂರ್ತಿಗೆ ಬೇಡಿಕೆ ಬಂದರೆ ಪೂರೈಕೆ ಮಾಡುವುದು ಕಷ್ಟವಾಗಲಿದೆ ಎಂದು ಮಾವಳ್ಳಿ ಗಣೇಶ ಮೂರ್ತಿ ತಯಾರಕ ಶ್ರೀನಿವಾಸ್ ತಿಳಿಸಿದರು.
ಪರಿಸರ ಕಾಳಜಿ: ವಿಸರ್ಜನೆಗೆ ನೀರಿನ ತೊಟ್ಟಿ ನಿರ್ಮಾಣ
ಮಾವಳ್ಳಿಯಲ್ಲಿ ವಿಸರ್ಜನೆಗೆಂದು ಎರಡು ತಾತ್ಕಾಲಿಕ ಬೃಹತ್ ನೀರಿನ ತೊಟ್ಟಿ (ಹೊಂಡ) ನಿರ್ಮಿಸಿದ್ದೇವೆ. ಅಲ್ಲದೇ ಕಳೆದ ವರ್ಷದ ಪಿಒಪಿ ಗಣೇಶ ಮೂರ್ತಿಗಳನ್ನು ಈ ಬಾರಿ ಬಣ್ಣ ಬದಲಿಸಿ ಸಾರ್ವಜನಿಕ ಪ್ರತಿಷ್ಠಾಪನೆಗೆ ನೀಡಲಾಗುತ್ತಿದೆ. ಉತ್ಸವ ಮುಗಿದ ಮೇಲೆ ಪುನಃ ನೀಡಿದರೆ ಉಗ್ರಾಣದಲ್ಲಿಟ್ಟು ಮುಂದಿನ ವರ್ಷ ನೀಡಲು ತೀರ್ಮಾನಿಸಿದ್ದು, ಇದಕ್ಕೆ ಸಾರ್ವಜನಿಕ ಉತ್ಸವ ಸಮಿತಿ, ಸಂಘ ಸಂಸ್ಥೆಗಳು ಒಪ್ಪಿಗೆ ನೀಡಿವೆ ಈ ಮೂಲಕ ಪರಿಸರ ಮಾಲಿನ್ಯ ಆಗುವುದನ್ನು ತಪ್ಪಿಸಲಿದ್ದೇವೆ. ಹೊಂಡದಲ್ಲಿ ವಿಸರ್ಜನೆಗೊಂಡ ಗಣೇಶ ಮೂರ್ತಿಗಳ ಮಣ್ಣನ್ನು ಪುನಃ ಬಳಕೆ ಮಾಡಲಿದ್ದೇವೆ ಎಂದು ಶ್ರೀನಿವಾಸ್ ತಿಳಿಸಿದರು.
ಹೊಸದಾಗಿ ಮೂರ್ತಿ ತಯಾರಿಸಿಲ್ಲ
ಪರಿಸರ ಮಾಲಿನ್ಯ, ಸರ್ಕಾರದ ನಿರ್ಬಂಧ ಇನ್ನಿತರ ಕಾರಣದಿಂದ ಈ ವರ್ಷ ಹೊಸದಾಗಿ ಮೂರ್ತಿ ತಯಾರಿಸಿಲ್ಲ. ಕಳೆದ ವರ್ಷದ ಮಾರಾಟವಾಗದ ಗಣೇಶ ಮೂರ್ತಿಗಳನ್ನೇ ಪುನಃ ಬಣ್ಣ ಹಚ್ಚಿ, ಜೋಡಿಸಿ ಸಿದ್ಧಪಡಿಸಲಾಗಿದೆ. ಇದರಲ್ಲಿ ಸಣ್ಣ ಸಣ್ಣ ಮಣ್ಣಿನ ಮೂರ್ತಿಗಳೇ ಹೆಚ್ಚಿವೆ. ಗಣೇಶ ಮೂರ್ತಿ ಹೊಸದಾಗಿ ತಯಾರಿಸಬಹುದಿತ್ತು. ಆದರೆ ಬಿಬಿಎಂಪಿ ಕಠಿಣ ನಿರ್ಬಂಧ ವಿಧಿಸಿದರೆ ಮತ್ತಷ್ಟು ಸಂಕಷ್ಟ ಅನುಭವಿಸುವ ಸಾಧ್ಯೆತೆ ಇದೆ ಎಂಬ ಭಯಕ್ಕೆ ತಯಾರಿಸಿಲ್ಲ ಎಂದು ನಗರದ ವ್ಯಾಪಾರಿಗಳು ಅಸಮಾಧಾನ ಹೊರ ಹಾಕಿದರು.
Recommended Video