ಬಿಬಿಎಂಪಿ ವಿಭಜನೆ ವರ್ಷದೊಳಗೆ ಗ್ಯಾರಂಟಿ: ಸಿದ್ದರಾಮಯ್ಯ
ಬೆಂಗಳೂರು, ಅಕ್ಟೋಬರ್ 9: ಅದ್ಯಾವುದೇ ವಿರೋಧ ಬಂದರೂ ಬಿಬಿಎಂಪಿ ವಿಭಜನೆ ಮಾಡೇ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಹೇಳಿದ್ದಾರೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕೈಗೊಳ್ಳಲಿರುವ ವಿವಿಧ ಅಭಿವೃದ್ಧಿ ಶಂಕುಸ್ಥಾಪನೆ ನೆರವೇರಿಸಿದ ನಂತರ ಅವರು ಮಾತನಾಡಿದರು.
ಬಿಬಿಎಂಪಿ ವಿಭಜನೆ ಮಾಡುವುದಕ್ಕೆ ವಿರೋಧ ವ್ಯಕ್ತವಾಗಿದ್ದರಿಂದ ಸ್ವಲ್ಪ ಸಮಯ ಸುಮ್ಮನಿದ್ದೆ. ಆದರೆ ಇನ್ನು ಒಂದು ವರ್ಷದಲ್ಲಿ ವಿಭಜನೆ ಮಾಡೇ ಮಾಡುತ್ತೇವೆ. ನಗರದಲ್ಲಿ ಒಂದು ಕೋಟಿಗೂ ಹೆಚ್ಚು ಜನರಿದ್ದಾರೆ. ಒಬ್ಬ ಮೇಯರ್ , ಆಯುಕ್ತರಿಂದ ಎಲ್ಲ ಮುಖ್ಯ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ ಎಂದು ಹೇಳಿದರು.[ರಾಜಕಾಲುವೆ ಒತ್ತುವರಿ ತೆರವು ಎಂಬ ನಿಗೂಢ ರಹಸ್ಯ!]

ಆದ್ದರಿಂದ ಬಿಬಿಎಂಪಿಯನ್ನು ಮೂರು ಅಥವಾ ನಾಲ್ಕು ಭಾಗಗಳಾಗಿ ವಿಭಾಗಿಸಲಾಗುವುದು. ಈ ಹಿಂದಿನ ಸರ್ಕಾರ ಇದ್ದಾಗ ಬಿಬಿಎಂಪಿಯಲ್ಲಿ ಶಿಸ್ತಿರಲಿಲ್ಲ. ಹುಚ್ಚನ ಮದುವೇಲಿ ಉಂಡೋನೆ ಜಾಣ ಎಂಬಂತಾಗಿತ್ತು. ಬಿಬಿಎಂಪಿ ಆಸ್ತಿಗಳನ್ನೂ ಅಡ ಇಡಲಾಗಿತ್ತು. ಕಸದ ಸಮಸ್ಯೆ ಎದುರಾಗಿತ್ತು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಅಭಿವೃದ್ಧಿ ಕಾರ್ಯಕ್ಕೆ ವೇಗ ಸಿಕ್ಕಿದೆ ಎಂದು ತಿಳಿಸಿದರು.
'ನಮಗೆ ಕುಡಿಯಲು 24 ಟಿಎಂಸಿ ಅಡಿ ನೀರು ಬೇಕು. ಅಷ್ಟನ್ನು ಸಂಗ್ರಹಿಸಿಕೊಂಡ ನಂತರವೇ ತಮಿಳುನಾಡಿಗೆ ನೀರು ಬಿಡುವುದು. ಸುಪ್ರೀಂ ಕೋರ್ಟ್ ಆದೇಶ ಏನೇ ಆದರೂ ಕುಡಿಯುವ ನೀರಿಗೆ ಮೊದಲ ಆದ್ಯತೆ. ಹೆಚ್ಚಿದ್ದರೆ ಮಾತ್ರ ನೀರು ಬಿಡಲಾಗುತ್ತದೆ ಎಂದು ಅವರು ಹೇಳಿದರು.[ಕಟ್ಟಡ ನಿರ್ಮಾಣ: ಬಿಬಿಬಿಎಂಪಿಯಿಂದ ಹೊಸ ಸೂಚನೆಗಳು]
ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದರೆ ನಿರ್ದಾಕ್ಷಿಣ್ಯವಾಗಿ ತೆರವು ಮಾಡಿಸ್ತೀವಿ. ಬಡವರ ಮನೆಯೇನಾದರೂ ತೆರವಾಗಿದ್ದರೆ ಸರಕಾರದಿಂದ ಮನೆ ಕಟ್ಟಿಸ್ತೀವಿ. ಈ ವಿಚಾರದಲ್ಲಿ ಯಾವುದೇ ಪ್ರಭಾವಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.












Click it and Unblock the Notifications