ಬಿಬಿಎಂಪಿ ವಾರ್ಡ್ ಮರುವಿಂಗಡಣೆ; ವೆಬ್ಸೈಟ್ನಲ್ಲಿ ಸಿಗಲಿದೆ ಪೂರ್ಣ ಮಾಹಿತಿ
ಬೆಂಗಳೂರು, ಜೂನ್ 25: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾರ್ಡ್ಗಳ ಮರು ವಿಂಗಡಣೆಯ ಕಾರ್ಯ ಮುಗಿದು 243 ವಾರ್ಡ್ಗಳ ರಚನೆಯನ್ನು ಮಾಡಲಾಗಿದೆ. ಬಿಬಿಎಂಪಿಯಲ್ಲಿ ಮೊದಲು 198 ವಾರ್ಡ್ಳಿದ್ದವು 2011ರ ಜನಗಣತಿಯಂತೆ ಮರು ವಿಂಗಡಣೆಯ ಬಳಿಕ 243 ವಾರ್ಡ್ಗಳಿಗೆ ಹೆಚ್ಚಳ ಮಾಡಲಾಗಿದೆ.
ವಾರ್ಡ್ ನಕ್ಷೆ , ವೀಸ್ತೀರ್ಣ ಮತ್ತು ಮತದಾರರ ಸಂಖ್ಯೆ ಸೇರಿದಂತೆ ವಾರ್ಡ್ ಮರು ವಿಂಗಡಣೆ ಸಂಪೂರ್ಣ ವಿವರ ಆನ್ ಲೈನ್ನಲ್ಲಿ ದೊರೆಯುತ್ತಿದೆ. ಇದರ ಜೊತೆ ಪಾಲಿಕೆಯ ಎಂಟು ವಲಯಗಳಲ್ಲೂ ವಾರ್ಡ್ನ ವಿವರಗಳು ಲಭ್ಯವಾಗಲಿದ್ದೂ ಸಾರ್ವಜನಿಕರು ತಮ್ಮ ಆಕ್ಷೇಪಣೆಯನ್ನು ಸಲ್ಲಿಸಲು 15 ದಿನಗಳ ಕಾಲಾವಕಾಶವನ್ನು ಸಹ ಬಿಬಿಎಂಪಿ ನೀಡಿದೆ.
ಬಿಬಿಎಂಪಿ ವಾರ್ಡ್ ಮರು ವಿಂಗಡಣೆಯ ವರದಿಯ ಕರಡು ಪ್ರತಿಯನ್ನು ರಾಜ್ಯಪತ್ರದಲ್ಲಿ ಹೊರಡಿಸಲಾಗಿದೆ. ಈ ರಾಜ್ಯ ಪತ್ರದಲ್ಲಿ ಗಡಿ ಹಂಚಿಕೆಯನ್ನು ಮಾತ್ರ ನೀಡಲಾಗಿದೆ. ವಾರ್ಡ್ ನಕ್ಷೆ, ಮತದಾರರ ಸಂಖ್ಯೆ ವಿಸ್ತೀರ್ಣ, ವಾರ್ಡ್ ಹೆಸರು ಬದಲಾವಣೆ ಸೇರಿದಂತೆ ಇತರ ಅಂಶಗಳನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಇದರ ಜೊತೆ ಆಯಾ ಎಂಟು ವಲಯಗಳಲ್ಲಿ ವಿವರಣೆಗಳು ದೊರೆಯಲಿದೆ.
ಯಾವ ವೆಬ್ನಲ್ಲಿ ವಿವರಗಳಿವೆ
ವಾರ್ಡ್ ಮರುವಿಂಗಡಣೆಯ ಮುಗಿದು ರಾಜ್ಯಪತ್ರದ ಮುಖೇನ ಆದೇಶಿಸಲಾಗಿದೆ. ವಾರ್ಡ್, ವಾರ್ಡ್ ನಕ್ಷೆ, ಮತದಾರರ ಸಂಖ್ಯೆ ವಿಸ್ತೀರ್ಣ, ವಾರ್ಡ್ ಹೆಸರು ಬದಲಾವಣೆ ಕುರಿತಾದ ಮಾಹಿತಿ ವೆಬ್ಸೈಟ್ನಲ್ಲಿ ದೊರೆಯಲಿದೆ. ಕರ್ನಾಟಕ ಸರ್ಕಾರವು ಬಿಬಿಎಂಪಿಯ ವಾರ್ಡ್ಗಳನ್ನು 198 ರಿಂದ 243 ಕ್ಕೆ ಹೆಚ್ಚಿಸಲು ಪುನರ್ ವಿಂಗಡಣಾ ಸಮಿತಿಯನ್ನು ರಚಿಸಲಾಗಿತ್ತು. ಕರಡು ಅಧಿಸೂಚನೆಯ ಚಕ್ಕುಬಂಧಿ ಮಾಹಿತಿ ಮತ್ತು ನಕ್ಷೆಗಳನ್ನು ಸಾರ್ವಜನಿಕರ ಗಮನಕ್ಕಾಗಿ ಎಲ್ಲಾ ವಲಯ ಜಂಟಿ ಆಯುಕ್ತರುಗಳ ಕಛೇರಿಗಳಲ್ಲಿ ಪ್ರಕಟಿಸಲಾಗಿರುತ್ತದೆ ಹಾಗೂ http://bbmpdelimitation2022.com ವೆಬ್ಸೈಟ್ನಲ್ಲಿಯು ಸಹ ಪ್ರಕಟಿಸಲಾಗಿರುತ್ತದೆ.
ಖುದ್ದು ದಾಖಲೆ ಸಹಿತ ಆಕ್ಷೇಪಣೆಯನ್ನು ಸಲ್ಲಿಸಬೇಕು
ಸಾರ್ವಜನಿಕರು ಸದುಪಯೋಗವನ್ನು ಪಡೆದುಕೊಂಡು ಈ ಬಗ್ಗೆ ಯಾವುದೇ ಆಕ್ಷೇಪಣೆ/ ಸಲಹೆಗಳನ್ನು ಸಲ್ಲಿಸಲು ಇಚ್ಚಿಸುವ ವ್ಯಕ್ತಿಗಳು/ ಸಂಸ್ಥೆಗಳು ತಮ್ಮ ಪೂರ್ಣ ವಿಳಾಸ, ಸಹಿಯೊಂದಿಗೆ ಸೂಕ್ತ ಕಾರಣ/ ವಿವರಣೆಗಳೊಂದಿಗೆ ಲಿಖಿತ ರೂಪದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ 436, 4ನೇ ಮಹಡಿ ವಿಕಾಸ ಸೌಧ, ಬೆಂಗಳೂರು-560001 ಇವರಿಗೆ ಅಧಿಸೂಚನೆ ಪ್ರಕಟಗೊಂಡ ದಿನಾಂಕದಿಂದ 15 ದಿನಗಳೊಳಗಾಗಿ ಸಲ್ಲಿಸುವುದು. ನಿಗಧಿತ ಅವಧಿಯ ನಂತರ ಸ್ವೀಕೃತಗೊಂಡ ಆಕ್ಷೇಪಣೆ ಸಲಹೆಗಳನ್ನು ಪರಿಗಣಿಸಲಾಗುವುದಿಲ್ಲವೆಂದು ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ಇನ್ನು ಆನ್ ಲೈನ್ನಲ್ಲಿ ಯಾವುದೇ ಯಾವುದೇ ಆಕ್ಷೇಪಣೆಯನ್ನು ಸ್ವೀಕರಿಸುವುದಿಲ್ಲ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.
ಬೆಂಗಳೂರಿನಲ್ಲಿ 28 ವಿಧಾನಸಭಾ ಕ್ಷೇತ್ರ, 243 ವಾರ್ಡ್
ಬೆಂಗಳೂರಿನಲ್ಲಿ ಒಟ್ಟು 28 ವಿಧಾನ ಸಭಾ ಕ್ಷೇತ್ರಗಳಿವೆ. ಬಿಬಿಎಂಪಿ ವಾರ್ಡ್ ಮರು ವಿಂಗಡಣೆಯ ಬಳಿಕ ಆಯಾ ವಿಧಾನ ಸಭಾ ಕ್ಷೇತ್ರದ ಅಧಿನದಲ್ಲಿ ಎಲ್ಲಾ ವಾರ್ಡ್ಗಳು ಹಾಗೇ ಉಳಿದು ಕೊಂಡು ವಾರ್ಡ್ ಸಂಖ್ಯೆಯಲ್ಲಿ ಹೆಚ್ಚಳ ಕಡಿಮೆಯಾಗಿದೆ. ಆದರೆ ಎರಡು ವಾರ್ಡ್ಗಳು ಮಾತ್ರ ಬೇರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡಲಿದೆ. ವಿಧಾನಸಭೆಯ ಚುನಾವಣೆ ಮುಗಿಯುವವರೆಗೂ ಈಗಿರುವ ಕ್ಷೇತ್ರಗಳಲ್ಲೇ ಆ ವಾರ್ಡ್ಗಳು ಮುಂದುವರೆಯಲಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಕೇಶವ ಕೃಪದಲ್ಲಿ ಕುಳಿತು ಕಾರ್ಯ
""ಅವೈಜ್ಞಾನಿಕವಾಗಿ ವಾರ್ಡ್ಗಳನ್ನು ಮರುವಿಂಗಡಣೆಯನ್ನು ಮಾಡಲಾಗಿದೆ. ಕೆಲವು ಶಾಸಕರು ಸಂಸದರು, ಬಿಬಿಎಂಪಿ ಆಯುಕ್ತರು ಆರ್ಎಸ್ಎಸ್ ಕೇಶವಕೃಪದಲ್ಲಿ ಕುಳಿತು ವಾರ್ಡ್ ಮರುವಿಂಗಡಣೆಯನ್ನು ಮಾಡಿದ್ದಾರೆ. ಹಲವು ಲೋಪದೋಷಗಳು ವಾರ್ಡ್ ವಿಂಗಡಣೆಯ ವೇಳೆಯಲ್ಲಿ ಉಂಟಾಗಿದೆ. ಆಕ್ಷೇಪಣೆಯನ್ನು ಸಲ್ಲಿಸುತ್ತೇವೆ. ಅಗತ್ಯಬಿದ್ದರೆ ಕಾನೂನು ಹೋರಾಟವನ್ನು ನಡೆಸಲಿದ್ದೇವೆ'' ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ರಾಮಲಿಂಗ ರೆಡ್ಡಿ ಹೇಳಿದ್ದಾರೆ.