ಬಿಬಿಎಂಪಿ: ಶಿವಾನಂದ ಸ್ಟೀಲ್ ಬ್ರಿಡ್ಜ್ ಸಣ್ಣ ಪುಟ್ಟ ಕೆಲಸ ಬಾಕಿ ಮುಗಿದರೆ ಅ.1ಕ್ಕೆ ಸಂಚಾರ ಮುಕ್ತ?
ಬೆಂಗಳೂರು, ಸೆಪ್ಟಂಬರ್ 29: ನಗರದ ಶಿವಾನಂದ ವೃತ್ತದ ಉಕ್ಕಿನ ಮೇಲ್ಸೇತುವೆಯಲ್ಲಿ ಕೇಳಿ ಬಂದ ಸಂಚಾರ ದೋಷವನ್ನು ಶೇ.90ರಷ್ಟು ಪರಿಹರಿಸಲಾಗಿದೆ. ಆದರೆ ಶೇ.10ರಷ್ಟು ಕೆಲಸ ಬಾಕಿ ಇರುವ ಕಾರಣ ಅಕ್ಟೋಬರ್ 1 ರಿಂದ ಮೇಲ್ಸೇತುವೆ ಉದ್ಘಾಟನೆ ಆಗುವುದು ಅನುಮಾನ ಎನ್ನಲಾಗುತ್ತಿದೆ.
ನಗರದ ಹೃದಯ ಭಾಗದಲ್ಲಿರುವ ಶಿವಾನಂದ ಉಕ್ಕಿನ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಒಂದು ತಿಂಗಳಿಗೂ ಹೆಚ್ಚು ಕಾಲ ಆಗಿದೆ. ಕಾಮಗಾರಿ ಪೂರ್ಣಗೊಂಡ ನಂತರ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಮೇಲ್ಸೇತುವೆಯು ಕಳಪೆ ಕಾಮಗಾರಿಯಿಂದ ಕೂಡಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು.
ಮೇಲ್ಸೇತುವೆಯಲ್ಲಿ ಜಾಯಿಂಟ್ ಸಮಸ್ಯೆ, ಡಾಂಬರು ಉಬ್ಬುತಗ್ಗು ಸಮಸ್ಯೆ ಕಂಡು ಬಂದಿದ್ದು, ಸಂಚಾರಕ್ಕೆ ಯೋಗ್ಯವಲ್ಲ ಎಂದು ಆರೋಪಿಸಲಾಗಿತ್ತು. ಅಲ್ಲದೇ ಸಂಚಾರದ ವೇಳೆ ಮೇಲ್ಸೇತುವೆ ಕಂಪಿಸಿದ ಅನುಭವ ಬಗ್ಗೆಯೂ ಚಕಾರ ಎತ್ತಲಾಗಿತ್ತು. ಹೀಗಾಗಿ ಒಂದು ಬದಿಯಲ್ಲಿ ಮಾತ್ರ ಬಿಬಿಎಂಪಿ ಸಂಚಾರಕ್ಕೆ ಅವಕಾಶ ನೀಡಿಲಾಗಿದೆ. ಬಾಕಿ ಸಣ್ಣ ಪುಟ್ಟ ಕೆಲಸ ಮುಗಿದರೆ ಅಕ್ಟೋಬರ್ 1ರಿಂದ ಎರಡು ಬದಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಇಲ್ಲವಾದರೆ ಮತ್ತೆ ಕೆಲವು ದಿನ ಸಂಚಾರಕ್ಕೆ ಅವಕಾಶ ನೀಡುವುದು ತಡವಾಗಬಹದು.

10ರಷ್ಟು ಕೆಲಸ ಬಾಕಿ, ಶನಿವಾರ ಸಂಚಾರಕ್ಕೆ ಅವಕಾಶ?
ಇದೀಗ ರೇಸ್ಕೋರ್ಸ್ ರಸ್ತೆ ಕಡೆಯಿಂದ ಉಬ್ಬು ತಗ್ಗು ಸರಿಮಾಡಿಕೊಂಡು ಬಂದಿರುವ ಬಿಬಿಎಂಪಿ ಪುನಃ ಡಾಂಬರು ಹಾಕಿದೆ. ಜಾಯಿಂಟ್ ಸಮಸ್ಯೆ ಸೇರಿದಂತೆ ಒಟ್ಟು ಶೇ. 90ರಷ್ಟು ಕೆಲಸ ಪೂರ್ಣಗೊಳಿಸಿದೆ. ಶೇಷಾದ್ರಿಪುರಂ ರೈಲ್ವೆ ಬ್ರಿಡ್ಜ್ ಕಡೆಗಿನ ಮೇಲ್ಸೇತುವೆ ಭಾಗದಲ್ಲಿ ಶೇ. 10ರಷ್ಟು ಇನ್ನೂ ಕೆಲಸ ಬಾಕಿ ಇದೆ. ಈ ಬಾಕಿ ಕೆಲಸವನ್ನು ಶನಿವಾರದ ಒಳಗೆ ಪೂರ್ಣಗೊಳಿಸಲಾಗುವುದು. ಅಂದುಕೊಂಡಂತೆ ಕೆಲಸ ಮುಗಿದರೆ ಮುಂದಿನ ಶನಿವಾರ ಎರಡು ಬದಿಯಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ಬಿಬಿಎಂಪಿ ಯೋಜನಾ ವಿಭಾಗದ ಅಧಿಕಾರಿ ಲೋಕೇಶ್ ಅವರು ಮಾಹಿತಿ ನೀಡಿದ್ದಾರೆ.

ಪ್ರಾಯೋಗಿಕ ಸಂಚಾರದಲ್ಲಿ ಸಮಸ್ಯೆ ಆಗಿಲ್ಲ
ನಿತ್ಯ ಪ್ರತಿ ಹಂತದಲ್ಲಿ ಪರಿಶೀಲನೆ ನಡೆಯುತ್ತಲೇ ಇರುತ್ತದೆ. ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಸಂಸ್ಥೆ ಸಹ ಮೇಲ್ಸೇತುವೆಯನ್ನು ಪರಿಶೀಲಿಸಿದೆ. ಆ ಬಗ್ಗೆ ವರದಿ ಬರಬೇಕಿದೆ. ಬುಧವಾರ ಮೇಲ್ಸೇತುವೆಯಲ್ಲಿ ಎರಡು ಬದಿಯಲ್ಲಿ ವಾಹನಗಳಿಗೆ ಅವಕಾಶ ಮಾಡಿಕೊಡಲಾಗಿತ್ತು. ಇಡಿ ದಿನ ಸಾಕಷ್ಟು ವಾಹನಗಳು ಸಂಚರಿಸಿದ್ದು, ಯಾವುದೇ ಸಮಸ್ಯೆ ಆಗಿಲ್ಲ. ಗುರುವಾರ ಮತ್ತು ಶುಕ್ರವಾರ ಬಾಕಿ ಕೆಲಸ ಮುಗಿಸುವ ಗುರಿ ಹೊಂದಿದ್ದು, ಶನಿವಾರ ಎರಡು ಬದಿಗಳಲ್ಲಿ ಸಂಚಾರಕ್ಕೆ ಅವಕಾಶ ಕೊಡುವ ಈ ಭಾಗದಲ್ಲಿ ಬಹುವರ್ಷಗಳಿಂದ ಉಂಟಾಗುತ್ತಿದ್ದ ವಾಹನ ದಟ್ಟಣೆ ಅಂತ್ಯವಾಗಲಿದೆ ಎಂದು ಬಿಬಿಎಂಪಿ ವಿಶ್ವಾಸ ವ್ಯಕ್ತಪಡಿಸಿದೆ.

ಅದ್ಧೂರಿ ಉದ್ಘಾಟನೆ ಅನುಮಾನ
ಪ್ರಾಯೋಗಿಕ ಪರಿಶೀಲನೆಯಲ್ಲಿ ಸಂಸ್ಯೆ ಕಂಡು ಬಂದಿಲ್ಲ. ಮಳೆಯಿಂದಾಗಿ ಸಣ್ಣ ಪುಟ್ಟ ಲೋಪಗಳ ನಿವಾರಣೆಗೆ ವಿಳಂಬವಾಗಿದೆ. ಯಾವುದೇ ಮೇಲ್ಸೇತುವೆಗಳು ವಾಹನ ಸಂಚರಿಸುವಾಗ ಕಂಪನಿಸಿದ ಅನುಭವವಾಗುತ್ತದೆ. ಅದೊಂದು ಸಮಸ್ಯೆಯೆ ಅಲ್ಲ ಆ ಬಗ್ಗೆ ಸವಾರರು ಆತಂಕ ಪಡುವ ಅಗತ್ಯ ಇಲ್ಲ. ಅಲ್ಲದೇ ಮೇಲ್ಸೇತುವೆಯ ಉದ್ಘಾಟನೆಯ ಸಮಾರಂಭವನ್ನು ಅದ್ಧೂರಿಯಾಗಿ ಆಯೋಜಿಸಿಲ್ಲ. ಸರಳವಾಗಿ ಮತ್ತು ಅಧಿಕೃತವಾಗಿ ಚಾಲನೆ ನೀಡಲು ಬಿಬಿಎಂಪಿ ತೀರ್ಮಾನಿಸಿದೆ ಎಂದು ಲೋಕೇಶ್ ಅವರು ತಿಳಿಸಿದ್ದಾರೆ.

ಮೇಲ್ಸೇತುವೆ ಉದ್ಘಾಟನೆಗೆ ದಿನಗಣನೆ
236ಮೀಟರ್ ಉದ್ದದ ಶಿವಾನಂದ ವೃತ್ತದ ಉಕ್ಕಿನ ಮೇಲ್ಸೇತುವೆ ನಿರ್ಮಾಣ ಕಾಮಗಾರಿ 2017ರಲ್ಲಿ ಆರಂಭಗೊಂಡಾಗ ರೂ. 19.85ಕೋಟಿ ವೆಚ್ಚವಾಗಬಹುದು ಎಂದು ಸರ್ಕಾರ ಅಂದಾಜಿಸಿತ್ತು. ಕೊರೋನಾ ಹಾಗೂ ಇನ್ನಿತರ ಕಾರಣಗಳಿಂದಾಗಿ ಸುಮಾರು ಒಂದೂವರೆ ವರ್ಷದಲ್ಲಿ ನಿರ್ಮಾಣವಾಗಬೇಕಿದ್ದ ಕೆಲಸ ಐದು ವರ್ಷದ ಬಳಿಕ ಪೂರ್ಣಗೊಂಡಿದೆ. ಸಾಕಷ್ಟು ಗಡುವು ಪಡೆದು, ಆರೋಪಗಳನ್ನು ಎದುರಿಸಿರುವ ಮೇಲ್ಸೇತುವೆ ಅಂತಿಮವಾಗಿ ಒಟ್ಟು ಅಂದಾಜು 60ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಅದರ ಉದ್ಘಾಟನೆಗೆ ದಿನಗಣನೆ ಶುರುವಾಗಿದೆ.











Click it and Unblock the Notifications