ಅನಧಿಕೃತ ಜಾಹೀರಾತು ತೆರವು: ಹೈಕೋರ್ಟ್ಗೆ ಸಮಗ್ರ ವರದಿ ಸಲ್ಲಿಸಿದ ಬಿಬಿಎಂಪಿ
ಬೆಂಗಳೂರು, ಫೆಬ್ರವರಿ 21: ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತು ಫಲಕಗಳ ತೆರವಿಗೆ ಹಾಗೂ ಅಕ್ರಮವಾಗಿ ಜಾಹೀರಾತು ಅಳವಡಿಸಿದವರ ವಿರುದ್ಧ ಕೈಗೊಂಡಿರುವ ಕ್ರಮಗಳ ಕುರಿತು ಬಿಬಿಎಂಪಿ ಕೊನೆಗೂ ಹೈಕೋರ್ಟ್ಗೆ ಸಮಗ್ರ ವರದಿ ಸಲ್ಲಿಸಿದೆ.
ಹೈಕೋರ್ಟ್ ಕಳೆದ ಎರಡು ಸಲ ವರದಿ ಸಲ್ಲಿಸದ್ದಕ್ಕೆ ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಇದೀಗ ವರದಿಯನ್ನು ಸಲ್ಲಿಸಿದೆ. ಅದರಲ್ಲಿ ಪಾಲಿಕೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಲಾಗಿದೆ.

ವರದಿಯಲ್ಲಿ ಬೆಂಗಳೂರು ನಗರದಲ್ಲಿ ಅನಧಿಕೃತವಾಗಿ ಅಳವಡಿಸಿರುವ ಜಾಹೀರಾತು ಫಲಕಗಳ ತೆರವು ಮಾಡುವ ನಿಟ್ಟಿನಲ್ಲಿ 2024ರ ಜ.19 ರಿಂದ ಫೆ.10ರ ವರೆಗೆ ಸಮೀಕ್ಷೆ ನಡೆಸಲಾಯಿತು. ಬಿಬಿಎಂಪಿ ವ್ಯಾಪ್ತಿಯಲ್ಲಿ ಪಟ್ಟು 402 ಜಾಹೀರಾತು ಫಲಕಗಳನ್ನು ಗುರುತಿಸಲಾಯಿತು. ಅವುಗಳಲ್ಲಿ 150 ಅಧಿಕೃತ ಹಾಗೂ 251 ಅನಧಿಕೃತವಾಗಿದೆ. 40 ಜಾಹೀರಾತುಗಳ ಅಳವಡಿಕೆ ಕುರಿತಂತೆ ಕೋರ್ಟ್ನಲ್ಲಿ ವಿಚಾರಣೆಗೆ ಬಾಕಿಯಿದೆ.
203 ಜಾಹೀರಾತುಗಳ ಅಳವಡಿಕೆದಾರರ ವಿರುದ್ಧ ನೋಟಿಸ್ ಜಾರಿಗೊಳಿಸಲಾಗಿದೆ. ಇವುಗಳಲ್ಲಿ 73 ಅನ್ನು ಅಳವಡಿಕೆದಾರರೇ ಸ್ವಯಂ ಪ್ರೇರಿತವಾಗಿ ತೆರವುಗೊಳಿಸಿದ್ದು, 123 ಅನ್ನು ಬಿಬಿಎಂ ತೆರವುಗೊಳಿಸಿದೆ. 12 ಜಾಹೀರಾತು ಫಲಕಗಳ ತೆರವುಗೊಳಿಸುವ ಕಾರ್ಯ ಬಾಕಿಯಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ನಗರದಲ್ಲಿನ ಅನಧಿಕೃತ ಜಾಹೀರಾತು ಫಲಕಗಳ ಹಾವಳಿ ಹೆಚ್ಚಳವನ್ನು ಆಕ್ಷೇಪಿಸಿ ಬೆಂಗಳೂರಿನ ಮಾಯಿಗೇಗೌಡ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ನೇತೃತ್ವದ ವಿಭಾಗೀಯ ಪೀಠಕ್ಕೆ ಬಿಬಿಎಂಪಿ ಪರ ವಕೀಲರು ಈ ವರದಿ ಸಲ್ಲಿಸಿದರು. ವರದಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು ಮುಂದೂಡಿತು.
ನಿರ್ದಾಕ್ಷಿಣ್ಯ ಕ್ರಮ
ಪಾಲಿಕೆಯಿಂದ ಪೂರ್ವಾನುಮತಿ ಪಡೆಯದೇ ಅನಧೀಕೃತವಾಗಿ ಜಾಹೀರಾತು ಹೋರ್ಡಿಂಗ್ ಹಾಕಿದವರ ವಿರುದ್ಧವಾಗಿ ಎಫ್ಐಆರ್ ದಾಖಲಿಸುವ ಮೂಲಕ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತಿದೆ. ನಗರದಲ್ಲಿ ವ್ಯಾಪ್ತಿಯಲ್ಲಿ ಅಳವಡಿಕೆಯಾಗಿರುವ ಎಲ್ಲಾ ಅನಧಿಕೃತ ಹೋರ್ಡಿಂಗ್ ತೆರವುಗೊಳಿಸಲು ಮತ್ತು ತಪ್ಪಿತಸ್ಥರಿಗೆ ದಂಡ ವಿಧಿಸಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಅನಧಿಕೃತ ಜಾಹಿರಾತುಗಳ ಪತ್ತೆ ಹಾಗೂ ತೆರವು ಕಾರ್ಯವನ್ನು ನಿರಂತರವಾಗಿ ಮಾಡಲಾಗುತ್ತಿದೆ. ಪ್ರಕರಣ ಸಂಬಂಧ ಈಗಾಗಲೇ ನ್ಯಾಯಾಲಯದ ಹೊರಡಿಸಿದ ಆದೇಶವನ್ನು ಪಾಲಿಸದ ಅಧಿಕಾರಿಗಳ ವಿರುದ್ಧವೂ ನೋಟಿಸ್ ಜಾರಿಗೊಳಿಸಲಾಗುತ್ತಿದೆ. ತೆರವುಗೊಳಿಸಿದ ಬ್ಯಾನರ್, ಹೋರ್ಡಿಂಗ್ಗಳ ಸಮರ್ಪಕ ವಿಲೇವಾರಿ ಕಾರ್ಯವನ್ನು ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಸಿಬ್ಬಂದಿಗೆ ವಹಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.












Click it and Unblock the Notifications