ಪಾದಚಾರಿ ಸೇತುವೆ ಕುಸಿದ ಬೆನ್ನಲ್ಲೇ ದುರಸ್ತಿಗೆ ಚಾಲನೆ
ಬೆಂಗಳೂರು, ಮೇ 10: ಹಲಸೂರಿನಲ್ಲಿ ಮಂಗಳವಾರ ಕುಸಿದಿದ್ದ ಪಾದಚಾರಿ ಸೇತುವೆ ಕಾಮಗಾರಿಯನ್ನು ಬಿಬಿಎಂಪಿ ಕೂಡಲೇ ಕೈಗೆತ್ತಿಕೊಂಡಿದ್ದು, ಚುನಾವಣೆ ಕೆಲಸ ಅಥವಾ ಇನ್ಯಾವುದೇ ಅಡೆತಡೆ ಇಲ್ಲದೆ, ತಕ್ಷಣಕ್ಕೆ ದುರಸ್ತಿ ಕಾರ್ಯ ಆರಂಭಿಸಿರುವುದಕ್ಕೆ ನಾಗರಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಮಳೆ ನೀರು ಕಾಲುವೆಗೆ ನಿರ್ಮಿಸಲಾಗಿದ್ದ ಪಾದಚಾರಿ ಸೇತುವೆ ಹಠಾತ್ ಕುಸಿದುಬಿದ್ದಿದ್ದರಿಂದ ಕೇಂಬ್ರಿಡ್ಜ್ ಲೇಔಟ್, ಇಸ್ರೋ ಕಾಲೊನಿ ಹಾಗೂ ಮತ್ತಿತರೆ ಪ್ರದೇಶದ ನಿವಾಸಿಗಳು, ತೀವ್ರ ಚಿಂತೆಗೆ ಒಳಗಾಗಿದ್ದರು. ಬಿಬಿಎಂಪಿ, ಕಾಮಗಾರಿ ಆರಂಭಿಸಿದ್ದು, ಸೇತುವೆಯ ಒಂದು ಭಾಗದಲ್ಲಿ ಸಿಲುಕಿದ್ದ ನಾಗರಿಕರು ಇದೀಗ ನಿಟ್ಟುಸಿರು ಬಿಡುವಂತಾಗಿದೆ.
ಘಟನೆ ನಡೆದ ಮಂಗಳವಾರ ದಿನವೇ ಬಿಬಿಎಂಪಿ ಕೆಲಸಗಾರರು ಪಾದಚಾರಿ ಸೇತುವೆ ದುರಸ್ತಿಗೆ ಸಲಕರಣೆ ತಂದು ಹಾಕಿದ್ದರು.ಬುಧವಾರ ಬೆಳಗ್ಗೆಯಿಂದಲೇ ಕಾಮಗಾರಿ ಆರಂಭವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಮಧ್ಯೆ ಸೇತುವೆ ಕುಸಿದ ಪರಿಣಾಮ ಸಾರ್ವಜನಿಕರಿಗೆ ತೊಂದರೆ ಉಂಟಾಗಬಹುದು ಎಂದು ಸೇತುವೆ ಸುತ್ತ ಪೊಲೀಸ್ ಪಹರೆಯನ್ನು ಹಾಕಲಾಗಿತ್ತು. ಬಿಬಿಎಂಪಿ ಅಧಿಕಾರಿಗಳಿಗೆ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿ ಸಂಜೆ 6 ಗಂಟೆಯಿಂದಲೇ ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ ಎಂದು ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.

ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಈ ಪಾದಚಾರಿ ಸೇತುವೆ ಮಂಗಳವಾರ ಕುಸಿದಿದ್ದು, ಚರಂಡಿಯ ಒಳಗೆ ತುಂಬಿದ್ದ ಹೂಳೂ, ಹರಿದು ಹೋದ ಪರಿಣಾಮ ಸೇತುವೆ ಕುಸಿದಿದೆ ಎಂದು ಬಿಬಿಎಂಪಿ ಎಂಜಿನಿಯರ್ಗಳು ಅಭಿಪ್ರಾಯ ಪಟ್ಟಿದ್ದಾರೆ.












Click it and Unblock the Notifications