ಬಿಬಿಎಂಪಿ ಸಭೆಯಲ್ಲಿ ಬೊಮ್ಮನಹಳ್ಳಿ ವಲಯ ಅಧಿಕಾರಿಗಳಿಗೆ ಮೇಯರ್ ಕ್ಲಾಸ್
ಬೆಂಗಳೂರು, ಜನವರಿ 10: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮೇಯರ್ ಎಂ ಗೌತಮ್ ಕುಮಾರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಬೊಮ್ಮನಹಳ್ಳಿ ವಲಯದಲ್ಲಿ ನವ ನಗರೋಥ್ಥಾನ ಯೊಜನೆಯಡಿ ಕೈಗೆತ್ತಿಕೊಂಡಿರುವ ಕಾಮಗಾರಿಗಳು ಹಾಗೂ ಇತರೆ ಯೋಜನೆಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.
ಈ ವೇಳೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ, ಉಪಮಹಾಪೌರ ರಾಮಮೋಹನ್ ರಾಜು, ಸ್ಥಳೀಯ ಪಾಲಿಕೆ ಸದಸ್ಯರುಗಳು, ವಲಯ ವಿಶೇಷ ಆಯುಕ್ತ ಅನ್ಬುಕುಮಾರ್, ವಲಯ ಜಂಟಿ ಆಯುಕ್ತ ರಾಮಕೃಷ್ಣ, ವಲಯ ಮುಖ್ಯ ಅಭಿಯಂತರ ಸಿದ್ದೇಗೌಡ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ
2019-20ನೇ ಸಾಲಿನಲ್ಲಿ ನವ ನಗರೋತ್ತಾನ ಅನುದಾನದಡಿ ಯಾವ್ಯಾವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂಬ ಮಾಹಿತಿಯನ್ನು ಮಹಾಪೌರರು ಪಡೆದುಕೊಂಡರು. ಆ ಬಳಿಕ ಟೆಂಡರ್ ಪ್ರಕ್ರಿಯೆಲ್ಲಿರುವ ಯೋಜನೆಗಳಿಗೆ ತ್ವರಿತವಾಗಿ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೊಮ್ಮನಹಳ್ಳಿ ವಲಯದಲ್ಲಿ ಹೆಚ್ಚು ಸಮಸ್ಯೆ
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಹಾಪೌರರು, 'ಮಳೆಗಾಲದ ವೇಳೆ ಬೊಮ್ಮನಹಳ್ಳಿ ವಲಯದಲ್ಲಿ ಹೆಚ್ಚು ಸಮಸ್ಯೆ ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಈ ಬಾರಿಯ ಬಜೆಟ್ನಲ್ಲಿ ರಾಜಕಾಲುವೆಗಳ ದುರಸ್ತಿ ಕಾಮಗಾರಿ ಕೈಗೊಳ್ಳಬೇಕಾದ ಪಟ್ಟಿಯನ್ನು ಸಿದ್ದಪಡಿಸಬೇಕು. ಪಾಲಿಕೆಗೆ ಆಸ್ತಿ ತೆರಿಗೆ ಸಂಗ್ರಹವು ಪ್ರಮುಖ ಆದಾಯದ ಮೂಲವಾಗಿದೆ. ಈ ಸಂಬಂಧ ಆಸ್ತಿ ತೆರಿಗೆ ಮತ್ತು ಸುಧಾರಣಾ ಶುಲ್ಕ ಬಾಕಿ ಉಳಿಸಿಕೊಂಡಿರುವ ಸ್ವತ್ತುಗಳ ಮೇಲೆ ದಾಳಿ ನಡೆಸಿ ಹೆಚ್ಚು ತೆರಿಗೆ ಸಂಗ್ರಹಿಸಲು ಸೂಕ್ರಕ್ರಮ ವಹಿಸಬೇಕು' ಎಂದು ಸೂಚನೆ ನೀಡಿದರು.

ವಾರ್ಡ್ ಕಮಿಟಿ ಸಭೆ
'ಬಡ ವರ್ಗದ ಜನರಿಗೆ ಕಲ್ಯಾಣ ಕಾರ್ಯಕ್ರಮದಡಿ ಪಾಲಿಕೆ ವತಿಯಿಂದ ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತದೆ. ಆದರೆ, ಆ ಮಾಹಿತಿ ಸಾಕಷ್ಟು ಜನಕ್ಕೆ ಸಮರ್ಪಕವಾಗಿ ತಿಳಿದಿಲ್ಲ. ಈ ಸಂಬಂಧ ವಾರ್ಡ್ ಕಮಿಟಿ ಸಭೆಗಳಲ್ಲಿ ಕಲ್ಯಾಣ ಕಾರ್ಯಕ್ರಮದಡಿ ನೀಡುವ ಸೌಲಭ್ಯಗಳ ಬಗ್ಗೆ ತಿಳಿಸಿ ಅದರ ಸದುಪಯೋಗ ಪಡೆಯುವಂತೆ ಮಾಡಬೇಕು' ಎಂದು ಹೇಳಿದರು.

ಬೊಮ್ಮನಹಳ್ಳಿ ವಲಯದ ತೆರಿಗೆ ಸಂಗ್ರಹ ವಿವರ
ಒಟ್ಟು ತೆರಿಗೆ ಸಂಗ್ರಹ ಗುರಿ: 458 ಕೋಟಿ ರೂ.
ಇಲ್ಲಿಯವರೆಗೆ ಸಂಗ್ರಹಿಸಿರುವ ತೆರಿಗೆ: 240 ಕೋಟಿ ರೂ.
ಸಂಗ್ರಹಿಸಬೇಕಿರುವ ಬಾಕಿ ಮೊತ್ತ: 218 ಕೋಟಿ ರೂ.











Click it and Unblock the Notifications