Push Box Underpass: ಅಚ್ಚರಿ ಮೂಡಿಸಿದ ಬಿಬಿಎಂಪಿ ಕಾರ್ಯ: 58 ದಿನದಲ್ಲಿ ಅಂಡರ್ಪಾಸ್ ಸಂಚಾರ ಮುಕ್ತ
ಕಾಡುಬೀಸನಹಳ್ಳಿ ಮತ್ತು ಮಾರತ್ತಹಳ್ಳಿ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮುನ್ನೇಕೊಳಲು ರೈಲ್ವೆ ಮೇಲ್ಸೇತುವೆ ಬಳಿ ಅತ್ಯಂತ ಕಡಿಮೆ ಅವಧಿಯಲ್ಲಿ 'ಪುಶ್ ಬಾಕ್ಸ್' ಅಂಡರ್ಪಾಸ್ ನಿರ್ಮಿಸಿ ಸಂಚಾರಕ್ಕೆ ಮುಕ್ತವಾಗಿದೆ. ಇದರ ಅನುಕೂಲತೆ ಏನು?
ಬೆಂಗಳೂರು, ಫೆಬ್ರುವರಿ 02: ಕಾಡುಬೀಸನಹಳ್ಳಿ ಮತ್ತು ಮಾರತ್ತಹಳ್ಳಿ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮುನ್ನೇಕೊಳಲು ರೈಲ್ವೆ ಮೇಲ್ಸೇತುವೆ ಬಳಿ ಅತ್ಯಂತ ಕಡಿಮೆ ಅವಧಿಯಲ್ಲಿ 'ಪುಶ್ ಬಾಕ್ಸ್' ಅಂಡರ್ಪಾಸ್ ನಿರ್ಮಿಸಿ ಸಂಚಾರಕ್ಕೆ ಮುಕ್ತವಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ಮಾರತ್ತಹಳ್ಳಿ ಸಮೀಪ 'ಪುಶ್ ಬಾಕ್ಸ್' ಅಂಡರ್ಪಾಸ್ ಕಾಮಗಾರಿಯನ್ನು ಶರವೇಗದಲ್ಲಿ ಮುಗಿಸಿ ವಾಹನ ಸವಾರರ ಬಳಕೆಗೆ ಒದಗಿಸಲಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಅಂದರೆ ಕೇವಲ 58 ದಿನಗಳಲ್ಲಿ ಪುಶ್ ಬಾಕ್ಸ್ ಅಂಡರ್ಪಾಸ್ನ ಅಂತಿಮ ಕೆಲಸಗಳನ್ನು ಪೂರ್ಣಗೊಳಿಸಲಾಗಿದೆ.
ಬೆಂಗಳೂರಿನ ಹೊರ ವರ್ತುಲ ರಸ್ತೆ (Outer Ring Road) ಸಮೀಪ ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿ 24 ಕೋಟಿ ರೂಪಾಯಿ ವೆಚ್ಚದ ರೈಲ್ವೆ ಮೇಲ್ಸೇತುವೆ ಯೋಜನೆ ಪೂರ್ಣಗೊಳಿಸಲು ಸುಮಾರು 10 ತಿಂಗಳು ಬೇಕಾಗಿತ್ತು. ಅದಾದ ಬಳಿಕ ಬುಶ್ ಬಾಕ್ಸ್ ನಿರ್ಮಾಣಕ್ಕಾಗಿ ಪೌರಕಾರ್ಮಿಕರಿಗೆ 6 ಕೋಟಿ ರೂ. ನೀಡಲಾಯಿತು.

ಈ ರಸ್ತೆ ಅಂಡರ್ ಪಾಸ್ನಿಂದಾಗಿ ಪ್ರಯಾಣದ ಸಮಯ ತಗ್ಗಿದೆ. ಹಳೆ ವಿಮಾನ ನಿಲ್ದಾಣ ರಸ್ತೆಯಿಂದ ಹೊರವರ್ತುಲ ರಸ್ತೆ ಮೂಲಕ ಸರ್ಜಾಪುರ ರಸ್ತೆಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಇದೇ ಅಂಡರ್ಪಾಸ್ ಮಾರ್ಗವಾಗಿ ಸಂಚರಿಸುತ್ತಾರೆ. ಈ ಹಿಂದೆ ಸರ್ಜಾಪುರಕ್ಕೆ ತೆರಳುವ ಜನರು ಯು-ಟರ್ನ್ ತೆಗೆದುಕೊಂಡು ಹೊರ ವರ್ತುಲ ರಸ್ತೆಗೆ ಪ್ರವೇಶಿಸಲು ಕುಂದನಹಳ್ಳಿಯವರೆಗೆ 2.5 ಕಿ.ಮೀ.ದೂರ ಕ್ರಮಿಸಬೇಕಿತ್ತು. ಆದರೆ ಬುಧವಾರದಿಂದ ಪುಶ್ ಬಾಕ್ಸ್ ಸಂಚಾರ ಮುಕ್ತಗೊಂಡ ಹಿನ್ನೆಲೆಯಲ್ಲಿ, ಈ ಭಾಗದಲ್ಲಿ ಯು-ಟರ್ನ್ ತೆಗೆದುಕೊಂಡರೆ ಪ್ರಯಾಣಿಕರಿಗೆ ಶೇ. 60ರಿಂದ 70 ಸಮಯದ ಉಳಿತಾಯವಾಗುತ್ತದೆ ಎಂದು ಬಿಬಿಎಂಪಿ ತಿಳಿಸಿದೆ.
ಮಾರತ್ತಹಳ್ಳಿ-ಕಾಡುಬೀಸನಹಳ್ಳಿ ಪ್ರಯಾಣಿಕರಿಗೆ ಅನುಕೂಲ
ಮಾರತ್ತಹಳ್ಳಿಯಿಂದ ಕಾಡುಬೀಸನಹಳ್ಳಿಗೆ ತೆರಳುವ ಪ್ರಯಾಣಿಕರಿಗೆ ಈ ಅಂಡರ್ಪಾಸ್ ಹೆಚ್ಚು ಸಹಕಾರಿ. ಸ್ಥಳೀಯ ಶಾಸಕರ ಸೂಚನೆ ಮೇರೆಗೆ ಪಾಲಿಕೆಯಿಂದ ಇಲ್ಲಿ ಕಾಮಗಾರಿ ಆರಂಭಿಸಿದ ಪರಿಣಾಮ 7.7ಮೀ. ಅಗಲ ಮತ್ತು 4.4 ಮೀ.ಎತ್ತರದ ಅಂಡರ್ ಪಾಸ್ ತ್ವರಿತಗತಿಯಲ್ಲಿ ನಿರ್ಮಾಣವಾಗಿದೆ.
ಮಹದೇವಪುರ ನಿವಾಸಿಯೊಬ್ಬರು, ಕಾಮಗಾರಿಯನ್ನು ತ್ವರಿತವಾಗಿ ನಿರ್ವಹಿಸುವ ಮೂಲಕ ಬಿಬಿಎಂಪಿ ದಕ್ಷತೆ ತೋರಿದೆ.

ಕ್ಷಿಪ್ರ ಕಾಮಗಾರಿಗೆ ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ಹಾಗೂ ಅಧಿಕಾರಿಗಳಿಗೆ ಅವರು ಕೃತಜ್ಞತೆ ಸಮರ್ಪಿಸಿದ್ದಾರೆ.
ಅಂಡರ್ಪಸ್ ನಿರ್ಮಾಣಕ್ಕೂ ಮುನ್ನ ಈ ಭಾಗದಲ್ಲಿ 3ಕಿ.ಮೀ.ವರೆಗೆ ವಾಹನಗಳು ಜಮಾಯಿಸಿ ಸಂಚಾರ ದಟ್ಟಣೆ ಉಂಟಾಗುತ್ತಿತ್ತು. ಆದರೆ ಈಗ ಸರ್ಜಾಪುರಕ್ಕೆ ಅತ್ಯಂತ ಕಡಿಮೆ ಅವಧಿಯಲ್ಲೇ ಸಂಚಾರ ಮಾಡಬಹುದಾಗಿದೆ ಎಂದು ಈ ಭಾಗದಲ್ಲಿ ಓಡಾಡುವ ಪ್ರಯಾಣಿಕರೊಬ್ಬರು ತಿಳಿಸಿದರು.
ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಪರಿಣಾಮವೇ ಈ ತ್ವರಿತಗತಿಯ ಕೆಲಸ ಪೂರ್ಣಗೊಳ್ಳಲು ಕಾರಣ. ಇಲ್ಲವಾದಲ್ಲಿ ಅಧಿಕಾರಿಗಳು ಯಾವುದೇ ಕಾಮಗಾರಿಯನ್ನು ಇಷ್ಟು ಕಡಿಮೆ ಅವಧಿಯಲ್ಲಿ ಸಕಾಲದಲ್ಲಿ ಮುಗಿಸಿದ್ದನ್ನು ನಾವು ನೋಡಿಲ್ಲ ಎಂದು ವಾಹನ ಸವಾರ ಪ್ರಸಾದ್ ರೊಬ್ಬರು ತಿಳಿಸಿದರು.












Click it and Unblock the Notifications