ಬೆಂಗಳೂರಿನ ವಾಹನ ಸವಾರರು, ಜನರಿಗೆ ಗುಡ್ನ್ಯೂಸ್ ಕೊಟ್ಟ ಬಿಬಿಎಂಪಿ, ಏನದು ?
ಬೆಂಗಳೂರಿನಲ್ಲಿ ರಸ್ತೆಗಳಲ್ಲಿ ಓಡಾಡುವ ಹಾಗೂ ವಾಹನ ಸವಾರರಿಗೆ ರಿಲೀಫ್ ಕೊಡುವ ಸುದ್ದಿಯೊಂದನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಕೊಟ್ಟಿದೆ. ಬೆಂಗಳೂರಿನಲ್ಲಿ ಆಪ್ಟಿಕಲ್ ಫೈಬರ್ ಕೇಬಲ್ (ಓ.ಎಫ್.ಸಿ)ಗಳದ್ದು ಬಹುದೊಡ್ಡ ಸಮಸ್ಯೆ. ಇದೀಗ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮುಂದಾಗಿದೆ. ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಎಲ್ಲೆಂದರಲ್ಲಿ ಹಾಗೂ ರಸ್ತೆ, ಪಾದಚಾರಿ ಮಾರ್ಗ ಹಾಗೂ ಮರಗಳ ಮೇಲೆ ಓಎಫ್ಸಿ ಕೇಬಲ್ಗಳು ನೇತಾಡುತ್ತಿವೆ. ಇದೀಗ ಇದಕ್ಕೆ ಪರಿಹಾರ ಕಂಡುಕೊಳ್ಳುವುದಕ್ಕೆ ಬಿಬಿಎಂಪಿ ಮುಂದಾಗಿದೆ. ಈ ಮೂಲಕ ಜನ ನೆಮ್ಮದಿಯಿಂದ ರಸ್ತೆಗಳಲ್ಲಿ ನಡೆದುಕೊಂಡು ಹೋಗುವುದಕ್ಕೆ ಅವಕಾಶ ನೀಡಲು ಮುಂದಾಗಿದೆ.
ಬಿಬಿಎಂಪಿಯು ಮಾರ್ಚ್ ತಿಂಗಳಲ್ಲಿ ಅನಧಿಕೃತ ಓ.ಎಫ್.ಸಿ ತೆರವು ಕಾರ್ಯಾಚರಣೆ ಅಭಿಯಾನ ಹಮ್ಮಿಕೊಂಡಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಅನಧಿಕೃತ ಓ.ಎಫ್.ಸಿ ತೆರವು ಕಾರ್ಯಾಚರಣೆ -ಮಾರ್ಚ್ 2025 ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ತೆರವು ಕಾರ್ಯಾಚರಣೆನ್ನು ಈಗಾಗಲೇ ಆರಂಭಿಸಲಾಗಿದೆ.ಬಿಬಿಎಂಪಿ ವ್ಯಾಪ್ತಿಯಲ್ಲಿ 3ನೇ ಮಾರ್ಚ್ 2025 ರಿಂದ ಅನಧಿಕೃತವಾಗಿ ಅಳವಡಿಸಲಾಗಿರುವ ಓ.ಎಫ್.ಸಿ. ಗಳನ್ನು ತೆರವುಗೊಳಿಸುವ ಸಂಬಂಧ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಸುತ್ತೋಲೆ ಹೊರಡಿಸಿದ್ದಾರೆ.

ಇದೀಗ ನಗರದ ಎಲ್ಲಾ 8 ವಲಯಗಳಲ್ಲಿ ಬರುವ ವಾರ್ಡ್ ವ್ಯಾಪ್ತಿಯ ರಸ್ತೆಗಳಲ್ಲಿ ಅನಧಿಕೃತವಾಗಿ ಅಳವಡಿಸಲಾಗಿರುವ ಓ.ಎಫ್.ಸಿ. ಗಳನ್ನು ತೆರವುಗೊಳಿಸಬೇಕಿದೆ. ಅದರ ಸಂಪೂರ್ಣ ಹೊಣೆಗಾರಿಕೆಯನ್ನು ವಾರ್ಡ್ಗಳ ಸಹಾಯಕ ಮತ್ತು ಕಿರಿಯ ಎಂಜಿನಿಯರ್ಗಳಿಗೆ ನೀಡಲಾಗಿದೆ. ಸಹಾಯಕ ಕಾರ್ಯಪಾಲಕ ಎಂಜಿನಿಯರ್ಗಳು ಓ.ಎಫ್.ಸಿ ತೆರವು ಕಾರ್ಯಾಚರಣೆಯ ಪ್ರಕ್ರಿಯೆಯ ಮೇಲ್ವಿಚಾರಣೆ ಮಾಡಲು ಸೂಚನೆ ನೀಡಲಾಗಿದೆ.
ವಲಯ ವ್ಯಾಪ್ತಿಯಲ್ಲಿ ಮರ, ವಿದ್ಯುತ್ ಕಂಬಗಳ ಅನಧಿಕೃತ ಕೇಬಲ್ ಅನ್ನು ಅಳವಡಿಸಿದ್ದು, ಭೂಮಿಯ ಮೇಲ್ಮಟ್ಟದಲ್ಲಿ ಕಾಣುವ ರೀತಿಯಲ್ಲಿರುವ ಕಾರಣ ನಗರದ ಸೌಂದರ್ಯ ಸಹ ಹಾಳಾಗುತ್ತದೆ. ಎಲ್ಲದಕ್ಕಿಂತ ಮುಖ್ಯವಾಗಿ ಜನ ಈ ವೈರ್ಗಳಿಗೆ ಸಿಲುಕಿ ಬಿದ್ದು ಗಾಯ ಮಾಡಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲಾ ವಲಯಗಳಲ್ಲಿ ಓ.ಎಫ್.ಸಿ ಕೇಬಲ್ ತೆರವು ಕಾರ್ಯಾಚರಣೆಯನ್ನು ಮಾರ್ಚ್ ತಿಂಗಳಲ್ಲಿ ಪರಿಣಾಮಕಾರಿಯಾಗಿ ನಡೆಸಲಾಗುವುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮಾಹಿತಿ ನೀಡಿದೆ.

ಅನಧಿಕೃತ ಕೇಬಲ್ ತೆರವು ಮಾಡಿದ ಬಳಿಕ ಓ.ಎಫ್.ಸಿ ಸಂಸ್ಥೆಗಳ ನಿರ್ವಹಣಾ ತಂಡಗಳು ಪುನ: ಅನಧಿಕೃತ ಕೇಬಲ್ಗಳನ್ನು ಅದೇ ಮಾರ್ಗದಲ್ಲಿ ಅಳವಡಿಸದಂತೆ ನೋಡಿಕೊಳ್ಳಬೇಕು ಎಂದೂ ಸೂಚನೆ ನೀಡಲಾಗಿದೆ.
2 ವಲಯಗಳಲ್ಲಿ ತೆರವು ಕಾರ್ಯಾಚರಣೆ: ಬಿಬಿಎಂಪಿ ವ್ಯಾಪ್ತಿಯ ಮಹದೇವಪುರ ವಲಯ ಹಾಗೂ ಪೂರ್ವ ವಲಯ ವ್ಯಾಪ್ತಿಯಲ್ಲಿ ಇಂದು ಅನಧಿಕೃತ ಓ.ಎಫ್.ಸಿ ಕೇಬಲ್ ಗಳನ್ನು ತೆರವುಗೊಳಿಸಲಾಗಿದೆ.
ಮಹದೇವಪುರ ವಲಯದ ಮಾರತಹಳ್ಳಿ ಮುಖ್ಯ ರಸ್ತೆ, ಕಗ್ಗದಾಸಪುರ, ದೊಡ್ಡನೆಕ್ಕುಂದಿ, ಹಾಗೂ ಪೂರ್ವ ವಲಯದಲ್ಲಿ ಹಲಸೂರು ವ್ಯಾಪ್ತಿಯ ಸುತ್ತಮುತ್ತಲಿನ ರಸ್ತೆಗಳಲ್ಲಿ ತೆರವು ಕಾರ್ಯಾಚರಣೆಯನ್ನು ನಡೆಸಲಾಯಿತು. ಇದೇ ರೀತಿ ಎಲ್ಲಾ ವಲಯಗಳಲ್ಲಿಯೂ ಹಂತ-ಹಂತವಾಗಿ ತೆರವು ಕಾರ್ಯಾಚರಣೆಯನ್ನು ನಡೆಸಲಾಗುವುದು ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರಿಂದ ಜನರಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.












Click it and Unblock the Notifications