ರಸ್ತೆ ನಿರ್ಮಾಣದಲ್ಲಿ ಪ್ಲಾಸ್ಟಿಕ್ ಬಳಸಲು ಬಿಬಿಎಂಪಿ ನಿರಾಸಕ್ತಿ
ಬೆಂಗಳೂರು, ಏಪ್ರಿಲ್ 17: ರಾಜಧಾನಿ ಬೆಂಗಳೂರಲ್ಲಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವಲ್ಲಿ ಬಿಬಿಎಂಪಿ ಮತ್ತೊಮ್ಮೆ ವಿಲವಾಗಿದೆ ಎಂದು ಎನ್ಜಿಓಗಳು ಬೇಸರ ವ್ಯಕ್ತಪಡಿಸಿವೆ.
ನಗರದಲ್ಲಿ ಈಗಾಗಲೇ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಯಂತ್ರಿಸಲಾಗಿದೆ. ಈ ರೀತಿ ಅಕ್ರಮ ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಲು ಬಿಬಿಎಂಪಿ ನಿರಂತರ ದಾಳಿಗಳನ್ನು ನಡೆಸುತ್ತಿದೆ. ಈ ರೀತಿಯ ದಾಳಿ ವೇಳೆ ವಶಪಡಿಸಿಕೊಂಡ ಪ್ಲಾಸ್ಟಿಕ್ನ್ನು ರಸ್ತೆ ನಿರ್ಮಾಣಕ್ಕೆ ಬಳಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಕಳೆದ 2017ರ ಅಕ್ಟೋಬರ್ನಲ್ಲಿ ಪ್ರಕಟಿಸಿದ್ದರು. ಆದರೆ ಈ ನಿರ್ದೇಶನವನ್ನು ಪಾಲಿಸುವಲ್ಲಿ ಬಿಬಿಎಂಪಿ ಸಂಪೂರ್ಣ ಹಿಂದೆ ಬಿದ್ದಿದೆ.
ನಗರದ ಪರಿಸರ ಪ್ರೇಮಿ ಸಂಘಟನೆಗಳು ತ್ಯಾಜ್ಯದಲ್ಲಿನ ಪ್ಲಾಸ್ಟಿಕ್ ಬೇರ್ಪಡಿಸಿ ವೈಜ್ಞಾನಿಕ ವಿಲೇವಾರಿಗೆ ಸತತ ಒತ್ತಾಯ ಹೇರುತ್ತಲೇ ಬಂದಿವೆ. ತ್ಯಾಜ್ಯದಲ್ಲಿನ ಪ್ಲಾಸ್ಟಿಕ್ ತಿಂದು ಪ್ರಾಣಿ-ಪಕ್ಷಿಗಳು ನಿರಂತರ ಸಾವನ್ನಪ್ಪುತ್ತಿವೆ. ಹೀಗಾಗಿ ಪ್ಲಾಸ್ಟಿಕ್ ವಸ್ತುಗಳು ಕಸದ ತೊಟ್ಟಿಯಲ್ಲಿ ಮಿಶ್ರಣಗೊಳ್ಳದಂತೆ ಕ್ರಮಕೊಳ್ಳಬೇಕು ಎಂದು ಎನ್ಜಿಓಗಳು ಒತ್ತಾಯಿಸುತ್ತಲೇ ಬಂದಿವೆ.

ಆದರೆ ಬಿಬಿಎಂಪಿ ರಸ್ತೆ ನಿರ್ಮಾಣದಲ್ಲಿ ಈಗಾಗಲೇ ಪ್ಲಾಸ್ಟಿಕ್ ಬಳಕೆಯಾಗುತ್ತಿದೆ ಎಂದು ಸಮರ್ಥಿಸಿಕೊಂಡಿದೆ. ಕಳೆದ ಅಕ್ಟೋಬರ್ನಿಂದಲೇ ರಸ್ತೆ ನಿರ್ಮಾಣದಲ್ಲಿ ಪ್ಲಾಸ್ಟಿಕ್ ಮಿಶ್ರಣ ಬಳಸಲಾಗುತ್ತಿದೆ. ಈಗಾಗಲೇ ಸರಿಸುಮಾರು 500 ಕಿಮೀ ಉದ್ದದ ರಸ್ತೆ ನಿರ್ಮಾಣಕ್ಕೆ ಪ್ಲಾಸ್ಟಿಕ್ ಬಳಸಲಾಗಿದೆ ಎನ್ನುತ್ತಾರೆ ಬಿಬಿಎಂಪಿ ಮುಖ್ಯ ರಸ್ತೆಗಳ ವಿಭಾಗದ ಪ್ರಭಾರಿ ಮುಖ್ಯ ಎಂಜಿನಿಯರ್ ಎಸ್.ಸೋಮಶೇಖರ್.
ಇನ್ನು ಬಿಬಿಎಂಪಿಗೆ ರಸ್ತೆ ನಿರ್ಮಾಣಕ್ಕೆ ಪ್ಲಾಸ್ಟಿಕ್ ಮಿಶ್ರಣ ಪೂರೈಸುವ ಏಜೆನ್ಸಿಗಳ ಪ್ರಕಾರ, ಬಿಬಿಎಂಪಿ ಅತಿ ಕಡಿಮೆ ಪ್ರಮಾಣದ ಪ್ಲಾಸ್ಟಿಕ್ ಮಿಶ್ರಣ ಪಡೆದಿದೆ. ಕಳೆದ ಅಕ್ಟೋಬರ್ನಿಂದ ಈವರೆಗೆ ಕೇವಲ 100 ಟನ್ ಪ್ಲಾಸ್ಟಿಕ್ ಬಳಕೆ ಮಾಡಿದೆ. ಆದರೆ ಕನಿಷ್ಠ 700 ಟನ್ ಪ್ಲಾಸ್ಟಿಕ್ ಬಳಕೆ ಮಾಡಬೇಕಿತ್ತು ಎನ್ನುತ್ತಾರೆ ಕೆಕೆ ಪ್ಲಾಸ್ಟಿಕ್ ವೇಸ್ಟ್ ಮ್ಯಾನೇಜ್ಮೆಂಟ್ ಲಿಮಿಟೆಡ್ನ ನಿರ್ದೇಶಕ ಕೆ.ರಸೂಲ್ ಖಾನ್.
ಹಲವಾರು ಸ್ವಯಂಸೇವಾ ಸಂಸ್ಥೆಗಳು ಪ್ಲಾಸ್ಟಿಕ್ ನಿಯಂತ್ರಣಕ್ಕೆ ಒತ್ತಡ ಹೇರುವುದು ಮಾತ್ರವಲ್ಲ, ಸ್ವತಃ ಮರುಬಳಕೆಗೆ ಸಲಹೆ ಕೊಟ್ಟಿವೆ. ಇದೇ ವೇಳೆ ಸುಪ್ರಿಂಕೋರ್ಟ್ ನಿಂದ ನೇಮಕಗೊಂಡ ಸ್ವಚ್ಛ ಭಾರತ್ ಮಿಷನ್ ತಂಡ ನಗರಕ್ಕೆ ಭೇಟಿ ಕೊಟ್ಟ ವೇಳೆಯೂ ರಸ್ತೆ ನಿರ್ಮಾಣದಲ್ಲಿ ಪ್ಲಾಸ್ಟಿಕ್ ಬಳಕೆಗೆ ಸಲಹೆ ನೀಡಿತ್ತು.
ಈಗಾಗಲೇ ಮಹಾರಾಷ್ಟ್ರದಲ್ಲಿ ರಸ್ತೆ ನಿರ್ಮಾಣದಲ್ಲಿ ಶೇ.10ರಷ್ಟು ಪ್ಲಾಸ್ಟಿಕ್ ಬಳಕೆ ಕಡ್ಡಾಯಗೊಳಿಸಿದ್ದರೆ, ತಮಿಳುನಾಡು 10 ಸಾವಿರ ಕಿಮಿ ರಸ್ತೆಯ ನಿರ್ಮಾಣದಲ್ಲಿ ಪ್ಲಾಸ್ಟಿಕ್ ಬಳಸಿ ಮಾದರಿಯಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ 5 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿದ ನಗರ ಕನಿಷ್ಠ 50 ಕಿಮೀ ರಸ್ತೆಯನ್ನು ಪ್ಲಾಸ್ಟಿಕ್ ಮಿಶ್ರಣ ಸಹಿತ ನಿರ್ಮಿಸುವುದು ಕಡ್ಡಾಯವಾಗಿದೆ. ಈ ವಿಚಾರದಲ್ಲಿ ಬಿಬಿಎಂಪಿ ಹಿಂದೆ ಬಿದ್ದಿರುವುದು ಎನ್ಜಿಓಗಳ ಬೇಸರಕ್ಕೆ ಕಾರಣವಾಗಿದೆ.












Click it and Unblock the Notifications