BBMP: ವಾರದಲ್ಲಿ₹ 26.94 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿದ ಬಿಬಿಎಂಪಿ; ಇನ್ನೂ ₹474 ಕೋಟಿ ಆಸ್ತಿ ತೆರಿಗೆ ಬಾಕಿ
ಬಿಬಿಎಂಪಿ ವ್ಯಾಪ್ತಿಯಲ್ಲಿ ಬಾಕಿ ಇರುವ ಆಸ್ತಿ ತೆರಿಗೆ ಸಂಗ್ರಹಿಸಲು ಸರ್ಕಾರ ಒಂದು ಬಾರಿ ಪರಿಹಾರ (ಒಟಿಎಸ್) ಯೋಜನೆಯನ್ನು ಜಾರಿಗೆ ತಂದಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ, ಹೀಗಾಗಿ ಯೋಜನೆಯನ್ನು ಸೆಪ್ಟೆಂಬರ್ 31ರವರೆಗೆ ವಿಸ್ತರಿಸಿದೆ. ಕಳೆದ ಒಂದು ವಾರದಲ್ಲಿ ಬಿಬಿಎಂಪಿ 26,862 ತೆರಿಗೆದಾರರಿಂದ ₹ 26.94 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿದೆ, ಆದರೂ ಬಿಬಿಎಂಪಿಗೆ ಇನ್ನೂ ₹474 ಕೋಟಿ ಆಸ್ತಿ ತೆರಿಗೆ ಬರಬೇಕಿದೆ.
2024ರ ಆರ್ಥಿಕ ವರ್ಷದಲ್ಲಿ 3.95 ಲಕ್ಷ ಆಸ್ತಿ ಮಾಲಿಕರು ಒಟ್ಟು ₹738 ಕೋಟಿ ತೆರಿಗೆ ಪಾವತಿ ಮಾಡಬೇಕಿದೆ. ಆದರೆ ಈವರೆಗೂ 1.31 ಲಕ್ಷ ತೆರಿಗೆದಾರರು ₹273 ಕೋಟಿ ರೂಪಾಯಿ ಪಾವತಿ ಮಾಡಿದ್ದಾರೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

ವಲಯವಾರು ತೆರಿಗೆ ಬಾಕಿ
ಬಿಬಿಎಂಪಿ ವಲಯವಾರು ಪ್ರದೇಶದಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಹದೇವಪುರ ವಲಯದಲ್ಲಿ ₹116.03 ಕೋಟಿ ಆಸ್ತಿ ತೆರಿಗೆ ಬರಬೇಕಿದ್ದು, ಅತಿ ಹೆಚ್ಚು ಬಾಕಿ ಉಳಿಸಿಕೊಂಡಿರುವ ವಲಯವಾಗಿದೆ. ದಕ್ಷಿಣ ವಲಯದಲ್ಲಿ ₹74.72 ಕೋಟಿ ಆಸ್ತಿ ತೆರಿಗೆ ಬಾಕಿದ್ದು, ಪೂರ್ವ ವಲಯದಲ್ಲಿ ₹69.89 ಕೋಟಿ ಬಾಕಿ ಇದೆ. ಬೊಮ್ಮನಹಳ್ಳಿ ವಲಯದಲ್ಲಿ ₹62.94 ಕೋಟಿ ಬಾಕಿ ಇದೆ. ಉಳಿದಂತೆ ಪಶ್ಚಿಮ ವಲಯ ₹49.33 ಕೋಟಿ, ಆರ್ ಆರ್ ನಗರ ₹38.52 ಕೋಟಿ, ಯಲಹಂಕ ವಲಯ ₹38.43 ಕೋಟಿ ಬಾಕಿ ಇದ್ದರೆ, ದಾಸರಹಳ್ಳಿ ವಲಯದಲ್ಲಿ ₹16.92 ಕೋಟಿ ಆಸ್ತಿ ತೆರಿಗೆ ಬಾಕಿ ಇದೆ.
ತೆರಿಗೆ ಕಟ್ಟದವರ ಆಸ್ತಿ ಮುಟ್ಟುಗೋಲು
ಆಸ್ತಿ ತೆರಿಗೆ ಕಟ್ಟದೆ ಕಳ್ಳಾಟ ಆಡುವವರಿಗೆ ಬಿಬಿಎಂಪಿ ಬಿಸಿ ಮುಟ್ಟಿಸಲು ಮುಂದಾಗಿದೆ. ಆಸ್ತಿ ತೆರಿಗೆ ಕಟ್ಟುವಂತೆ ಹಲವು ಬಾರಿ ನೋಟಿಸ್ ಕೊಟ್ಟರೂ ತೆರಿಗೆ ಪಾವತಿಸದೆ ನಿರ್ಲಕ್ಷ್ಯ ತೋರಿದ ಮಾಲೀಕರ 14,906 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಆರಂಭಿಸಿದೆ. 2024ರಲ್ಲಿ ಈವರೆಗೆ ಬಾಕಿ ತೆರಿಗೆ ಪಾವತಿಸದ ಸುಮಾರು 50,000 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಪ್ರತಿಷ್ಠಿತರಿಂದಲೇ ಆಸ್ತಿ ತೆರಿಗೆ ಬಾಕಿ
ಬಿಬಿಎಂಪಿ ಆಸ್ತಿ ತೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಆಮ್ ಆದ್ಮಿ ಪಾರ್ಟಿ, ಪ್ರತಿಷ್ಠಿತ ವ್ಯಕ್ತಿಗಳು, ಸಂಸ್ಥೆಗಳೇ ಕೋಟ್ಯಂತರ ರೂಪಾಯಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿವೆ ಎಂದು ಆರೋಪಿಸಿದೆ.
ತೆರಿಗೆ ಕಟ್ಟದವರ ಆಸ್ತಿಗಳನ್ನು ಬಿಬಿಎಂಪಿ ಮುಟ್ಟುಗೋಲು ಹಾಕಿಕೊಳ್ಳಬೇಕಿತ್ತು, ವಿಜಯ್ ಮಲ್ಯ ಅವರ ಯುನೈಟೆಡ್ ಬ್ರಿವರೀಸ್, ಎಂಬೆಸ್ಸಿ ಗ್ರೂಪ್, ಬಿಎಂಟಿಸಿ, ಬಿಎಂಆರ್ ಸಿಎಲ್, ಸರ್ಕಾರಿ ಸಹಯೋಗದ ಕಂಪನಿ, ನಿಗಮಗಳು ತೆರಿಗೆಯನ್ನು ಕಟ್ಟಿಲ್ಲ. ಪ್ರತಿಷ್ಠಿತ ಕಾಂಟ್ರಾಕ್ಟರ್ಸ್ಗಳಾದ ಡಿಎಸ್ ಮ್ಯಾಕ್ಸ್, ಎಂಬೆಸ್ಸಿ ತೆರಿಗೆ ಕಟ್ಟಿಲ್ಲ, ಶಿಕ್ಷಣ ಸಂಸ್ಥೆಗಳಾದ ಕೆಪಿಜಿ, ಒಎಸ್ಯು ಕೂಡ ತೆರಿಗೆ ಕಟ್ಟಿಲ್ಲ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಆರೋಪಿಸಿದ್ದಾರೆ.












Click it and Unblock the Notifications