ಇನ್ನೂ ಆರು ತಿಂಗಳು ಬಿಬಿಎಂಪಿ ಚುನಾವಣೆ ನಡೆಯಲ್ಲ
ಬೆಂಗಳೂರು, ಅಕ್ಟೋಬರ್ 13: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ವಿಳಂಬವಾಗಲಿದೆ. ಸೆಪ್ಟೆಂಬರ್ 10ರಂದೇ ಕೌನ್ಸಿಲ್ ಅವಧಿ ಅಂತ್ಯಗೊಂಡಿದ್ದು, ಕರ್ನಾಟಕ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಕ ಮಾಡಿದೆ.
ಕರ್ನಾಟಕ ಹೈಕೋರ್ಟ್ಗೆ ರಾಜ್ಯ ಚುನಾವಣಾ ಆಯೋಗ ಚುನಾವಣೆ ವಿಳಂಬವಾಗಬಹುದು ಎಂದು ಹೇಳಿಕೆ ನೀಡಿದೆ. ಬಿಬಿಎಂಪಿ ವಾರ್ಡ್ಗಳ ಸಂಖ್ಯೆ ಹೆಚ್ಚಳ, ವಾರ್ಡ್ ಮರುವಿಂಗಡನೆ ಅಧ್ಯಯನಕ್ಕೆ ಆಯೋಗ ರಚನೆ ಮಾಡಲಾಗಿದೆ ಇದರಿಂದ ಚುನಾವಣೆ ವಿಳಂಬವಾಗಬಹುದು ಎಂದು ಹೇಳಿದೆ.
ಬಿಬಿಎಂಪಿಗೆ ಶೀಘ್ರವಾಗಿ ಚುನಾವಣೆ ನಡೆಸಬೇಕು ಎಂದು ಕೋರಿ ಮಾಜಿ ಕಾರ್ಪೊರೇಟರ್ ಎಂ. ಶಿವರಾಜ್ ಮುಂತಾದವರು ಹೈಕೋರ್ಟ್ಗೆ ಪ್ರತ್ಯೇಕ ಪಿಐಎಲ್ಗಳನ್ನು ಸಲ್ಲಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಅರ್ಜಿಗಳ ವಿಚಾರಣೆ ನಡೆಸಿತು.

ಅಡ್ವೋಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ ಕೋರ್ಟ್ಗೆ ಕೆಎಂಸಿ ಕಾಯ್ದೆ 1976ಕ್ಕೆ ತಿದ್ದುಪಡಿ ತಂದು ಬಿಬಿಎಂಪಿಯಲ್ಲಿದ್ದ ವಾರ್ಡ್ಗಳನ್ನು 198ರಿಂದ 225 ರಿಂದ 250ಕ್ಕೆ ಮೀರದಂತೆ ರಚಿಸಲು ಸುಗ್ರೀವಾಜ್ಞೆ ಹೊರಡಿಸಲಾಗಿದೆ.
ವಾರ್ಡ್ ಮರುವಿಂಗಡನೆ ಬಗ್ಗೆ ಅಧ್ಯಯನ ನಡೆಸಲು ಆಯೋಗ ರಚನೆಯಾಗಿದೆ. ಆದರೆ, ಚುನಾವಣಾ ನೀತಿ ಸಂಹಿತೆ ಕಾರಣಕ್ಕೆ ಆದೇಶ ಹೊರಡಿಸಲು ಸಾಧ್ಯವಾಗಿಲ್ಲ. ಆದೇಶ ಹೊರಡಿಸಲು ಅನುಮತಿ ನೀಡುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ ಎಂದು ಮಾಹಿತಿ ನೀಡಿದರು.
ಆಯೋಗದ ವಾದ: ಈಗಾಗಲೇ ಚುನಾವಣಾ ಆಯೋಗ 198 ವಾರ್ಡ್ ಮತದಾರರ ಪಟ್ಟಿ ಸಿದ್ಧಪಡಿಸಿದೆ. ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದೆ. ಈಗ ಸರ್ಕಾರ ವಾರ್ಡ್ಗಳ ಸಂಖ್ಯೆ ಹೆಚ್ಚಳ ಮಾಡಿದರೆ ಆಯೋಗ ಇದುವರೆಗೂ ಮಾಡಿರುವ ಕಾರ್ಯಗಳು ವ್ಯರ್ಥವಾಗಲಿವೆ ಎಂದರು.
ಸರ್ಕಾರ ರಚನೆ ಮಾಡಿರುವ ಆಯೋಗಕ್ಕೆ ವರದಿ ನೀಡಲು 6 ತಿಂಗಳ ಕಾಲವಕಾಶ ನೀಡಲಾಗಿದೆ. ಆಯೋಗದ ವರದಿ ಆಧರಿಸಿ ಮತದಾರರ ಪಟ್ಟಿ ತಯಾರು ಮಾಡಲು 1 ವರ್ಷ ಬೇಕು. ಸರ್ಕಾರ ಚುನಾವಣೆ ಮುಂದೂಡಲು ಪ್ರಯತ್ನ ನಡೆಸುತ್ತಿದೆ ಎಂದರು.
ವಾದವನ್ನು ಆಲಿಸಿದ ನ್ಯಾಯಪೀಠ ಅಕ್ಟೋಬರ್ 20ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಕನಿಷ್ಠ ಆರು ತಿಂಗಳ ಕಾಲ ಬಿಬಿಎಂಪಿ ಚುನಾವಣೆ ನಡೆಯುವುದಿಲ್ಲ ಎಂಬುದಂತೂ ಖಚಿತವಾಗಿದೆ.












Click it and Unblock the Notifications