ಬಿಬಿಎಂಪಿ ಚುನಾವಣೆಗೆ ಟಿಕೆಟ್ ಬೇಕೆ?, ಅರ್ಜಿ ಹಾಕಿ
ಬೆಂಗಳೂರು, ಜೂ.27 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಸಿದ್ಧತೆ ಆರಂಭಿಸಿರುವ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಬಯಸುವವರು ಪಕ್ಷಕ್ಕೆ ದೇಣಿಗೆ ನೀಡಬೇಕಾಗಿದೆ.
ಶುಕ್ರವಾರದಿಂದ ಕೆಪಿಸಿಸಿ ಕಚೇರಿಯಲ್ಲಿ ಅರ್ಜಿಗಳನ್ನು ವಿತರಣೆ ಮಾಡಲಾಗುತ್ತಿದೆ. ಅರ್ಜಿಗಳನ್ನು ಸಲ್ಲಿಕೆ ಮಾಡಲು ಜುಲೈ 2 ಕೊನೆಯ ದಿನವಾಗಿದೆ. ಅರ್ಜಿ ಪಡೆದವರು ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿ ಕೆಪಿಸಿಸಿ ಕಚೇರಿಯಲ್ಲಿಯೇ ಸಲ್ಲಿಕೆ ಮಾಡಬಹುದಾಗಿದೆ. [ಬಿಬಿಎಂಪಿ ಚುನಾವಣಾ ವೇಳಾಪಟ್ಟಿ]
ದೇಣೀಗೆ ಕೊಡಿ, ಟಿಕೆಟ್ ಪಡೆಯಿರಿ : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 198 ವಾರ್ಡ್ಗಳಿವೆ. ಪ್ರತಿ ವಾರ್ಡ್ನಿಂದ ಪಕ್ಷದ ಟಿಕೆಟ್ ಬಯಸುವ ಎಷ್ಟು ಜನ ಆಕಾಂಕ್ಷಿಗಳು ಬೇಕಾದರೂ ಅರ್ಜಿ ಸಲ್ಲಿಸಬಹುದಾಗಿದೆ. ಯಾರಿಗೆ ಟಿಕೆಟ್ ನೀಡಬೇಕು? ಎಂಬುದನ್ನು ಪಕ್ಷದ ನಾಯಕರು ನಿರ್ಧರಿಸಲಿದ್ದಾರೆ.

ಪಕ್ಷದ ಟಿಕೆಟ್ ಬಯಸುವವರು 'ಕೆಪಿಸಿಸಿ ಅಧ್ಯಕ್ಷರು, ಕಟ್ಟಡ ನಿಧಿ' ಹೆಸರಲ್ಲಿ ದೇಣಿಗೆ ನೀಡಬೇಕಾಗಿದೆ. ಸಾಮಾನ್ಯ ವರ್ಗದವರು 10,000 ರೂ., ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರು ಮತ್ತು ಮಹಿಳೆಯರು ತಲಾ 5,000 ರೂ. ಗಳ ಡಿಡಿಯನ್ನು ಅರ್ಜಿಯೊಂದಿಗೆ ಸಲ್ಲಿಸಬೇಕಾಗಿದೆ. [ಬಿಬಿಎಂಪಿ ಚುನಾವಣೆಗೆ ತಯಾರಿ ಆರಂಭಿಸಿದ ಎಎಪಿ]
ಚುನಾವಣಾ ಆಯೋಗ ಈಗಾಗಲೇ ಬಿಬಿಎಂಪಿ ಚುನಾವಣೆ ವೇಳಾಪಟ್ಟಿಯನ್ನು ಘೋಷಣೆ ಮಾಡಿದೆ. ಜುಲೈ 28ರಂದು ಮತದಾನ ನಡೆಯಲಿದ್ದು, ಜುಲೈ 30ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಜುಲೈ 8ರಿಂದ ನಾಮಪತ್ರಗಳನ್ನು ಸಲ್ಲಿಸಬಹುದಾಗಿದೆ.












Click it and Unblock the Notifications