ಬೆಂಗಳೂರು: ಫ್ಲೈಓವರ್ಗಳ ಆಡಿಟ್ಗೆ ಬಿಬಿಎಂಪಿ ತೀರ್ಮಾನ
ಬೆಂಗಳೂರು ಜೂನ್ 1: ನಗರದಲ್ಲಿರುವ ಮೇಲ್ಸೇತುವೆಗಳ ಗುಣಮಟ್ಟ ಮತ್ತು ಬಾಳಿಕೆಯ ಬಗ್ಗೆ ಪರಿಶೀಲನೆ ನಡೆಸಲು ಕೊನೆಗೂ ಫ್ಲೈಓವರ್ಗಳ ಆಡಿಟ್ ನಡೆಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತೀರ್ಮಾನಿಸಿದೆ.
ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಿಸಿರುವ ಪೀಣ್ಯ ಮೇಲ್ಸೇತುವೆ, ರೈಲ್ವೆ ಇಲಾಖೆಯೊಂದಿಗಿನ ಸಹಕಾರದೊಂದಿಗೆ ನಿರ್ಮಿಸಿರುವ ಎಂಇಎಸ್ ಮೇಲ್ಸೇತುವೆ, ಬಿಡಿಎ ವತಿಯಿಂದ ನಿರ್ಮಾಣಗೊಂಡಿರುವ ಸುಮ್ಮನಹಳ್ಳಿ ಮೇಲ್ಸೇತುವೆ ಕಳಪೆ ಗುಣಮಟ್ಟದ ಕಾರಣ ಸುದ್ದಿಯಲ್ಲಿತ್ತು.
ಪೀಣ್ಯ ಮೇಲ್ಸೇತುವೆಯಲ್ಲಿ ಈಗಲೂ ದೊಡ್ಡ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಸುಮ್ಮನಹಳ್ಳಿ ಮತ್ತು ಎಂಇಎಸ್ ಮೇಲ್ಸೇತುವೆಯನ್ನು ತಾತ್ಕಾಲಿಕವಾಗಿ ರಿಪೇರಿ ಮಾಡಲಾಗಿದೆ. ಬಿಬಿಎಂಪಿ ನಿರ್ಮಿಸಿರುವ ಮತ್ತು ನಿರ್ವಹಿಸುತ್ತಿರುವ ಮೇಲ್ಸೇತುವೆಗಳ ಗುಣಮಟ್ಟದ ಕುರಿತು ಆಡಿಟ್ ನಡೆಸುವಂತೆ ಪಾಲಿಕೆ ಮೇಲೆ ತೀವ್ರ ಒತ್ತಡವಿದೆ.

ಮೇಲ್ಸೇತುವೆಗಳ ಆಡಿಟ್ಗೆ ತೀರ್ಮಾನ
"ಬೆಂಗಳೂರು ನಗರದ ಎಲ್ಲ ಮೇಲ್ಸೇತುವೆಗಳ ಗುಣಮಟ್ಟದ ಕುರಿತು ಆಡಿಟ್ ನಡೆಸಲು ನಾವು ತೀರ್ಮಾನಿಸಿದ್ದೇವೆ. ಈ ಆಡಿಟ್ನಲ್ಲಿ ಮೇಲ್ಸೇತುವೆಗಳ ಸುರಕ್ಷತೆ, ಸಾಮರ್ಥ್ಯ, ರಚನೆಯ ಗುಣಮಟ್ಟ ಮತ್ತು ನಿರ್ವಹಣೆಯಂತಹ ಅಂಶಗಳನ್ನು ಪರಿಶೀಲಿಸಲಾಗುತ್ತದೆ,'' ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಯೋಜನೆ) ಪಿ. ಎನ್. ರವೀಂದ್ರನಾಥ್ ತಿಳಿಸಿದರು.

ಎರಡನೇ ಬಾರಿಗೆ ಮೇಲ್ಸೇತುವೆಗಳ ಆಡಿಟ್
"ಇದೇ ರೀತಿ 2019-2020ರಲ್ಲಿ ಹೊರಗಿನ ಏಜೆನ್ಸಿ ಮೂಲಕ ಮೇಲ್ಸೇತುವೆಗಳ ಆಡಿಟ್ ಮಾಡಲಾಗಿತ್ತು. ಅವರು 2020ರ ಸೆಪ್ಟೆಂಬರ್ನಲ್ಲಿ ವರದಿ ಸಲ್ಲಿಸಿದ್ದರು. ನಗರದ ಮೇಲ್ಸೇತುವೆಗಳು ಸುರಕ್ಷಿತವಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು. ಆದಾಗ್ಯೂ, ಮಳೆ, ಕಟ್ಟಡ ಕುಸಿತ, ಪೀಣ್ಯ ಮೇಲ್ಸೇತುವೆಯ ಘಟನೆ ಹಿನ್ನೆಲೆಯಲ್ಲಿ ಎರಡನೇ ಬಾರಿಗೆ ನಗರದ ಮೇಲ್ಸೇತುವೆಗಳ ಆಡಿಟ್ಗೆ ನಿರ್ಧರಿಸಲಾಗಿದೆ,'' ಎಂದು ಮಾಹಿತಿ ನೀಡಿದರು.

ನಗರದಲ್ಲಿ ಒಟ್ಟು 66 ಮೇಲ್ಸೇತುವೆಗಳಿವೆ
ಬಿಬಿಎಂಪಿ ಮತ್ತು ಬಿಡಿ ವತಿಯಿಂದ ನಗರದಲ್ಲಿ 66 ಮೇಲ್ಸೇತುವೆಗಳು ಅಥವಾ ಗ್ರೇಡ್ ಸಪರೇಟರ್ಗಳನ್ನು ನಿರ್ಮಿಸಲಾಗಿದೆ. ನಗರದ ಕೆಲವು ಗ್ರೇಡ್ ಸಪರೇಟರ್ಗಳು ಎರಡು ಅಥವಾ ಮೂರು ದಶಕಗಳಷ್ಟು ಹಳೆಯದಾಗಿದೆ. ಆಧ್ಯತೆಯ ಮೇರೆಗೆ ಮೊದಲು ಈ ಗ್ರೇಡ್ ಸಪರೇಟರ್ ಗಳ ಸುರಕ್ಷತಾ ಆಡಿಟ್ ನಡೆಸಬೇಕಿದೆ.

ಎನ್ ಡಿಟಿ ಪರೀಕ್ಷೆಗೆ ಒತ್ತಾಯ
ಫ್ಲೈ ಓವರ್ ಡೈನಾಮಿಕ ಮತ್ತು ಸ್ಟ್ಯಾಟಿಕ್ ಲೋಡ್ ಗಳನ್ನು ಪರೀಕ್ಷಿಸುವ ಎನ್ ಡಿಟಿ ಪರೀಕ್ಷೆ (ವಿನಾಶಕಾರಿಯಲ್ಲದ ಪರೀಕ್ಷೆ)ಗೆ ಬಿಬಿಎಂಪಿ ಮುಂದಾಗಬೇಕು ಮುಂದಾಗಬೇಕು ಎಂದು ತಜ್ಞರು ಒತ್ತಾಯಿಸಿದ್ದಾರೆ. ವಿಚಲನ, ಕಂಪನ ಸೇರಿದಂತೆ ಇತರ ಅಂಶಗಳನ್ನು ನಿರ್ಣಯಿಸಲು ಎನ್ ಡಿಟಿ ಪರೀಕ್ಷೆ ನಡೆಸಲಾಗುತ್ತದೆ. ಇನ್ನೊಂದೆಡೆ ಕೆ. ಆರ್. ಪುರಂ ಮೇಲ್ಸೇತುವೆ ಮತ್ತು ಬಿಇಎಲ್ ಸರ್ಕಲ್ ಮೇಲ್ಸೇತುವೆ ಸೇರಿದಂತೆ ನಗರದ ಕೆಲವು ಮೇಲ್ಸೇತುವೆಯ ಒಳಗಿನಿಂದ ಮರಗಳು ಬೆಳೆಯುತ್ತಿವೆ.

ಗುತ್ತಿಗೆದಾರನ ವಿರುದ್ಧ ಕ್ರಮಕ್ಕೆ ಆಗ್ರಹ
"ಮೇಲ್ಸೇತುವೆಯ ಗುಣಮಟ್ಟ ಕಳಪೆಯಾಗಿದ್ದರೆ, ಅದರ ಹೊಣೆಯನ್ನು ಗುತ್ತಿಗೆದಾರನ ಮೇಲೆ ಹೊರಿಸಬೇಕು. ಅಂತಹ ಗುತ್ತಿಗೆದಾರನ ವಿರುದ್ಧ ಬಿಬಿಎಂಪಿ ಕ್ರಮ ಕೈಗೊಳ್ಳಬೇಕು. ಎಲ್ಲಾ ಸುರಕ್ಷತಾ ಅಂಶಗಳನ್ನು ಅನುಸರಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಪ್ರಮಾಣೀಕೃತ ಪ್ರಯೋಗಾಲಯದಲ್ಲಿ ನಿರ್ಮಾಣ ಸಾಮಾಗ್ರಿಗಳನ್ನು ಪರೀಕ್ಷಿಸುವ ಯಾಂತ್ರಿಕ ವ್ಯವಸ್ಥೆ ಇರಬೇಕು,'' ಎಂದು ತಜ್ಞರು ಒತ್ತಾಯಿಸಿದ್ದಾರೆ.












Click it and Unblock the Notifications