ಬೆಡ್ ಬ್ಲಾಕಿಂಗ್ ಅಕ್ರಮ: ಸಿಸಿಬಿ ತನಿಖೆಯಲ್ಲಿ ಹೆಜ್ಜೆ- ಹೆಜ್ಜೆಗೂ ತೇಜಸ್ವಿಗೆ ಹಿನ್ನೆಡೆ!
ಬೆಂಗಳೂರು, ಮೇ. 27: ಬೆಡ್ ಬ್ಲಾಕಿಂಗ್ ದಂಧೆ ಕುರಿತು ಸಿಸಿಬಿ ಪೊಲೀಸರು ನಡೆಸುತ್ತಿರುವ ತನಿಖೆಯಲ್ಲಿ ಹೆಜ್ಜೆ- ಹೆಜ್ಜೆಗೂ ಸಂಸದ ತೇಜಸ್ವಿ ಸೂರ್ಯಗೆ ಮುಖಭಂಗವಾಗುತ್ತಿದೆ. ಬೆಡ್ ಬ್ಲಾಕಿಂಗ್ ದಂಧೆ ಬಯಲಿಗೆ ಎಳೆದಿದ್ದ ಸಂಸದ ತೇಜಸ್ವಿ ಸೂರ್ಯ ಹದಿನೇಳು ಅನ್ಯ ಕೋಮಿನ ಹೆಸರುಗಳನ್ನು ಬಹಿರಂಗಪಡಿಸಿದ್ದರು. ತೇಜಸ್ವಿ ಸೂರ್ಯ ಸುದ್ದಿಗೋಷ್ಠಿ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿತ್ತು. ಆದರೆ ಸಿಸಿಬಿ ಪೊಲೀಸರು ಈವರೆಗೂ ಹತ್ತಕ್ಕೂ ಹೆಚ್ಚು ಆರೋಪಿಗಳನ್ನು ಬೆಡ್ ಬ್ಲಾಕಿಂಗ್ ಪ್ರಕರಣದಲ್ಲಿ ಬಂಧಿಸಿದ್ದಾರೆ. ಆದರೆ ಈವರೆಗೂ ಸೂರ್ಯ ಹೇಳಿರುವ ಹದಿನೇಳು ಹೆಸರಿನಲ್ಲಿ ಒಬ್ಬರೂ ಬಂಧನಕ್ಕೆ ಒಳಗಾಗಿಲ್ಲ!
ಮತ್ತಿಬ್ಬರು ಬಂಧನ: ಬೆಡ್ ಬ್ಲಾಕಿಂಗ್ ವಲಯ ಕೋವಿಡ್ ವಾರ್ ರೂಮ್ ಸಹಾಯವಾಣಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಯಶವಂತ್ ಹಾಗೂ ವರುಣ್ ಬಂಧಿತ ಆರೋಪಿಗಳು. ವರುಣ್ ದಕ್ಷಿಣ ವಲಯದ ಕೋವಿಡ್ ವಾರ್ ರೂಮ್ನಲ್ಲಿ ಕೆಲಸ ಮಾಡುತ್ತಿದ್ದ. ಯಾರಾದರೂ ಬೆಡ್ ಬೇಕು ಅಂತ ಕರೆ ಮಾಡಿದರೆ, ಬೆಡ್ ಬ್ಲಾಕ್ ಮಾಡಿಕೊಡುತ್ತಿದ್ದ. ಆನಂತರ ತನ್ನ ಸ್ನೇಹಿತ ಯಶವಂತನನ್ನು ರೋಗಿಯನ್ನು ಭೇಟಿ ಮಾಡಿ ಹಣ ಸಂಗ್ರಹ ಮಾಡಿಸುತ್ತಿದ್ದ. ಅನೇಕ ಕೋವಿಡ್ ರೋಗಿಗಳಿಂದ ಹಣ ಸಂಗ್ರಹಿಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಕೊರೊನಾ ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಈವರೆಗೂ ಹತ್ತಕ್ಕೂ ಹೆಚ್ಚು ಮಂದಿ ಬಂಧನಕ್ಕೆ ಒಳಗಾಗಿದ್ದಾರೆ. ಆದರೆ ಸಂಸದ ತೇಜಸ್ವಿ ಸೂರ್ಯ ಉಲ್ಲೇಖಿಸಿದ್ದ ಹದಿನೇಳು ಅನ್ಯ ಕೋಮಿನ ಯುವಕರು ವಿಚಾರಣೆ ಎದುರಿಸಿದರೂ ಸಹ ಒಬ್ಬ ಕೂಡ ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಶಾಮೀಲಾಗಿರುವುದು ಈವರೆಗೂ ಪತ್ತೆಯಾಗಿಲ್ಲ.
ಮುಜುಗರ ಬೆಳವಣಿಗೆ: ಇನ್ನು ಬೆಡ್ ಬ್ಲಾಕಿಂಗ್ ದಂಧೆ ಬಗ್ಗೆ ಭಯಾನಕ ವಿವರಗಳನ್ನು ಸಂಸದ ತೇಜಸ್ವಿ ಸೂರ್ಯ ಸುದ್ದಿಗೋಷ್ಠಿಯಲ್ಲಿ ಬಹಿರಂಗ ಪಡಿಸುತ್ತಿದ್ದ ವೇಳೆ ಜತೆಗಿದ್ದವರು ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ. ವಿಪರ್ಯಾಸವೆಂದರೆ ಸತೀಶ್ ರೆಡ್ಡಿ ಆಪ್ತ ಬಾಬು ಎಂಬಾತ ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಇದಕ್ಕೂ ಮೊದಲು ಬಂಧನಕ್ಕೆ ಒಳಗಾಗಿದ್ದ ಇಬ್ಬರು ಆರೋಪಿತರ ಜತೆ ಸಂಪರ್ಕ ಇಟ್ಟುಕೊಂಡಿದ್ದ ಬಾಬು, ಕೊರೊನಾ ಸೋಂಕಿತ ರೋಗಿಗಳ ವಿವರಗಳನ್ನು ಕಳುಹಿಸಿ ಬೆಡ್ ಬ್ಲಾಕ್ ಮಾಡಿ ಹಣ ಮಾಡುತ್ತಿರುವುದು ಸಿಸಿಬಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಸದ್ಯದ ವರೆಗೂ ಹತ್ತಕ್ಕೂ ಹೆಚ್ಚು ಮಂದಿ ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಬಂಧನಕ್ಕೆ ಒಳಗಾಗಿದ್ದರೂ, ವಿಶೇಷವಾಗಿ ತೇಜಸ್ವಿ ಸೂರ್ಯ ಪ್ರಸ್ತಾಪಿಸಿದವರಲ್ಲಿ ಯಾರೂ ಬಂಧನಕ್ಕೆ ಒಳಗಾಗಿಲ್ಲ.
Recommended Video
ದಕ್ಷಿಣ ಕೋವಿಡ್ ವಾರ್ ರೂಮ್ ನಲ್ಲಿ ಹದಿನೇಳು ಮಂದಿಯ ಅನ್ಯ ಕೋಮಿನ ಯುವಕರ ಹೆಸರು ಹೇಳಿ ಇವರೆಲ್ಲರೂ ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ತೊಡಗಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿಕೆ ನೀಡಿದ್ದರು. ಇದು ಭಾರೀ ಚರ್ಚೆಗೆ ನಾಂದಿ ಹಾಡಿತ್ತು. ತೇಜಸ್ವಿ ಸೂರ್ಯ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು.